ಬಿಜೆಪಿ ಕೂಡ ಸಾಂದರ್ಭಿಕ ಶಿಶು: ಕುಮಾರಸ್ವಾಮಿ ಅಭಿಪ್ರಾಯ
ಬೆಂಗಳೂರು, ಜುಲೈ 29: ಸಮ್ಮಿಶ್ರ ಸರ್ಕಾರ ರಚನೆಯಾದ ಸಂದರ್ಭದಲ್ಲಿ ತಾವು 'ಸಾಂದರ್ಭಿಕ ಶಿಶು' ಎಂದು ಹೇಳಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು 'ಬಿಜೆಪಿ ಸರ್ಕಾರ ಕೂಡ ಸಾಂದರ್ಭಿಕ ಶಿಶು ಎಂದೆನಿಸುತ್ತಿದೆ ಎಂದಿದ್ದಾರೆ.
ನಗರದಲ್ಲಿ ಸೋಮವಾರ ಮಾತನಾಡಿದ ಅವರು, ಜನಾದೇಶವಿಲ್ಲದೆಯೂ ಬಿಜೆಪಿ ಅಧಿಕಾರ ಪಡೆದುಕೊಂಡಿದೆ. ಅಕ್ರಮವಾಗಿ ಮತ್ತು ಸಂವಿಧಾನ ಬಾಹಿರವಾಗಿ ಅದು ಸರ್ಕಾರ ರಚಿಸಿದೆ ಎಂದು ಆರೋಪಿಸಿದರು.
ಶಾಸಕರ ಅನರ್ಹತೆಯ ಹಿಂದೆ ಯಾವುದೇ ಪಿತೂರಿ ಇಲ್ಲ ಎಂದು ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಒತ್ತಡದಿಂದ ಸ್ಪೀಕರ್ ಅವರು ರಾಜೀನಾಮೆ ಅರ್ಜಿಯನ್ನು ಪರಿಗಣಿಸದೆ ಅನರ್ಹತೆಯ ನಿರ್ಧಾರ ಪ್ರಕಟಿಸಿದ್ದಾರೆ ಎಂಬ ಆರೋಪಗಳಿಗೆ ಸ್ಪಷ್ಟನೆ ನೀಡಿದರು.
LIVE: ಸ್ಪೀಕರ್ ಸ್ಥಾನಕ್ಕೆ ರಮೇಶ್ ಕುಮಾರ್ ರಾಜೀನಾಮೆ
ಅನರ್ಹಗೊಂಡ ಶಾಸಕರಂತೆ ಇನ್ಯಾರೂ ಮಾಡಬಾರದು. ಈ ಕಾರಣದಿಂದ ಸ್ಪೀಕರ್ ರಮೇಶ್ ಕುಮಾರ್ ಅವರು ಒಳ್ಳೆಯ ತೀರ್ಮಾನ ಮಾಡಿದ್ದಾರೆ ಎಂದು ಹೇಳಿದರು.
ಕೇಂದ್ರ ನಾಯಕರಿಂದಾಗಿ ಅಧಿಕಾರಕ್ಕೆ ಬಂದಿಲ್ಲ
ಅಧಿವೇಶನದಲ್ಲಿ ಮಾತನಾಡಿದ ಅವರು, 'ನರೇಂದ್ರ ಮೋದಿ, ಜೆಪಿ ನಡ್ಡಾ ಅಥವಾ ಬಿಜೆಪಿಯ ಬೇರೆ ಯಾವುದೇ ಕೇಂದ್ರ ನಾಯಕರಿಂದಾಗಿ ನೀವು ಅಧಿಕಾರಕ್ಕೆ ಬಂದಿಲ್ಲ. ಕುತಂತ್ರದಿಂದ ಅಧಿಕಾರ ಹಿಡಿದಿದ್ದೀರಿ. ರಾಜೀನಾಮೆ ಕೊಡಿಸಲು ಮಾಡುತ್ತಿರುವ ಹುನ್ನಾರವನ್ನು ಈಗಲಾದರೂ ನಿಲ್ಲಿಸಿ. ಈಗ ಅಧಿಕಾರ ಸಿಕ್ಕಿದೆ ನಡೆಸಿ. ನಾವೇನೂ ನಿಮ್ಮ ಸಂಖ್ಯೆಯನ್ನು 100ಕ್ಕೆ ಇಳಿಸಿ ಮತ್ತೆ ನಿಮ್ಮನ್ನು ಅಧಿಕಾರದಿಂದ ಇಳಿವುದಿಲ್ಲ. ಯಾವ ರೀತಿ ಸರ್ಕಾರ ನಡೆಸುತ್ತೀರಿ ನೋಡೋಣ' ಎಂದು ಬಿಜೆಪಿಗೆ ಸವಾಲು ಹಾಕಿದರು.
ಯಡಿಯೂರಪ್ಪ ಜನಾದೇಶದಿಂದ ಮುಖ್ಯಮಂತ್ರಿಯಾಗಿಲ್ಲ: ಸಿದ್ದರಾಮಯ್ಯ
ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ
ನಿಮ್ಮ ಅವ್ಯವಹಾರಗಳಿಗೆ ಬೆಂಬಲ ಕೊಡುವುದಿಲ್ಲ, ನಾಡಿನ ಆಸ್ತಿಗಳನ್ನು ಉಳಿಸುವುದರಲ್ಲಿ, ನಾಡನ್ನು ಕಟ್ಟುವ ವಿಷಯದಲ್ಲಿ ಬೆಂಬಲ ಕೊಡುತ್ತೇವೆ. ಅಕ್ರಮ ನಡೆದಾಗ ಜನರ ಪರವಾಗಿ ನಿಲ್ಲುತ್ತೇವೆ. ರಾಜಕೀಯ ಜೀವನ, ಅಧಿಕಾರದಿಂದ ನಿರ್ಗಮಿಸುವಂತಹ ಸಮಯದಲ್ಲಿ, ಋಣಮುಕ್ತ ಕಾಯ್ದೆಗೆ ರಾಷ್ಟ್ರಪತಿ ಅಂಕಿತ ಹಾಕಿದ್ದಾರೆ. ನನಗೆ ನನ್ನ ಕೆಲಸದ ಮೇಲೆ ತೃಪ್ತಿ ಇದೆ. ಹಲವಾರು ಅಡಚಣೆಗಳ ಮಧ್ಯೆ 14 ತಿಂಗಳಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ನಮ್ಮದು ಪಾಪದ ಸರ್ಕಾರ ಎಂದು ಹೇಳಿದ್ದಾರೆ. ಆ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚೆ ಮಾಡುತ್ತೇವೆ. ಮೈತ್ರಿ ಸರ್ಕಾರದಲ್ಲಿ ನನ್ನ ಇತಿಮಿತಿಯಲ್ಲಿ ಅಭಿವೃದ್ದಿ ಕೆಲಸಗಳನ್ನು ಮಾಡಿದ್ದೇನೆ ಎಂದರು.
ಇದೆಲ್ಲವೂ ಇತಿಹಾಸ ಪುಟದಲ್ಲಿವೆ
ನಾಡಿನ ಜನತೆ ತಿಳಿವಳಿಕೆ ಇಲ್ಲದಿರುವವರು ಅಲ್ಲ. ಅಧಿಕಾರ ಯಾವತ್ತೂ ಶಾಶ್ವತ ಅಲ್ಲ.ಹಲವಾರು ಜನ ಅಧಿಕಾರಕ್ಕೆ ಬಂದಿದ್ದಾರೆ, ಹೋಗಿದ್ದಾರೆ. ಆ ಕ್ಷಣದಲ್ಲಿ ಸಿಕ್ಕಿ ಅವಕಾಶದಲ್ಲಿ ನಾವು ಮಾಡಿದ ಕೆಲಸ ನಮ್ಮನ್ನು ಕಾಯುತ್ತದೆ. ಕುತಂತ್ರ ರಾಜಕಾರಣದಿಂದ ಅಧಿಕಾರ ಹಿಡಿದಿದ್ದೀರಿ. ಬೆಳಿಗ್ಗೆ 5 ಗಂಟೆಗೆ ನೀವು ಪಕ್ಷೇತರ ಶಾಸಕರನ್ನು ಅನರ್ಹರನ್ನಾಗಿಸಿದ್ದಿರಿ. ಆಗಲೂ ನಿಮಗೆ ಬಹುಮತ ಇರಲಿಲ್ಲ. ಅಂದು ಆರು ಮಂದಿ ಪಕ್ಷೇತರ ಶಾಸಕರಿಂದ ನೀವು ಮುಖ್ಯಮಂತ್ರಿ ಆಗಿದ್ದಿರಿ. ಆದರೆ, ನಂತರ ಅವರನ್ನು ಯಾವ ಸ್ಥಿತಿಗೆ ತಂದು ನಿಲ್ಲಿಸಿದ್ದಿರಿ? ಇದೆಲ್ಲವೂ ಇತಿಹಾಸದ ಪುಟಗಳಲ್ಲಿವೆ. ನಮ್ಮ ಅಧ್ಯಕ್ಷರು ಯಾವುದೇ ತರಾತುರಿಯ ನಿರ್ಧಾರ ಮಾಡಲು ಹೋಗಲಿಲ್ಲ ಎಂದು ಹೇಳಿದರು.
ಅನರ್ಹ ಶಾಸಕರನ್ನು ತಬ್ಬಲಿ ಮಾಡಬೇಡಿ: ಡಿಕೆ ಶಿವಕುಮಾರ್ ವ್ಯಂಗ್ಯ
ಈ ಜಾಗದಿಂದಾದರೂ ಸತ್ಯಾಂಶ ತಿಳಿಸಿ
ನನ್ನ ಆತ್ಮಕ್ಕೆ ನಾನು ಉತ್ತರಕೊಡಬೇಕು, ಈ 14 ತಿಂಗಳ ಅವಧಿಯಲ್ಲಿ ಪ್ರಾಮಾಣಿಕ ಸೇವೆ ಮಾಡಿದ್ದೇನೆ, ನಾವೆಲ್ಲರೂ ಒಂದಲ್ಲಾ ಒಂದು ದಿನ ಉತ್ತರ ಕೊಡಬೇಕಾಗುತ್ತದೆ ಎನ್ನುವುದನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದೇನೆ. 14 ತಿಂಗಳಲ್ಲಿ ನೀವು ಬಳಸಿದ ಪದಗಳು ರೆಕಾರ್ಡ್ ಆಗಿದೆ. ನಾಡಿನ ರೈತರ ಸಾಲ ಮನ್ನಾಗೆ ಸಂಬಂಧಿಸಿದಂತೆ ತೀರ್ಮಾನ ತೆಗೆದುಕೊಂಡಿದ್ದೇನೆ ಎನ್ನುವ ಕಡತವನ್ನು ನೀವು ನೋಡಬಹುದು. ಸತ್ಯಾಂಶವನ್ನು ಆ ಜಾಗದಲ್ಲಾದರೂ ಕೂತು ಜನತೆಗೆ ತಿಳಿಸಿ ಎಂದು ಆಗ್ರಹಿಸಿದರು.
ಸದನದ ಮುಂದೆ ಇಟ್ಟರೆ ಅಭಿನಂದಿಸುತ್ತೇನೆ
ಮೈತ್ರಿ ಸರ್ಕಾರದಲ್ಲಿ ಯಾವ ರೀತಿ ಆಡಳಿತ ಯಂತ್ರ ಕುಸಿದಿತ್ತು ಎನ್ನುವ ಮಾಹಿತಿ ಸದನದ ಮುಂದೆ ಇಟ್ಟರೆ ಅವರನ್ನು ಅಭಿನಂದಿಸುತ್ತೇನೆ. 37 ಶಾಸಕರನ್ನು ಹೊಂದಿರುವ ಕುಮಾರಸ್ವಾಮಿ ಅವರು ಪಾಪದ ದಿನಗಳನ್ನು ನೋಡಿದ್ದೇವೆ ಎಂದಿದ್ದೀರಿ. ಇವತ್ತು ರಾಜ್ಯದಲ್ಲಿ ಪವಿತ್ರ ದಿನಗಳು ಆರಂಭವಾಗುತ್ತಿದೆ ಎಂದು ಹೇಳುತ್ತೀರಿ. ಬಹಳ ಸಂತೋಷ. ಹಲವಾರು ಬಗೆಯ ಅಡಚಣೆಗಳ ನಡುವೆಯೂ ಮೈತ್ರಿ ಸರ್ಕಾರದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ ಸಂತೋಷ ನನ್ನ ಆತ್ಮಸಾಕ್ಷಿಗೆ ಇದೆ ಎಂದು ಹೇಳಿದರು.