ಹುಬ್ಬಳ್ಳಿ ಗಲಾಟೆ: ಪ್ರಚೋದನಾತ್ಮಕ ಪೋಸ್ಟ್ ಮಾಡಿದ ಯುವಕನಿಗೆ ಕುಮ್ಮಕ್ಕು ಕೊಟ್ಟಿದ್ದು ಯಾರು? ಎಚ್ಡಿಕೆ ಪ್ರಶ್ನೆ
ಬೆಂಗಳೂರು, ಏಪ್ರಿಲ್ 17: "ಹುಬ್ಬಳ್ಳಿ ನಗರದಲ್ಲಿ ಕಳೆದ ರಾತ್ರಿ ನಡೆದಿರುವ ಗಲಾಟೆಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಇಡೀ ಪ್ರಕರಣದ ಹಿಂದೆ ಯಾರಿದ್ದಾರೆ ಎನ್ನುವುದನ್ನು ಪತ್ತೆ ಹಚ್ಚಬೇಕು," ಎಂದು ಒತ್ತಾಯ ಮಾಡಿದ್ದಾರೆ.
ಜೆಡಿಎಸ್ ರಾಜ್ಯ ಅಧ್ಯಕ್ಷರಾಗಿ ಸಿಎಂ ಇಬ್ರಾಹಿಂ ಅವರು ಅಧಿಕಾರ ವಹಿಸಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ರಾಜ್ಯದಲ್ಲಿ ಈಗ ಒಂದಲ್ಲ ಒಂದು ಘಟನೆ ನಡೆಯುತ್ತಲೇ ಇವೆ. ಹುಬ್ಬಳ್ಳಿ ನಗರದಲ್ಲಿ 15 -20 ವರ್ಷ ಕಾಲ ನೆತ್ತರ ಹೋಕುಳಿ ಆಡುತ್ತಿದ್ದರು. 1994ರಲ್ಲಿ ದೇವೇಗೌಡರು ಅದನ್ನು ತಹಬದಿಗೆ ತಂದಿದ್ದರು. ಆದರೆ ನಿನ್ನೆ ರಾತ್ರಿ ಮತ್ತೆ ಬೆಂಕಿ ಹಚ್ಚುವ ಕೆಲಸ ಆಗಿದೆ," ಎಂದರು.
ಹುಬ್ಬಳ್ಳಿ ಗಲಭೆ; ನಿಷೇಧಾಜ್ಞೆ ಏಪ್ರಿಲ್ 20ರ ತನಕ ವಿಸ್ತರಣೆ
"ಕೆಲ ತಿಳಿಗೇಡಿಗಳು ಮುಸ್ಲಿಂ ಜನಾಂಗವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಯಾರೂ ಬಲಿಯಾಗಬೇಡಿ ಎಂದು ಮುಸ್ಲಿಂ ಬಾಂದವರಿಗೆ ಹೇಳಲು ಬಯಸುತ್ತೇನೆ. ಹೀಗೆ ಬೆಂಕಿ ಹಚ್ಚೋದ್ರಿಂದ ಯಾವುದೇ ಪ್ರಯೋಜನ ಇಲ್ಲ," ಎಂದು ಮಾಜಿ ಮುಖ್ಯಮಂತ್ರಿಗಳು ಕಿವಿಮಾತು ಹೇಳಿದರು.
"ಬೆಂಗಳೂರಿನ ಡಿಜೆ.ಹಳ್ಳಿ, ಕೆಜೆ ಹಳ್ಳಿ ಕಥೆ ನೋಡಿದ್ದೇವೆ. ಬೆಂಕಿ ಹಚ್ಚಿದ ಕಾರಣಕ್ಕೆ ಅನೇಕ ಆಸ್ತಿ ಪಾಸ್ತಿ ಹಾಳಾದವು. ಆ ಘಟನೆ ಮರೆಯುವ ಮುನ್ನವೇ ಹುಬ್ಬಳ್ಳಿಯಲ್ಲಿ ಗಲಾಟೆ ಆಗಿದೆ. ಪ್ರಚೋದನಾತ್ಮಕ ಪೋಸ್ಟ್ ಮಾಡಿದವನ ಹಿಂದೆ ಯಾರು ಇದ್ದಾರೆ? ಅವನು ಯಾರ ಚಿತಾವಣೆಯಿಂದ ಪೋಸ್ಟ್ ಮಾಡಿದ್ದಾನೆ? ಎನ್ನುವುದನ್ನು ಪತ್ತೆ ಹಚ್ಚಬೇಕು," ಎಂದು ಕುಮಾರಸ್ವಾಮಿ ಅವರು ಒತ್ತಾಯ ಮಾಡಿದರು.
ರಾಜ್ಯ ಸರ್ಕಾರ ಏನು ಮಾಡುತ್ತಿದೆ?, ಕುಮಾರಸ್ವಾಮಿ ಪ್ರಶ್ನೆ
"ಆಸ್ಪತ್ರೆ, ಪೊಲೀಸ್ ಠಾಣೆ, ದೇವಸ್ಥಾನಕ್ಕೆ ಬೆಂಕಿ ಹಚ್ಚಿದ್ದಾರೆ. ಇದೆಲ್ಲ ನೋಡಿದರೆ ಯಾರೂ ಸಂಚು ರೂಪಿಸಿದ್ದಾರೆ ಎನ್ನುವ ಅನುಮಾನ ಬರುತ್ತದೆ ಎಂದರು.ರಾಜ್ಯದಲ್ಲಿ ಇಂಥ ಘಟನೆಗಳು ಜಾಸ್ತಿ ಆಗುತ್ತಿವೆ. ರಾಜ್ಯ ಸರ್ಕಾರ ಏನು ಮಾಡುತ್ತಿದೆ? ಕಾಂಗ್ರೆಸ್ ನಾಯಕರು ಉರಿಯುವ ಬೆಂಕಿಗೆ ಪೆಟ್ರೋಲ್ ಹಾಕಿಸುವ ಕೆಲಸ ಮಾಡುತ್ತಿದ್ದಾರೆ. ಇದನ್ನು ನಂಬಿ ಮುಸ್ಲಿಂ ಜನಾಂಗ ಎಚ್ಚರ ತಪ್ಪಬಾರದು," ಎಂದು ಕುಮಾರಸ್ವಾಮಿ ಅವರು ಮನವಿ ಮಾಡಿದರು.
ಹುಬ್ಬಳ್ಳಿ ಗಲಭೆ; ಪ್ರಚೋದನಕಾರಿ ಸ್ಟೇಟಸ್, ಯುವಕನ ಬಂಧನ
"ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ. ಈ ಶಾಂತಿಯ ತೋಟಕ್ಕೆ ಬೆಂಕಿ ಹಾಕುವ ಕೆಲಸ ಆಗುತ್ತಿದೆ. ಈ ಬೆಂಕಿಯನ್ನು ನಂದಿಸುವ ಕೆಲಸ ಜೆಡಿಎಸ್ ನಿಂದ ಮಾತ್ರ ಸಾಧ್ಯ ಎಂದ ಅವರು, ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ನಾಯಕರು ಮಾತನಾಡಿರುವುದನ್ನು ಗಮನಿಸಿದ್ದೇನೆ. ಮುಂದಿನ ಚುನಾವಣೆ ಗೆಲ್ಲಲು ಬಿಜೆಪಿಯವರು ರೂಪುರೇಷೆ ರೆಡಿ ಮಾಡಿದ್ದಾರೆಯೇ ಹೊರತು ಜನರ ಸಮಸ್ಯೆ ಬಗೆಹರಿಸುವ ಹಾಗೂ ರಾಜ್ಯದಲ್ಲಿ ಶಾಂತಿ ಸ್ಥಾಪನೆ ಮಾಡುವ ನಿಟ್ಟಿನಲ್ಲಿ ಚರ್ಚೆ ಮಾಡಿಲ್ಲ. ಬಿಜೆಪಿಗೆ 2023ಕ್ಕೆ ಅಧಿಕಾರ ಹಿಡಿಬೇಕು ಎನ್ನುವ ಧಾವಂತ ಇದೆ," ಎಂದು ಕುಮಾರಸ್ವಾಮಿ ಅವರು ಟೀಕಾ ಪ್ರಹಾರ ನಡೆಸಿದರು.
"ಇತ್ತ ಕಾಂಗ್ರೆಸ್ ಗೆ ಬೇರೆ ಜನಪರ ವಿಚಾರಗಳು, ಅಭಿವೃದ್ಧಿ ವಿಚಾರಗಳು ಇಲ್ಲದೇ 40 ಪರ್ಸೆಂಟ್ ವಿಷಯವನ್ನು ಇಟ್ಟುಕೊಂಡಿದ್ದಾರೆ. ಕೇಂದ್ರದಲ್ಲಿ ಸರಕಾರ ಮಾಡುವ ಹಗಲು ಕನಸು ಕಾಣುತ್ತಿದ್ದಾರೆ. ಅದು ಈಡೇರಲ್ಲ," ಎಂದು ಮಾಜಿ ಮುಖ್ಯಮಂತ್ರಿಗಳು ನುಡಿದರು.
Recommended Video