ಪ್ಯಾಕೇಜ್ ಟೀಕೆಸಿದ್ರೆ ದೇಶದ್ರೋಹಿಗಳಂತೆ ಬಿಂಬಿಸುತ್ತಾರೆ- ಕುಮಾರಸ್ವಾಮಿ
ಬೆಂಗಳೂರು, ಮೇ 19: ವಿಧಾನಸೌಧದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಕೇಂದ್ರ ಸರ್ಕಾರ 20 ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
''ಮೇ 13 ರಂದು ಮೊದಲ ಕಂತಿನಲ್ಲಿ ವಿತ್ತ ಸಚಿವರು ಎಂಎಸ್ಎಂಇಗೆ ಸಂಬಂಧಿಸಿದ 6 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ ಮಾಡಿದರು. ನಂತರ 4 ದಿನಗಳ ಕಾಲ ನಿರಂತರವಾಗಿ ಪ್ರಧಾನ ಮಂತ್ರಿಗಳ 20 ಲಕ್ಷ ಕೋಟಿ ಪ್ಯಾಕೇಜ್ ಬಗ್ಗೆ ಘೋಷಣೆ ಮಾಡಿದರು. ಕೇಂದ್ರ ಸರ್ಕಾರದ ಘೋಷಣೆಯಿಂದ ಜನರ ಸಂಕಷ್ಟಕ್ಕೆ ಪರಿಹಾರ ದೊರಕಬಹುದು ಅಂತಾ ನಿರೀಕ್ಷೆಯಲ್ಲಿದ್ದೆ. ಈ ಪ್ಯಾಕೇಜ್ ನಿಂದ ತುಂಬಾ ನಿರಾಸೆಯಾಗಿದೆ.'' ಎಂದು ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
10 ಸಾವಿರ ಕೋಟಿ ರುಪಾಯಿ ಪರಿಹಾರ ಪ್ಯಾಕೇಜ್ಗೆ ಎಚ್ಡಿಕೆ ಆಗ್ರಹ
20 ಲಕ್ಷ ಕೋಟಿ ಪ್ಯಾಕೇಜ್ ಬಗ್ಗೆ ಸಂಘ ಸಂಸ್ಥೆಗಳು, ರಾಜಕೀಯ ಮುಖಂಡರು ಹಲವಾರು ವಿಮರ್ಶೆ ಮಾಡಿದ್ದಾರೆ. ಚಿದಂಬರಂ ಅವರು ಜಿಡಿಪಿಯ 1% ಕೊಟ್ಟಿದ್ದಾರೆ ಅಂತ ಹೇಳಿದರು. ನಾನು ಎಷ್ಟು ಪರ್ಸೆಂಟ್ ಕೊಟ್ಟಿದ್ದಾರೆ ಅನ್ನೋ ಬಗ್ಗೆ ಮಾತಾಡಲ್ಲ. ಜನರಿಗೆ ಇದರ ಲಾಭ ಏನು ಅನ್ನೋದು ಮುಖ್ಯ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಇವತ್ತು 4 ಪ್ಯಾಕೇಜ್ನ ಸಂಪೂರ್ಣ ಅನುಕೂಲಗಳು, ಅನಾನುಕೂಲಗಳ ಬಗ್ಗೆ ಜನರ ಮುಂದಿಡುತ್ತೇನೆ. ಮೊದಲ ಕಂತಿನಲ್ಲಿ ಘೋಷಿಸಲಾದ ಎಂಎಸ್ಎಂಇ ಯೋಜನೆಗಳ ಬಗ್ಗೆ ಜನರ ಮುಂದಿಡುತ್ತೇನೆ. ಪ್ಯಾಕೇಜ್ ಘೋಷಣೆ ಮಾಡುವಾಗ ಹಲವಾರು ತಜ್ಞರು ತಮ್ಮ ಸಲಹೆ ನೀಡಿರುತ್ತಾರೆ. ಆದರೆ, ವಿತ್ತ ಸಚಿವರು ಘೋಷಣೆ ಮಾಡಿದ ಪ್ಯಾಕೇಜ್ಗಳಲ್ಲಿ ಪಾರದರ್ಶಕತೆ ಇಲ್ಲ ಎಂದಿದ್ದಾರೆ.
ಯಾವ ತಜ್ಞರಿಂದ ಮಾಹಿತಿ ಪಡೆದು ಈ ರೀತಿ ಪ್ಯಾಕೇಜ್ ಘೋಷಣೆ ಮಾಡಿದ್ರು. ಕೇಂದ್ರ, ರಾಜ್ಯ ಸರ್ಕಾರಗಳು ಸ್ವೇಚ್ಚಾಚಾರವಾಗಿ ಘೋಷಣೆಗಳನ್ನ ಮಾಡಿದ್ದಾರೆ. ಇವರ ಘೋಷಣೆಗಳನ್ನ ಟೀಕೆ ಮಾಡಿದ್ರೆ, ದೇಶದ್ರೋಹಿಗಳಂತೆ ಬಿಂಬಿಸುತ್ತಾರೆ.
ಏಪ್ರಿಲ್ 23-24 ರಂದು 15ನೇ ಹಣಕಾಸು ಆಯೋಗದ ಸಲಹಾ ಸಮಿತಿ ಸಭೆ ನಡೆಸಿದರು. ಇಂದಿನ ದೇಶದ ಪರಿಸ್ಥಿತಿ ಹಿನ್ನೆಲೆ 4 ಸಲಹೆ ನೀಡಿದ್ದಾರೆ. ಕೋವಿಡ್ 19 ಹರಡುವ ಮೊದಲೇ ಸಣ್ಣ ಉದ್ಯಮಗಳು ಸಂಕಷ್ಟಕ್ಕೆ ಒಳಗಾಗಿವೆ. ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಆರ್ಥಿಕವಾಗಿ ದಿವಾಳಿಯಾಗುತ್ತಿರುವುದನ್ನ ಸರಿ ಮಾಡುವ ನಿಟ್ಟಿನಲ್ಲಿ ಕೈಗೊಳ್ಳ ಬೇಕಾದ ಕ್ರಮಗಳ ಬಗ್ಗೆ ಸಲಹೆ ನೀಡಿದ್ದಾರೆ ಎಂದಿದ್ದಾರೆ.