ನಾವು ಗೆಲ್ಲುತ್ತೇವೆಂದು ಚುನಾವಣೆ ಮುಂದೂಡಿದ್ದಾರೆ: ಬಿಜೆಪಿ ಮೇಲೆ ರೇವಣ್ಣ ಕಿಡಿ
ಬೆಂಗಳೂರು, ಜುಲೈ 29: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಾವು ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದಿದ್ದರು. ಆದರೆ, ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಎರಡು ಗಂಟೆಯಲ್ಲಿಯೇ ಚುನಾವಣೆ ಮುಂದೂಡಿದ್ದಾರೆ ಎಂದು ಮಾಜಿ ಸಚಿವ ಎಚ್ ಡಿ ರೇವಣ್ಣ ಆರೋಪಿಸಿದರು.
ಇಂದು ನಿಗದಿಯಾಗಿದ್ದ ಕೆಎಂಎಫ್ ಚುನಾವಣೆಯನ್ನು ಹಠಾತ್ತಾಗಿ ಮುಂದೂಡುವ ಮೂಲಕ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಎಚ್ ಡಿ ರೇವಣ್ಣ ಅವರಿಗೆ ಸರ್ಕಾರ ಶಾಕ್ ನೀಡಿತ್ತು. ಈ ಕುರಿತು ಸುದ್ದಿಗೋಷ್ಠಿ ನಡೆಸಿದ ರೇವಣ್ಣ, ನಾವು ಗೆಲ್ಲುತ್ತೇವೆ ಎಂಬ ಕಾರಣಕ್ಕೆ ಚುನಾವಣೆ ಮುಂದೂಡಿದ್ದಾರೆ ಎಂದು ಆರೋಪಿಸಿದರು.
ಕೆಎಂಎಫ್ ಅಧ್ಯಕ್ಷ ಚುನಾವಣೆ ಮುಂದೂಡಿಕೆ: ಎಚ್.ಡಿ.ರೇವಣ್ಣಗೆ ಶಾಕ್
'ಮೇ 30ರ ಒಳಗೆ ಹಾಲು ಒಕ್ಕೂಟಗಳ ಚುನಾವಣೆ ಮುಗಿಸುವಂತೆ ಸೂಚಿಸಲಾಗಿತ್ತು. ಈಗ ಚುನಾವಣಾ ಆಯೋಗ ಎಲೆಕ್ಷನ್ ನಡೆಸದೆ ಉದ್ದೇಶಪೂರ್ವಕವಾಗಿ ಇಲಾಖೆ ಅಧಿಕಾರಗಳ ಮೇಲೆ ಒತ್ತಡ ಹೇರಿ ಚುನಾವಣೆ ಮುಂದೂಡಿದೆ. ಇದು ಏಕೆಂದು ನನಗೆ ತಿಳಿದಿಲ್ಲ. ಈ ಬಗ್ಗೆ ನಿರ್ದೇಶಕರ ಜತೆ ಚರ್ಚಿಸಿ ಕಾನೂನು ಹೋರಾಟ ಮಾಡುತ್ತೇನೆ' ಎಂದು ಹೇಳಿದ್ದಾರೆ.
ಭೀಮಾನಾಯ್ಕ್ಗೆ ಬಿಟ್ಟುಕೊಡ್ತೀನಿ ಎಂದಿಲ್ಲ
ನಾನು ಯಾರನ್ನೂ ಹೈಜಾಕ್ ಮಾಡಿಲ್ಲ. ಎಲ್ಲ ನಿರ್ದೇಶಕರೂ ಇಲ್ಲಿಯೇ ಇದ್ದಾರೆ. ನಿರ್ದೇಶಕರ ಬೆಂಬಲ ಇರುವವರು ಅಧ್ಯಕ್ಷರಾಗುತ್ತಾರೆ. ಬೆಳಿಗ್ಗೆ 9.40ಕ್ಕೆ ಸರಿಯಾಗಿ ಅರ್ಜಿ ಕೊಟ್ಟಿದ್ದೇನೆ. ನಾನು ಅಧ್ಯಕ್ಷ ಎಂದು ಇಲ್ಲಿ ಬಂದು ಕುಳಿತಿಲ್ಲ. ಮಧ್ಯಾಹ್ನ 1 ಗಂಟೆಗೆ ಸಭೆ ಇತ್ತು ಎಂದು ಇಲ್ಲಿಗೆ ಬಂದಿದ್ದೆ. ನೋಡಿದರೆ ಚುನಾವಣೆಗೆ ತಡೆ ತಂದಿದ್ದಾರೆ ಎಂದರು.
ನಾನೆಂದೂ ಭೀಮಾ ನಾಯ್ಕ್ಗೆ ಅಧ್ಯಕ್ಷಗಿರಿ ಬಿಟ್ಟುಕೊಡ್ತೀನಿ ಅಂದಿಲ್ಲ. ಅವರ ಬಗ್ಗೆ ಟೀಕೆ ಟಿಪ್ಪಣಿ ಮಾಡಲು ಹೋಗುವುದಿಲ್ಲ. ಈಗಲೂ ನನಗೆ ಎಂಟು ನಿರ್ದೇಶಕರ ಬೆಂಬಲ ಇದೆ ಎಂದು ಹೇಳಿದರು.
ಕೆಎಂಎಫ್ ಅಧ್ಯಕ್ಷ ಹುದ್ದೆ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾ ನಾಯಕ್ ಪಾಲು!
ಕುಮಾರಸ್ವಾಮಿಗೂ ಕೆಎಂಎಫ್ಗೂ ಏನು ಸಂಬಂಧ?
ಇಲ್ಲಿ ಕಾಂಗ್ರೆಸ್-ದಳ ಎಂದೇನೂ ಇಲ್ಲ. ಪಕ್ಷಾತೀತವಾಗಿ ಎಲ್ಲ ಸದಸ್ಯರೂ ಒಟ್ಟಾಗಿ ಸೇರಿ ಮಾಡಿರುವುದು. ಹಾಸನ ಡೇರಿಯಲ್ಲಿ 25 ವರ್ಷದಿಂದ ಕೆಲಸ ಮಾಡುತ್ತಿದ್ದೇನೆ. ಕೆಎಂಎಫ್ ವಿಚಾರದಲ್ಲಿ ಸರ್ಕಾರ ಮಧ್ಯೆ ಬರುವಂತಿಲ್ಲ. ಭೀಮಾನಾಯ್ಕ್ ಅವರಿಗೆ ಅಧ್ಯಕ್ಷಗಿರಿ ಕೊಡುತ್ತೇನೆ ಎಂದು ಕುಮಾರಸ್ವಾಮಿ ಮಾತುಕೊಟ್ಟಿದ್ದರು ಎನ್ನುತ್ತಾರೆ. ಕುಮಾರಸ್ವಾಮಿ ಅವರಿಗೂ ಕೆಎಂಎಫ್ಗೂ ಏನು ಸಂಬಂಧ. ನನ್ನ ಸಮ್ಮುಖದಲ್ಲಿ ಯಾವುದೇ ಚರ್ಚೆ ಆಗಿಲ್ಲ. ಅಧ್ಯಕ್ಷ ಸ್ಥಾನ ಬಿಟ್ಟುಕೊಡುವುದಾಗಿ ನಾನೇನಾದರೂ ಮಾತು ಕೊಟ್ಟಿದ್ನಾ? ಎಂದು ಪ್ರಶ್ನಿಸಿದರು.
ರೇವಣ್ಣ ಅವರಿಗೆ ಬೆಂಬಲ
ನಾವ್ಯಾರೂ ಹೈಜಾಕ್ ಆಗಿಲ್ಲ. ನಮ್ಮ ಮನೆಯಲ್ಲಿಯೇ ಇದ್ದೇವೆ. ಯಾರೋ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಪಕ್ಷಾತೀತವಾಗಿ ರೇವಣ್ಣ ಅವರಿಗೆ ಬೆಂಬಲ ಕೊಡುತ್ತೇವೆ. ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಧಾರವಾಡ ಹಾಲು ಉತ್ಪಾದಕರ ಸಂಘದ ನಿರ್ದೇಶಕರು ತಿಳಿಸಿದ್ದಾಗಿ ಸುದ್ದಿವಾಹಿನಿಗಳು ವರದಿ ಮಾಡಿವೆ.
10 ವರ್ಷದ ನಂತರ ಕೆಎಂಎಫ್ ಅಧ್ಯಕ್ಷ ಗಾದಿ ಮೇಲೆ ಎಚ್ ಡಿ ರೇವಣ್ಣ ಕಣ್ಣು
ರೇವಣ್ಣ ಪರ ನಿರ್ದೇಶಕರ ಒಲವು
ಕೆಎಂಎಫ್ನ ಹಾಲಿ ಅಧ್ಯಕ್ಷ ನಾಗರಾಜ್ ಅವರು ಚುನಾವಣೆ ಮುಂದೂಡುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಕೆಎಂಎಫ್ ಅಧ್ಯಕ್ಷ ಸ್ಥಾನದ ಚುನಾವಣೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮುಂದೂಡಿದ್ದಾರೆ. ಇಲ್ಲಿ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರ ಸಂಖ್ಯೆ ಹೆಚ್ಚಿದೆ. ಕಾಂಗ್ರೆಸ್ ಶಾಸಕ ಭೀಮಾನಾಯ್ಕ್ ಮತ್ತು ಎಚ್ ಡಿ ರೇವಣ್ಣ ಅವರ ನಡುವೆ ಪೈಪೋಟಿ ಇದ್ದರೂ, ಕಾಂಗ್ರೆಸ್ ಪರ ನಿರ್ದೇಶಕರು ರೇವಣ್ಣ ಅವರನ್ನೇ ಬೆಂಬಲಿಸುವ ಸಾಧ್ಯತೆ ಇತ್ತು ಎನ್ನಲಾಗಿದೆ.