ವಿಶ್ವಾಸಮತ: ಕುಮಾರಸ್ವಾಮಿ, ಯಡಿಯೂರಪ್ಪ ದೇವಸ್ಥಾನ ಪ್ರದಕ್ಷಿಣೆ
ಬೆಂಗಳೂರು, ಜುಲೈ 22: ಇಂದು ಸದನದಲ್ಲಿ ವಿಶ್ವಾಸಮತ ಯಾಚನೆ ಆಗಲಿದ್ದು ಗೆಲುವು ತಮ್ಮದಾಗಲಿ ಎಂದು ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ತಮ್ಮ ನಿವಾಸದಲ್ಲಿ ಪೂಜೆ ಸಲ್ಲಿಸಿದ್ದಾರೆ.
ಬಳಿಕ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರನ್ನು ಭೇಟಿ ಮಾಡಿದ್ದಾರೆ. ಇನ್ನೊಂದೆಡೆ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ತಮ್ಮ ನಿವಾಸದಲ್ಲಿ ವಿಶೇಷ ಪೂಜೆ ನೆರವೇರಿಸಿದ್ದಾರೆ.
ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಮಾಡುವುದಾಗಿ ಘೋಷಿಸಿದ ದಿನದಿಂದಲೂ ಒಂದು ಕಡೆ ಕುಮಾರಸ್ವಾಮಿ ಇನ್ನೊಂದು ಕಡೆ ಬಿಎಸ್ ಯಡಿಯೂರಪ್ಪ ಟೆಂಪಲ್ ರನ್ ಮಾಡುತ್ತಲೇ ಇದ್ದಾರೆ. ಇಂದು ಕೂಡ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ತಮ್ಮ ನಿವಾಸದಲ್ಲಿ ಪೂಜೆ ನೆರವೇರಿಸಿ ಬಸವನಗುಡಿಯಲ್ಲಿರುವ ವ್ಯಾಸರಾಜರ ಮಠಕ್ಕೆ ತೆರಳಿ ಪೂಜೆ ಸಲ್ಲಿಸಿದ್ದರೆ, ಇನ್ನೊಂದೆಡೆ ಬಿಎಸ್ ಯಡಿಯೂರಪ್ಪ ತಮ್ಮ ನಿವಾಸದಲ್ಲಿ ಪೂಜೆ ಸಲ್ಲಿಸಿ ಬಳಿಕ ಯಲಹಂಕದ ಅಭಯ ಆಂಜನೇಯ ದೇಗುಲದಲ್ಲಿ ಪೂಜೆ ಸಲ್ಲಿಸಿದ್ದಾರೆ.
ಬಿಜೆಪಿ ಸರ್ಕಾರ ಅಂದುಕೊಂಡಂತೆ ಅಥವಾ ಸಮ್ಮಿಶ್ರ ಸರ್ಕಾರ ಅಂದುಕೊಂಡಂತೆಯೇ ನಡೆಯುತ್ತದೆ ಎನ್ನುವ ಹಾಗಿಲ್ಲ, ಶಾಸಕರನ್ನು ಹಿಡಿದಿಟ್ಟುಕೊಂಡಿದ್ದೇವೆ ಎನ್ನುವ ಖುಷಿಯಲ್ಲಿ ಬಿಜೆಪಿಯವರಿದ್ದರೆ, ಶಾಸಕರನ್ನು ಸದನಕ್ಕೆ ಕರೆದುಕೊಂಡು ಬಂದೇ ಬರುತ್ತೇವೆ ಎನ್ನುವ ವಿಶ್ವಾಸದಲ್ಲಿ ಮೈತ್ರಿ ಸರ್ಕಾರ ಕೂಡ ಇದೆ.
ಸಧ್ಯಕ್ಕೆ ಕಾಂಗ್ರೆಸ್ ಶಾಸಕ ಬಿ ನಾಗೇಂದ್ರ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಗೈರಾಗುವ ಸಾಧ್ಯತೆ ಇದೆ. ಇನ್ನು ಶಾಸಕ ರಾಮಲಿಂಗಾರೆಡ್ಡಿ ಅವರು ರಾಜೀನಾಮೆ ವಾಪಸ್ ಪಡೆದುಕೊಂಡಿದ್ದು, ಮತ್ತೆ ಮೈತ್ರಿ ಪರ ನಿಂತಿದ್ದಾರೆ. ಇನ್ನೇನು ಯಾರ್ಯಾರ ಉಪಾಯ ತಲೆಕೆಳಗಾಗುವುದು ಎಂದು ಕಾದು ನೋಡಬೇಕಿದೆ.
ಸ್ಪೀಕರ್ ರಮೇಶ್ ಕುಮಾರ್ ಏನೇ ಆಗಲಿ ಇಂದು ವಿಶ್ವಾಸಮತ ಯಾಚನೆಗೆ ಇಂದೇ ಅಂತ್ಯ ಹಾಡುವುದಾಗಿ ತಿಳಿಸಿದ್ದಾರೆ. ನಾನು ಎರಡೋ ಮೂರೋ ತಿಂಗಳು ಕಾಲಾವಕಾಶ ತೆಗೆದುಕೊಂಡಿಲ್ಲ, ಎರಡು ದಿನ ತೆಗೆದುಕೊಂಡಿದ್ದೇನೆ. ಅಡ್ವೊಕೇಟ್ ಜನರಲ್ ಬಳಿ ಚರ್ಚಿಸಿ ತೀರ್ಮಾನಕ್ಕೆ ಬಂದಿದ್ದೇನ ಎಂದು ತಿಳಿಸಿದ್ದಾರೆ.