ಸರ್ಕಾರದ ಬಿಕ್ಕಟ್ಟಿನ ನಡುವೆಯೇ ರಹಸ್ಯವಾಗಿ 1,500 ಕೋಟಿ ರೂ. ಬಿಲ್ ಚುಕ್ತಾ ಮಾಡಿದ ರೇವಣ್ಣ
Recommended Video
ಬೆಂಗಳೂರು, ಜುಲೈ 11: ಅತ್ತ ದೋಸ್ತಿ ಸರ್ಕಾರದ ಎರಡೂ ಪಕ್ಷಗಳ ಶಾಸಕರು ನಾ ಮುಂದು ತಾಮುಂದು ಎಂಬಂತೆ ರಾಜೀನಾಮೆ ಪತ್ರ ಕೈಯಲ್ಲಿ ಹಿಡಿದು ವಿಧಾನಸೌಧದತ್ತ ಧಾವಿಸುತ್ತಿದ್ದರೆ, ಇತ್ತ ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಸರ್ಕಾರಕ್ಕೆ ಅಂತ್ಯ ಖಚಿತ ಎಂಬ ಸುಳಿವಿನೊಂದಿಗೆ ತರಾತುರಿಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ.
ಈ ರಾಜಕೀಯ ಬೆಳವಣಿಗೆಗಳು, ಸರ್ಕಾರದ ಬಿಕ್ಕಟ್ಟಿನ ನಡುವೆಯೇ ರೇವಣ್ಣ ಅವರು ಲೋಕೋಪಯೋಗಿ ಇಲಾಖೆಯಲ್ಲಿನ ಗುತ್ತಿಗೆದಾರರ 1,500 ಕೋಟಿ ಬಾಕಿ ಬಿಲ್ಗಳನ್ನು ಚುಕ್ತಾ ಮಾಡಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲಿ ಇಷ್ಟೆಲ್ಲ ಬೆಳವಣಿಗೆಗಳು ನಡೆಯುತ್ತಿದ್ದರೂ ಎಚ್ ಡಿ ರೇವಣ್ಣ ಅವರು ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಶಾಸಕರು ರಾಜೀನಾಮೆ ನೀಡಿ ಮುಂಬೈ ಸೇರಿದ್ದಾಗ ರೇವಣ್ಣ ಅವರು ಶೃಂಗೇರಿಯಲ್ಲಿ ಪೂಜೆ ಸಲ್ಲಿಸುತ್ತಿದ್ದರು. ಈಗಲೂ ಅವರು ಸಾರ್ವಜನಿಕವಾಗಿ, ರಾಜಕೀಯ ಬಿಕ್ಕಟ್ಟು ಸರಿಪಡಿಸುವ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ.
ಸರ್ಕಾರ ಉಳಿಸಲು ದೇವರ ಮೊರೆ ಹೋದ ರೇವಣ್ಣ
ಈ ನಡುವೆ ಅವರು ಬೆಂಗಳೂರಿನಲ್ಲಿ ಮುಖ್ಯ ಎಂಜಿನಿಯರ್ಗಳು, ಸೂಪರಿಟೆಂಡೆಂಟ್ ಎಂಜಿನಿಯರ್ಗಳು ಮತ್ತು ಗುತ್ತಿಗೆದಾರರೊಂದಿಗೆ ರಹಸ್ಯ ಸಭೆ ನಡೆಸಿ ಭಾರಿ ಮೊತ್ತದ ಬಿಲ್ಗಳನ್ನು ಚುಕ್ತಾ ಮಾಡಿದ್ದಾರೆ ಎಂದು 'ಪ್ರಜಾವಾಣಿ' ವರದಿ ಮಾಡಿದೆ.
ಅತೃಪ್ತ ಶಾಸಕರಿಂದ ಅಸಮಾಧಾನ
ಈ ಬಾಕಿ ಬಿಲ್ ಪಾವತಿಯ ವಿವರಗಳನ್ನೂ ಪತ್ರಿಕೆ ನೀಡಿದೆ. ರೇವಣ್ಣ ಅವರು ಲೋಕೋಪಯೋಗಿ ಇಲಾಖೆಯ ಕಾರ್ಯಗಳನ್ನು ತಮ್ಮ ಇಚ್ಛೆಗೆ ಅನುಸಾರವಾಗಿ ಮಾಡುತ್ತಿದ್ದಾರೆ. ನಮ್ಮನ್ನು ಒಂದು ಮಾತೂ ಕೇಳುತ್ತಿಲ್ಲ. ನಮ್ಮ ಗಮನಕ್ಕೆ ತಾರದೆಯೇ ಕೆಲಸಗಳನ್ನು ಮಾಡುತ್ತಾರೆ. ಅವರ ಕ್ಷೇತ್ರಕ್ಕೆ ಎಲ್ಲ ಯೋಜನೆಗಳನ್ನು ಕೊಂಡೊಯ್ಯುತ್ತಾರೆ. ನಮ್ಮ ಮನವಿಗಳಿಗೆ, ಅಭಿವೃದ್ಧಿ ಕೆಲಸಗಳಿಗೆ ಕಿವಿಗೊಡುವುದಿಲ್ಲ ಎಂಬ ಕಾಂಗ್ರೆಸ್ನ ಅತೃಪ್ತ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದರು.
'ನಾನು ರೋಡ್ ಮಿನಿಸ್ಟರ್. ರೋಡ್ ಬಗ್ಗೆ ಮಾತ್ರ ಕೇಳಿ...'
ಬಾಕಿ ಬಿಲ್ ಚುಕ್ತಾ
ಈಗ ರೇವಣ್ಣ ಅವರು ತರಾತುರಿಯಲ್ಲಿ ಬಾಕಿ ಬಿಲ್ಗಳನ್ನು ಪಾವತಿ ಮಾಡಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ತಮ್ಮ ಇಲಾಖೆಯಿಂದ ಆಗಿರುವ ಬಹುತೇಕ ಕೆಲಸಗಳ ಬಾಕಿ ಬಿಲ್ ಅನ್ನು ಅವರು ಚುಕ್ತಾ ಮಾಡಿದ್ದಾರೆ ಎಂದು ಹೇಳಲಾಗಿದೆ. ಇವು ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ನಡೆಸಿದ ರಸ್ತೆ ಮತ್ತು ಸೇತುವೆ ನಿರ್ಮಾಣ ಕಾಮಗಾರಿಗಳ ಬಿಲ್ಗಳಾಗಿವೆ. ಇದರಿಂದ ಲೋಕೋಪಯೋಗಿ ಇಲಾಖೆಯಲ್ಲಿ ರೇವಣ್ಣ ಅವರ ಕಾರ್ಯವೈಖರಿ ಕುರಿತು ಶಾಸಕರ ಆರೋಪಗಳಿಗೆ ಪುಷ್ಠಿ ದೊರೆತಂತಾಗಿದೆ.
ಎಲ್ಲೆಲ್ಲಿ, ಎಷ್ಟೆಷ್ಟು ಬಿಲ್?
ಧಾರವಾಡ ವಲಯ- 400 ಕೋಟಿ ರೂ., ಸಂಪರ್ಕ ಮತ್ತು ಕಟ್ಟಡ (ದಕ್ಷಿಣ)-400 ಕೋಟಿ ರೂ., ಎಸ್ಎಸ್ಡಿಪಿ- 100 ಕೋಟಿ ರೂ., ರಾಷ್ಟ್ರೀಯ ಹೆದ್ದಾರಿ ವಿಭಾಗ- 100 ಕೋಟಿ ರೂ., ಕೆಆರ್ಡಿಸಿಎಲ್- 100 ಕೋಟಿ ರೂ., ಕೆಶಿಪ್-100 ಕೋಟಿ ರೂ. ಮೊತ್ತದ ಬಿಲ್ಗಳನ್ನು ಚುಕ್ತಾ ಮಾಡಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ದೋಸ್ತಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕದ ಅವಧಿಯಲ್ಲಿ ಇದುವರೆಗೆ ನಡೆದ ರಸ್ತೆ ಮತ್ತು ಸೇತುವೆ ಕಾಮಗಾರಿಗಳ ಬಿಲ್ಗಳನ್ನು ಪಾವತಿಸಲಾಗಿದೆ.
ಕಾಂಗ್ರೆಸ್ಗೆ ಶಾಕ್ ನೀಡಿದ 'ದಿಢೀರ್ ರೆಬೆಲ್' ಮುನಿರತ್ನ ಹೇಳಿದ್ದೇನು?
ಸಾವಿರ ಕೋಟಿ ಮೊತ್ತದ ಕಾಮಗಾರಿಗೆ ಅನುಮತಿ
ಇದಕ್ಕೂ ಮೊದಲು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮತ್ತು ಜಲಸಂಪನ್ಮೂಲಕ ಡಿಕೆ ಶಿವಕುಮಾರ್ ಅಧ್ಯಕ್ಷತೆಯಲ್ಲಿ ವಿವಿಧ ನಿಗಮ ಮಂಡಳಿಗಳ ಸಭೆ ನಡೆಸಿ ಸಾವಿರಾರು ಕೋಟಿ ರೂಪಾಯಿ ಮೊತ್ತದ ಕಾಮಗಾರಿಗಳಿಗೆ ಅನುಮತಿ ನೀಡಿದ್ದರು ಎಂದು ವರದಿಯಾಗಿದೆ. ಕೃಷ್ಣಾ ಭಾಗ್ಯ ಜಲ ನಿಗಮ, ಕಾವೇರಿ ನೀರಾವರಿ ನಿಗಮ ಮತ್ತು ಕರ್ನಾಟಕ ನೀರಾವರಿ ನಿಗಮಗಳ ನಿರ್ದೇಶಕರ ಮಂಡಳಿ ಸಭೆ ನಡೆಸಿದ್ದರು. ಇಲ್ಲಿ 5 ಸಾವಿರ ಕೋಟಿಗೂ ಅಧಿಕ ಮೊತ್ತದ ಕಾಮಗಾರಿಗಳಿಗೆ ಒಪ್ಪಿಗೆ ನೀಡಲಾಗಿದೆ.
ರೇವಣ್ಣ ಮೇಲೆ ಕಿಡಿ ಕಾರಿದ್ದ ಮುನಿರತ್ನ
ಬೆಂಗಳೂರು ಅಭಿವೃದ್ಧಿಗೆ 24 ಸಾವಿರ ಕೋಟಿ ನೀಡಿರುವುದಾಗಿ ಹೇಳುತ್ತಿದ್ದಾರೆ. ಎಲ್ಲಿ ಯಾವ ಕ್ಷೇತ್ರಕ್ಕೆ ಕೊಟ್ಟಿದ್ದಾರೆ ಎನ್ನುವುದು ಗೊತ್ತಿಲ್ಲ. ನಿಮ್ಮ ಕ್ಷೇತ್ರಕ್ಕೆ ಈ ಕೆಲಸ ಅವಶ್ಯಕತೆ ಇದೆಯಾ ಎಂದು ನಮ್ಮನ್ನು ಕೇಳಿಲ್ಲ. ಯಾರು ಕೇಳುವವರು? ರೇವಣ್ಣ 24 ಸಾವಿರ ಕೊಟಿ ಡಿಪಿಎಆರ್ ಮಾಡುತ್ತಾರೆ. ಅವರನ್ನು ಕೇಳಿದರೂ ನಮ್ಮ ಕೆಲಸ ಆಗುತ್ತಿಲ್ಲ. ಅವರ ಜಿಲ್ಲೆಯನ್ನು, ಕ್ಷೇತ್ರವನ್ನು ಅಭಿವೃದ್ಧಿ ಮಾಡಲಿ. ಅದಕ್ಕೆ ಆಕ್ಷೇಪವಿಲ್ಲ. ಆದರೆ ನನ್ನ ಜೊತೆ ಮಾತನಾಡೋಣ ಎಂದು ಒಂದು ದಿನವೂ ಕರೆದಿಲ್ಲ ಎಂದು ಮುನಿರತ್ನ ಅವರು ರೇವಣ್ಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ರೇವಣ್ಣ ಅವರೇ ಕಾರಣ- ಎಂಟಿಬಿ
ರಾಜ್ಯ ರಾಜಕೀಯದಲ್ಲಿನ ಈ ಎಲ್ಲ ಬೆಳವಣಿಗೆಗಳಿಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮತ್ತು ಸಚಿವ ಎಚ್ ಡಿ ರೇವಣ್ಣ ಅವರೇ ಕಾರಣ ಎಂದು ವಸತಿ ಸಚಿವ ಎಂಟಿಬಿ ನಾಗರಾಜ್ ಆರೋಪಿಸಿದ್ದರು. ಶಾಸಕರಿಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಜೆಡಿಎಸ್ ಶಾಸಕರಿಗೆ ಮಾತ್ರ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ರೇವಣ್ಣ ಅವರು ಎಲ್ಲ ಇಲಾಖೆಗಳಲ್ಲಿ ಮೂಗು ತೂರಿಸುತ್ತಿದ್ದಾರೆ ಎಂದು ದೂರಿದ್ದರು.