ವಿಧಾನಸಭೆಯಲ್ಲಿ 'ವಿವಾದಿತ' ಕವಿತೆ ಓದಿದ ಕುಮಾರಸ್ವಾಮಿ
ಬೆಂಗಳೂರು, ಫೆಬ್ರವರಿ 19: ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರು ವಿಧಾನಸಭೆಯಲ್ಲಿಂದು ಕವಿತೆ ಓದಿದರು.
ಕವಿತೆ ಓದಿದ ಕಾರಣಕ್ಕೆ ಜೈಲುವಾಸ ಅನುಭವಿಸುತ್ತಿರುವ ಕವಿ ಸಿರಾಜ್ ಬಿಸರಳ್ಳಿ ಅವರು ರಚಿಸಿರುವ, ವಿವಾದಕ್ಕೆ ಈಡಾಗಿರುವ 'ನಿನ್ನ ದಾಖಲೆ ಯಾವಾಗ ನೀಡುತ್ತಿ?' ಕವಿತೆಯನ್ನು ಕುಮಾರಸ್ವಾಮಿ ಅಧಿವೇಶನದಲ್ಲಿ ಓದಿದರು.
ಕವಿತೆ ಓದಿದ ಕುಮಾರಸ್ವಾಮಿ, 'ಈ ಕವಿತೆಯಲ್ಲಿ ದೇಶದ್ರೋಹ ಕೇಸ್ ದಾಖಲಿಸುವಂತದ್ದು ಏನಿದೆ? ಎಂದು ಪ್ರಶ್ನೆ ಮಾಡಿದರು.
ಈ ಹಿಂದೆ ಕವಿ ನಿಸಾರ್ ಅಹ್ಮದ್ ಅವರು ನಮ್ಮ ನಿಮ್ಮಂಥವರ ಕುರಿತು ಕುರಿಗಳು ಸಾರ್ ಕುರಿಗಳು ಕವಿತೆ ಬರೆದಿದ್ದರು ಎಂದು ನೆನಪಿಸಿಕೊಂಡ ಕುಮಾರಸ್ವಾಮಿ ಅಡಿಗರ ಕವಿತೆ ಕೂಡಾ ಕೋಲಾಹಲ ಸೃಷ್ಟಿಸಿತ್ತು ಎಂದರು.
ಕೊಪ್ಪಳದ ಆನೆಗೊಂದಿ ಉತ್ಸವದಲ್ಲಿ ಜರುಗಿದ ಕವಿಗೋಷ್ಠಿಯಲ್ಲಿ ಕವಿತೆ ಓದಿದ್ದಕ್ಕಾಗಿ ಕವಿ ಹಾಗೂ ಪತ್ರಕರ್ತ ಸಿರಾಜ್ ಬಿಸರಳ್ಳಿ ಮೇಲೆ ಪ್ರಕರಣ ದಾಖಲಿಸಲಾಗಿತ್ತು ಅವರೊಂದಿಗೆ ಕನ್ನಡ ನೆಟ್ ಸಂಪಾದಕರಾದ ರಾಜಭಕ್ಷಿಯವರನ್ನು ಗಂಗಾವತಿ ಪೊಲೀಸರು ಬಂಧಿಸಿದ್ದರು. ಇಂದು ಅವರಿಗೆ ಜಾಮೀನು ದೊರಕಿದೆ.