ಕ್ರೈಸ್ತ ಮಿಷನರಿಗಳ ಆಸ್ತಿ ಗೃಹ ಸಚಿವರಿಂದ ಲೂಟಿ
ಬೆಂಗಳೂರು, ಸೆ 20: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತೆ ರಾಜಕೀಯ ಸನ್ಯಾಸ ಮತ್ತು ದಾಖಲೆ ಬಿಡುಗಡೆಯ ಬಗ್ಗೆ ಮಾತನ್ನಾಡಿದ್ದಾರೆ. ಗೃಹ ಸಚಿವ ಕೆ ಜೆ ಜಾರ್ಜ್ ಅವರು ಸ್ವತಃ ತಮ್ಮ ಸಮುದಾಯಕ್ಕೆ ಮೋಸ ಮಾಡಿದ್ದಾರೆ.
ನನ್ನ ಬಗ್ಗೆ ಮಾತನಾಡುವ ಮುನ್ನ ಗೃಹ ಸಚಿವರು ತಾನು ನಡೆದುಕೊಂಡು ಬಂದ ದಾರಿಯನ್ನು ಒಮ್ಮೆ ನೋಡಿಕೊಳ್ಳಲಿ. ಕಪ್ಪ ಕಾಣಿಕೆಯ ಬಗ್ಗೆ ಮಾತನಾಡುವ ಅವರು ಅದೆಷ್ಟು ಕ್ರೈಸ್ತ ಮಿಷನರಿಗಳ ಆಸ್ತಿಯನ್ನು ಲಪಟಾಯಿಸಿದರು ಎನ್ನುವುದನ್ನು ಜನತೆಗೆ ತಿಳಿಸಲಿ.
ನಾನು ಪ್ರಾಮಾಣಿಕತೆಯಿಂದ ರಾಜಕೀಯ ಮಾಡಿದವನು. ರಾಜ್ಯದಲ್ಲಿ ಕಪ್ಪ ಕಾಣಿಕೆ ಸಂಸ್ಕ್ರುತಿಯನ್ನು ಶುರು ಮಾಡಿದವರು ಕುಮಾರಸ್ವಾಮಿ ಎಂದು ನನ್ನ ಮೇಲೆ ಜಾರ್ಜ್ ಆರೋಪ ಹೊರಿಸುತ್ತಾರೆ. ಇದರಿಂದ ನನಗೆ ನೋವಾಗಿದೆ ಎಂದು ಕುಮಾರಸ್ವಾಮಿ ಬೇಸರ ವ್ಯಕ್ತ ಪಡಿಸಿದ್ದಾರೆ.
ಅವರ ಸಮುದಾಯಕ್ಕೆ ಸಂಬಂಧ ಪಟ್ಟ ಆಸ್ತಿಯನ್ನು ಲಪಾಟಯಿಸಿದ್ದಕ್ಕೆ ನನ್ನಲ್ಲಿ ಪುರಾವೆಗಳಿವೆ. ಆ ಎಲ್ಲಾ ದಾಖಲೆಗಳನ್ನು ಸದ್ಯದಲ್ಲೇ ಮಾಧ್ಯಮದ ಮುಂದಿಡುತ್ತೇನೆ ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ರಾಜಕೀಯದಲ್ಲಿ ಆರೋಪ, ಪ್ರತ್ಯಾರೋಪ ಸಹಜ. ಆದರೆ ನನ್ನ ಮೇಲೆ ಗುರುತರ ಆರೋಪ ಮಾಡುವ ಮುನ್ನ ಜಾರ್ಜ್ ಪರಿಶೀಲಿಸಿ ಹೇಳಿಕೆ ನೀಡಬೇಕಿತ್ತು. ಅವರ ಸುಳ್ಳು ಆರೋಪದಿಂದಾಗಿ ಜನತೆಗೆ ತಪ್ಪು ಮಾಹಿತಿ ಹೋಗುವದನ್ನು ನಾನು ಸಹಿಸುವುದಿಲ್ಲ ಎಂದು ಕುಮಾರಸ್ವಾಮಿ ಗುಡುಗಿದ್ದಾರೆ.