ಡಿಕೆಶಿಯನ್ನು ವಶಕ್ಕೆ ಪಡೆದ ಮುಂಬೈ ಪೊಲೀಸರ ವಿರುದ್ಧ ಎಚ್ಡಿಕೆ ಗರಂ
ಬೆಂಗಳೂರು, ಜುಲೈ 10: ಮುಂಬೈಯ ರಿನೈಸಾನ್ಸ್ ಹೊಟೇಲ್ ಎದುರಲ್ಲಿ ನಡೆಯುತ್ತಿದ್ದ ರಾಜ್ಯ ರಾಜಕಾರಣದ ನಾಟಕೀಯ ಬೆಳವಣಿಗೆಯ ಕುರಿತು ಇಷ್ಟು ಕಾಲ ಮೌನವಾಗಿಯೇ ಇದ್ದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಇದೀಗ ಮೌನ ಮುರಿದಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು ಮುಂಬೈ ಪೊಲೀಸರು, ಮಹಾರಾಷ್ಟ್ರ ಸರ್ಕಾರ ಮತ್ತು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಜಟಾಪಟಿಯಿಂದ ರಣರಂಗವಾದ ವಿಧಾನಸೌಧ Live Updates
"ನಮ್ಮ ಶಾಸಕರನ್ನು ಮುಂಬೈ ಪೊಲೀಸರು ನಡೆಸಿಕೊಳ್ಳುತ್ತಿರುವ ರೀತಿ ತೀರಾ ಬೇಸರವನ್ನುಂಟು ಮಾಡಿದೆ. ಮಹಾರಾಷ್ಟ್ರ ಸರ್ಕಾರದ ಈ ಅವಸರದ ನಿರ್ಧಾರ(ಡಿಕೆಶಿಯನ್ನು ವಶಕ್ಕೆ ಪಡೆದಿದ್ದು)ವನ್ನು ನೋದಿದರೆ ಇದರಲ್ಲಿ ಬಿಜೆಪಿಯ ಕುದುರೆ ವ್ಯಾಪಾರವಿದೆ ಎಂಬ ಅನುಮಾನ ದಟ್ಟವಾಗುತ್ತದೆ. ಇದು ಭಾರತದ ಗಣತಂತ್ರ ವ್ಯವಸ್ಥೆಗೇ ಕಪ್ಪುಚುಕ್ಕಿ" ಎಂದು ಎಚ್ ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ರಾಜೀನಾಮೆ ನೀಡಿರುವ ಜೆಡಿಎಸ್-ಕಾಂಗ್ರೆಸ್ ಅತೃಪ್ತ ಶಾಸಕರು ಮುಂಬೈಯ ಹೊಟೇಲ್ ನಲ್ಲಿದ್ದು, ಅವರೊಂದಿಗೆ ಮಾತುಕತೆ ನಡೆಸಿ ವಾಪಸ್ ಕರೆತರಲು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರು ಮುಂಬೈಗೆ ತೆರಳಿದ್ದರು. ರಿನೈಸಾನ್ಸ್ ಹೊಟೇಲ್ ನಲ್ಲಿ ಅವರು ಬುಕ್ ಮಾಡಿದ್ದ ರೂಮ್ ಗಳನ್ನೂ ತುರ್ತು ಕಾರಣ ನೀಡಿ ರದ್ದುಗೊಳಿಸಲಾಗಿತ್ತು. ಆದರೆ ಶಾಸಕರನ್ನು ಭೇತಿ ಮಾಡದೆ ವಾಪಸ್ಸಾಗುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದ ಡಿಕೆ ಶಿವಕುಮಾರ್ ಅವರನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ.