ಗ್ರಾಮೀಣ ಬ್ಯಾಂಕ್ ಗಳಲ್ಲಿ ಕನ್ನಡಿಗರಿಗೆ ಆದ್ಯತೆ: ಜೇಟ್ಲಿಗೆ ಎಚ್ ಡಿಕೆ ಪತ್ರ
ಬೆಂಗಳೂರು, ಸೆಪ್ಟೆಂಬರ್ 15: ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆಯ (ಐಬಿಪಿಎಸ್) ಹೊಸ ನಿಯಮಗಳಿಂದಾಗಿ ಗ್ರಾಮೀಣ ಬ್ಯಾಂಕಿಂಗ್ ವಲಯದಲ್ಲಿ ಉದ್ಯೋಗ ವಂಚಿತರಾಗಿರುವ ರಾಜ್ಯದ ಅಭ್ಯರ್ಥಿಗಳ ಬೆಂಬಲಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ನಿಂತಿದ್ದಾರೆ.
ಈ ಸಮಸ್ಯೆಯ ಬಗ್ಗೆ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿಗೆ ಪತ್ರ ಬರೆದಿರುವ ಅವರು, ಇತ್ತೀಚೆಗೆ ನಡೆದ ಗ್ರಾಮೀಣ ಬ್ಯಾಂಕ್ ನೇಮಕಾತಿಗಳ ಪರೀಕ್ಷೆಯಲ್ಲಿ ಹಿಂದಿ ಅಥವಾ ಇಂಗ್ಲೀಷ್ ಭಾಷೆಯಲ್ಲಿ ಮಾತ್ರವೇ ಪರೀಕ್ಷೆ ಬರೆಯಲು ಅವಕಾಶ ಮಾಡಿರುವ ಐಬಿಪಿಎಸ್ ನ ಹೊಸ ನಿಯಮ ಹೇಗೆ ಸಾಮಾಜಿಕವಾಗಿ ಹಿಂದುಳಿದ ಪ್ರದೇಶಗಳ ಸೂಕ್ತ ಅಭ್ಯರ್ಥಿಗಳಿಗೆ ಉದ್ಯೋಗಗಳಿಂದ ವಂಚಿತರನ್ನಾಗಿ ಮಾಡುತ್ತದೆ ಎಂಬುದನ್ನು ಎಳೆಎಳೆಯಾಗಿ ವಿವರಿಸಿದ್ದಾರೆ ಅವರು.
ಬ್ಯಾಂಕ್ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಆದ್ಯತೆ: ಕರವೇ ಆಗ್ರಹ
ಇತ್ತೀಚೆಗೆ, ಕರ್ನಾಟಕದಲ್ಲಿರುವ ಗ್ರಾಮೀಣ ಬ್ಯಾಂಕ್ ನಲ್ಲಿನ ವಿವಿಧ ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗಿತ್ತು. ಈವರೆಗೆ, ಪ್ರಾಂತೀಯ ಭಾಷೆಗಳಲ್ಲಿ ಗ್ರಾಮೀಣ ಬ್ಯಾಂಕ್ ಗಳ ಪರೀಕ್ಷೆಯನ್ನು ಬರೆಯಬಹುದಾಗಿದ್ದ ಅಭ್ಯರ್ಥಿಗಳಿಗೆ ಇದೇ ಮೊದಲ ಬಾರಿಗೆ ಹಿಂದಿ ಅಥವಾ ಇಂಗ್ಲೀಷ್ ಭಾಷೆಯಲ್ಲಿ ಮಾತ್ರ ಪರೀಕ್ಷೆ ಬರೆಯುವಂತೆ ನಿಯಮಾವಳಿಗಳನ್ನು ತಿದ್ದುಪಡಿ ಮಾಡಲಾಗಿತ್ತು.
ಇದು ರಾಜ್ಯಾದ್ಯಂತ ಭಾರೀ ಪ್ರತಿಭಟನೆಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರು ಈ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಅವರು ಜೇಟ್ಲಿ ಅವರಿಗೆ ಸಮಸ್ಯೆ ಕುರಿತಂತೆ ವಿವರಣೆ ನೀಡಿರುವ ಅಂಶಗಳು ಈ ರೀತಿಯಲ್ಲಿವೆ.
ಸ್ಥಳೀಯ ಭಾಷೆಯ ಅನಾದರಣೆ
ಹಿಂದಿ ಅಥವಾ ಇಂಗ್ಲೀಷ್ ನಲ್ಲಿ ಮಾತ್ರ ಗ್ರಾಮೀಣ ಬ್ಯಾಂಕ್ ಗಳ ಪರೀಕ್ಷೆಗಳನ್ನು ಬರೆಯಲು ಅನುವು ಮಾಡಿಕೊಡುವುದರಿಂದ ಯಾವುದೇ ರಾಜ್ಯಗಳ ಗ್ರಾಮೀಣ ಭಾಗಗಳಲ್ಲಿರುವ ಅರ್ಹ ಅಭ್ಯರ್ಥಿಗಳು ಈ ಬ್ಯಾಂಕ್ ಗಳಲ್ಲಿ ಉದ್ಯೋಗ ಪಡೆಯುವ ಅವಕಾಶದಿಂದ ವಂಚಿತವಾಗಲಿದ್ದಾರೆ. ಅಲ್ಲದೆ, ಸ್ಥಳೀಯ ಭಾಷೆಯಲ್ಲಿ ಮಾತ್ರವೇ ಅವರು ಸಿದ್ದಹಸ್ತರಾಗಿರುವ ಹಿನ್ನೆಲೆಯಲ್ಲಿ ಅವರನ್ನು ಹಿಂದಿ ಅಥವಾ ಇಂಗ್ಲೀಷ್ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಬಲವಂತಪಡಿಸಿದಂತಾಗುತ್ತದೆ. ಇದು ಸಂವಿಧಾನವು ಭಾಷಾ ಸ್ವಾತಂತ್ರ್ಯದ ಬಗ್ಗೆ ನೀಡಿರುವ ಸ್ವಾತಂತ್ರ್ಯದ ಸ್ಪಷ್ಟ ಉಲ್ಲಂಘನೆ.
ಸಂವಿಧಾನದ ಸ್ಪಷ್ಟ ಉಲ್ಲಂಘನೆ
ಕೇವಲ ಹಿಂದಿ ಅಥವಾ ಇಂಗ್ಲೀಷ್ ನಲ್ಲೇ ಪರೀಕ್ಷೆ ಬರೆಯಬೇಕೆಂದು ಕಟ್ಟಪ್ಪಣೆ ವಿಧಿಸುವುದರಿಂದ ಬಹುತೇಕ ಉದ್ಯೋಗಗಳನ್ನು ಹಿಂದಿ ಭಾಷಿಗರೇ ಪಡೆದುಕೊಳ್ಳುವ ಸಂಭವ ಹೆಚ್ಚಿರುತ್ತದೆ. ಇದರಿಂದ, ಅರ್ಹತೆಯಿದ್ದೂ ಉದ್ಯೋಗ ಪಡೆಯುವಲ್ಲಿ ಗ್ರಾಮೀಣ ಅಭ್ಯರ್ಥಿಗಳು ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತದೆ. ಕನ್ನಡಿಗರನ್ನು ಹಿಂದಿಕ್ಕಿ ಹಿಂದಿ ಭಾಷಿಗರೇ ಉದ್ಯೋಗಗಳನ್ನು ಹೆಚ್ಚಾಗಿ ಪಡೆದುಕೊಂಡರೆ ಇದು ಸಂವಿಧಾನದ ಮೂಲ ಉದ್ದೇಶಗಳಿಗೆ ಹೊಡೆತ ಕೊಟ್ಟಂತೆ.
ಐಬಿಪಿಎಸ್ ನಲ್ಲಿ ಇದು ತಿರುಗುಮುರುಗು
ಐಎಎಸ್, ಐಪಿಎಸ್ , ಐಎಫ್ಎಸ್ ನಂಥ ರಾಷ್ಟ್ರಮಟ್ಟದ ಪರೀಕ್ಷೆಗಳಲ್ಲೇ ಇತ್ತೀಚೆಗೆ ಸ್ಥಳೀಯ ಭಾಷೆಗಳಲ್ಲಿ ಪರೀಕ್ಷೆ ಬರೆಯುವಂಥ ಅವಕಾಶ ಸಿಗುತ್ತಿರುವಾಗ, ಈ ಹಿಂದೆ ಇಂಥ ಸೌಕರ್ಯವನ್ನೂ ಐಬಿಪಿಎಸ್ ಕಸಿದುಕೊಂಡಿರುವುದು ಖೇದಕರವಾಗಿದೆ.
ಕುಮಾರಣ್ಣ ಟೆಕ್ನಿಕಲ್ ಪ್ರಶ್ನೆ
ಇನ್ನು, ಗ್ರಾಮೀಣ ಬ್ಯಾಂಕುಗಳಲ್ಲಿ ಅಧಿಕಾರಿಗಳಾಗಿ ಬರುವವರು ಸ್ಥಳೀಯ ಭಾಷೆ, ಸಂಸ್ಕೃತಿ ಗೊತ್ತಿಲ್ಲದಿದ್ದರೆ ಆಡಳಿತವನ್ನಾದರೂ ಹೇಗೆ ನಡೆಸಿಯಾರು? ಜನರ ಕುಂದುಕೊರತೆಗಳನ್ನು ಹೇಗೆ ನಿಭಾಯಿಸಿಯಾರು ಎಂಬುದನ್ನು ಖಂಡಿತವಾಗಿಯೂ ಯೋಚಿಸಬೇಕಿದೆ. ಹಾಗಾಗಿ, ಕರ್ನಾಟಕದಲ್ಲಿರುವ ಗ್ರಾಮೀಣ ಬ್ಯಾಂಕ್ ಗಳಿಗೆ ಕನ್ನಡಿಗರೇ ಹೆಚ್ಚಾಗಿ ನೇಮಕವಾಗಬೇಕು. ಇದಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಐಬಿಪಿಎಸ್ ನ ನಿಯಮಗಳ ತಿದ್ದುಪಡಿಗೆ ತಡೆ ನೀಡಿ, ಈ ಹಿಂದಿದ್ದಂತೆ ಸ್ಥಳೀಯ ಭಾಷೆಗಳಲ್ಲೇ ಪರೀಕ್ಷೆ ಬರೆಯುವಂಥ ನಿಯಮವು ಪುನರ್ ಜಾರಿಯಾಗಬೇಕು ಎಂದು ಅವರು ತಿಳಿಸಿದ್ದಾರೆ.