ಶರಣಾದವ ಮುಸ್ಲಿಂ ಆಗಿದ್ದರೆ ಕಥೆ ಏನಾಗುತ್ತಿತ್ತು?: ಕುಮಾರಸ್ವಾಮಿ
ಬೆಂಗಳೂರು: ಮಂಗಳೂರು ಸ್ಫೋಟಕ ಪ್ರಕರಣದಲ್ಲಿ ಶರಣಾಗಿರುವ ವ್ಯಕ್ತಿ ಮುಸ್ಲಿಂ ಆಗಿದ್ದರೆ ಕತೆಯೇ ಮುಗಿದುಬಿಡುತ್ತಿತ್ತು. ಬಿಜೆಪಿಯವರು ಓಹೋ ಎಂದು ದೊಡ್ಡದಾಗಿ ಮಾತನಾಡುತ್ತಿದ್ದರು. ಒಬ್ಬೊಬ್ಬರು ಒಂದೊಂದು ಬಗೆಯಲ್ಲಿ ಮಾತನಾಡುತ್ತಿದ್ದರು. ಆದರೆ ಹಿಂದೂ ಎನ್ನುವ ಕಾರಣಕ್ಕೆ ಮೌನವಾಗಿದ್ದಾರೆ. ಇಂದು ಯಾರೊಬ್ಬರ ಸುದ್ದಿಯೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
Recommended Video
ಜೆಪಿ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಂಗಳೂರು ಬಾಂಬ್ ಪತ್ತೆ ಪ್ರಕರಣವನ್ನು ಇಷ್ಟು ದೊಡ್ಡದಾಗಿ ಬಿಂಬಿಸಿರುವ ನೀವು ದಾವೋಸ್ನಲ್ಲಿ ನಡೆಯುತ್ತಿರುವ ಆರ್ಥಿಕ ಶೃಂಗದಲ್ಲಿ ಹೂಡಿಕೆದಾರರನ್ನು ಏನೆಂದು ಹೇಳಿ ಹೂಡಿಕೆಗೆ ಆಹ್ವಾನ ಮಾಡುತ್ತೀರಿ? ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಪ್ರಶ್ನಿಸಿದರು. ಈ ಪ್ರಕರಣ ಹೂಡಿಕೆ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದರು.
ಪಾಕಿಸ್ತಾನ ಇಲ್ಲದಿದ್ದರೆ ನಿಮಗೆ ಒಂದೂ ಓಟು ಬೀಳುತ್ತಿರಲಿಲ್ಲ: ಬಿಜೆಪಿಗೆ ಎಚ್ಡಿಕೆ ಏಟು
ಸಿಎಂ ತಂಡ ದಾವೂಸ್ ಶೃಂಗದಲ್ಲಿದೆ. ರಾಜ್ಯದಲ್ಲಿ ಹೂಡಿಕೆಗೆ ಆಹ್ವಾನ ನೀಡುತ್ತಿದ್ದಾರೆ. ಆದರೆ ಮತ್ತೊಂದು ಕಡೆ ರಾಜ್ಯದಲ್ಲಿ ಭಯಭೀತಿಯ ಘಟನೆ ನಡೆಯುತ್ತಿದೆ. ಇಂತಹ ಘಟನೆಯಿಂದ ಹೂಡಿಕೆದಾರರಿಗೆ ಏನು ಸಂದೇಶ ಕೊಡುತ್ತೀರಾ ಎಂದು ಪ್ರಶ್ನಿಸಿದರು.
ಸರ್ಟಿಫಿಕೇಟ್ ಪಡೆಯಲು ಕೆಲಸ ಮಾಡುತ್ತಿಲ್ಲ
ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಹಿನ್ನಲೆಯಲ್ಲಿ ಸಾರ್ವಜನಿಕವಾಗಿ ಜವಾಬ್ದಾರಿಯುತ ವಿರೋಧ ಪಕ್ಷದ ಕೆಲಸ ನಿರ್ವಹಣೆ ಮಾಡಬೇಕಾದರೆ ನನ್ನ ಕೆಲ ಹೇಳಿಕೆಗಳ ಬಗ್ಗೆ ಬಿಜೆಪಿ ಕಡೆಯಿಂದ ಟೀಕೆ ಬರುತ್ತಿದೆ. ಬಿಜೆಪಿ ನಾಯಕರಿಂದ ನನ್ನ ಪರವಾದ ಸರ್ಟಿಫಿಕೇಟ್ ಪಡೆಯಲು ನಾನು ಈ ಕೆಲಸ ಮಾಡುತ್ತಿಲ್ಲ. ಕರ್ನಾಟಕ ಅತ್ಯಂತ ಶಾಂತಿಪ್ರಿಯ ರಾಜ್ಯ. ಎಲ್ಲ ಸಮುದಾಯದವರು ವಿಶ್ವಾಸದಿಂದ ಬದುಕುವ ರಾಜ್ಯ. ದೇಶದಲ್ಲಿ ಸಂಘರ್ಷಗಳು ಇದ್ದರೂ ಗಲಭೆಗಳಿಗೆ ಅವಕಾಶ ನೀಡದ ರಾಜ್ಯ. ಆದರೆ ಇತ್ತೀಚೆಗೆ ರಾಜ್ಯದಲ್ಲಿ ಬಿಜೆಪಿ ಸ್ವಲ್ಪ ಹೆಚ್ಚಿನ ಶಕ್ತಿ ಪಡೆದ ನಂತರ ನಮ್ಮ ರಾಜ್ಯದಲ್ಲಿಯೂ ಹಲವಾರು ರೀತಿಯ ಗಲಭೆಗಳಿಗೆ ಬಿಜೆಪಿ ನಡವಳಿಕೆ ಪ್ರಮುಖ ಎಂದು ಟೀಕಿಸಿದರು.
ಜನರಲ್ಲಿ ಭೀತಿ ಮೂಡಿಸುವ ಕೆಲಸ
ಸಿಎಎ ಸಮಾವೇಶದ ನಡುವೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕೆಲವೊಂದು ಭಯೋತ್ಪಾದನಾ ಚಟುವಟಿಕೆ ನಡೆಸುವ ಉಗ್ರರು ಅಡಗುತಾಣ ಮಾಡಿಕೊಂಡಿದ್ದಾರೆ ಎಂದು ಇಡೀ ರಾಜ್ಯವನ್ನು ಹಿಂಸೆಗೆ ಒಳಪಡಿಸುವ, ಸಾರ್ವಜನಿಕ ಭೀತಿ ಸೃಷ್ಟಿ ಮಾಡುವ ಕೆಲಸವಾಗುತ್ತಿದೆ. ಸರ್ಕಾರ ಕೆಲ ವಿಷಯಗಳಲ್ಲಿ ತೆಗೆದುಕೊಳ್ಳುವ ತೀರ್ಮಾನಗಳ ಬಗ್ಗೆ ಪರಿಶೀಲನೆ ಮಾಡಬೇಕು ಎಂದು ಸಲಹೆ ನೀಡಿದರು.
''ಕುಮಾರಸ್ವಾಮಿ ಸಿಎಂ ಆಗಿದ್ದೇ ಅಣಕು ಪ್ರದರ್ಶನದಂತಿತ್ತು''
ಧೈರ್ಯ ತುಂಬುವುದು ಸರ್ಕಾರದ ಕೆಲಸ
ಪೊಲೀಸ್ ಇಲಾಖೆಯು ಸ್ಥೈರ್ಯ ಕಳೆದುಕೊಳ್ಳುವಂತೆ ಮಾಡುತ್ತಿದ್ದಾರೆ ಎಂದ ಬಿಜೆಪಿ ನಾಯಕರು ನನ್ನ ಮೇಲೆ ಆಪಾದನೆ ಮಾಡಿದ್ದಾರೆ. ಪೊಲೀಸರಿಗೆ ಧೈರ್ಯ ತರುವ ಕೆಲಸ ಸರ್ಕಾರ ಮಾಡಬೇಕು ಅದು ನನ್ನ ಜವಾಬ್ದಾರಿ ಅಲ್ಲ. ನನ್ನ ಕಾಲದಲ್ಲೂ ಇದೇ ಅಧಿಕಾರಿಗಳು ಇದ್ದರು. ಒಂದೊಂದು ಸರ್ಕಾರ ಒಂದೊಂದು ಕಾಲದಲ್ಲಿ ಒಂದೊಂದು ರೀತಿ ಅಧಿಕಾರಿಗಳ ಬಳಕೆ, ದುರ್ಬಳಕೆ ಮಾಡಿಕೊಂಡಿದ್ದಾರೆ. ನನ್ನ ಅವದಿಯಲ್ಲಿ ದುರ್ಬಳಕೆ ಮಾಡಿಕೊಂಡಿಲ್ಲ. ಆದರೆ ಈ ಸರ್ಕಾರದಲ್ಲಿ ಕೆಲ ಅಧಿಕಾರಿಗಳ ನಡವಳಿಕೆಯನ್ನು ಪ್ರಶ್ನೆ ಮಾಡುವ ಸನ್ನಿವೇಶ ನಿರ್ಮಾಣವಾಗಿದೆ. ಜನವರಿ 19 ರ ಘಟನೆ ಬಗ್ಗೆ ಎಷ್ಟರ ಮಟ್ಟಿಗೆ ಮಾಹಿತಿ ಕೊಟ್ಟಿದ್ದೀರಿ? ಅಧಿಕಾರಿಗಳಿಗೆ ಎಷ್ಟು ಸ್ವಾತಂತ್ರ್ಯ ಕೊಟ್ಟಿದ್ದೀರಿ? ಎಂದು ಪ್ರಶ್ನಿಸಿದರು.
ಕುರ್ಚಿ ಉಳಿಸಿಕೊಳ್ಳಲು ಏನು ಮಾಡುತ್ತಿದ್ದೀರಿ?
ಜಾತಿ ಓಲೈಕೆ ರಾಜಕಾರಣ ನನಗೆ ಅಗತ್ಯವಿಲ್ಲ, ಜಾತಿ ಹೆಸರಿನ ರಾಜಕಾರಣಕ್ಕೆ ಪ್ರೋತ್ಸಾಹ ಮಾಡಿಲ್ಲ, ಜಾತಿ ರಾಜಕಾರಣ ಬೇಕಿರೋದು ಬಿಜೆಪಿಯವರಿಗೆ. ಯಡಿಯೂರಪ್ಪ ಆದಿಯಾಗಿ ಜಾತಿ ಆಧಾರಿತ ರಾಜಕಾರಣ ಮಾಡುತ್ತಿದ್ದೀರಿ. ನಿಮ್ಮ ಕುರ್ಚಿ ಉಳಿಸಿಕೊಳ್ಳಲು ಯಾವ ರೀತಿ ಮಾಡುತ್ತಿದ್ದೀರಿ ಎನ್ನುವುದು ಗೊತ್ತಿದೆ ಎಂದರು.
ಆರೋಪಿ ಆದಿತ್ಯರಾವ್ ಕೃತ್ಯದ ಕುರಿತು ಸಹೋದರ ಹೇಳಿದ್ದೇನು?
ಇಷ್ಟು ದಿನ ವರದಿಯಾಗಿರಲಿಲ್ಲ
ಟೌನ್ ಹಾಲ್ ಮುಂದೆ ಏಳು ಕಲ್ಲು ಎಸೆದಿದ್ದರು ಎಂದು ಹೇಳುತ್ತಿದ್ದಾರೆ. ಆದರೆ ಇಷ್ಟು ದಿನವಾದರೂ ಈ ಬಗ್ಗೆ ವರದಿಯೇ ಆಗಿರಲಿಲ್ಲ. ವರುಣ್ ಮೇಲೆ ನಡೆದ ಹಲ್ಲೆ ಖಂಡನೀಯ. ತಪ್ಪಿತಸ್ಥರ ವಿರುದ್ದ ಕ್ರಮ ಅಗತ್ಯ. ಆದರೆ ನೀವು ಸಾರ್ವಜನಿಕವಾಗಿ ನೀಡುತ್ತಿರುವ ಹೇಳಿಕ ಸರಿಯಿಲ್ಲ. ಹಗ್ಗ ಕೊಟ್ಟು ಕುತ್ತಿಗೆಯನ್ನು ಕೊಟ್ಟು ನೇಣು ಹಾಕಿಸಿಕೊಳ್ಳಬೇಡಿ ಎಂದು ಮನವಿ ಮಾಡಿದ್ದೇನೆ ಅಷ್ಟೇ ಎಂದರು.
ಮಂಗಳೂರು ಅಣಕು ಪ್ರದರ್ಶನ
ರಾಮನಗರದಲ್ಲಿ ಆನೆ ಪಟಾಕಿ ತೋರಿಸಿ ಬಾಂಬ್ ಅಂತಾ ಗಣೇಶ ಹಬ್ಬದ ವೇಳೆ ಹೇಳಿದ್ದರು. ನಂತರ ಆನೆ ಪಟಾಕಿ ಎಂದರು. ಈಗ ಮಂಗಳೂರು ಘಟನೆ ಕೂಡ ಅದೇ ರೀತಿಯ ಅಣಕು ಪ್ರದರ್ಶನ. ಬಾಂಬ್ ನಿಷ್ಕ್ರಿಯ ಮಾಡಲು ಪೊಲೀಸ್ ಇಲಾಖೆ ಹರಸಾಹಸ ಮಾಡಿದ್ದು, ಇಡೀದಿನ ಕ್ಷಣಕ್ಷಣದ ಮಾಹಿತಿ ನೀಡಿದ್ದಕ್ಕೆ ಏನೆನ್ನಬೇಕು? ಆ ಮೂಲಕ ತನಿಖಾಧಿಕಾರಿಗಳಿಗೆ ಏನು ಸಂದೇಶ ಕೊಟ್ಟಿರಿ? ವಾಣಿಜ್ಯ ಕ್ಷೇತ್ರದಲ್ಲಿ ಮಂಗಳೂರು ವಿಶ್ವಮಟ್ಟದ ಸ್ಪರ್ಧೆ ನೀಡುವ ನಗರ ಅದನ್ನು ಭಯೋತ್ಪಾದಕ, ಕೋಮುವಾದ ಸಂಘರ್ಷದ ತಾಣ ಎಂದು ಸಂದೇಶ ಕೊಟ್ಟು ದಾವೂಸ್ ನಲ್ಲಿ ಏನು ಹೇಳಿ ಹೂಡಿಕೆದಾರರನ್ನು ಕರೆತರುತ್ತೀರಿ ಎಂದರು.
ಹುಚ್ಚಾಸ್ಪತ್ರೆಯಲ್ಲಿ ಚಿಕಿತ್ಸೆ ಬಿಜೆಪಿಯವರಿಗೆ ಬೇಕು
ನನ್ನನ್ನು ದೇಶದ್ರೋಹಿ, ಪಾಕ್ ಬೆಂಬಲಿಗ ಎಂದು ಕೇಂದ್ರ ಸಚಿವರು ಹೇಳಿಕೆ ನೀಡಿದ್ದಾರೆ. ನನ್ನ ಜೊತೆಯಲ್ಲಿಯೇ ಇದ್ದವರೊಬ್ಬರು ಯಡಿಯೂರಪ್ಪ, ಶೋಭಾ ಬಗ್ಗೆ ಬೇಕಾಬಿಟ್ಟಿ ಮಾತನಾಡಿದ್ದವರು, ಈಗ ನನ್ನ ಬಗ್ಗೆ ಏನು ಮಾತನಾಡುತ್ತಿದ್ದೀರಿ? ಯಡಿಯೂರಪ್ಪ ಬಗ್ಗೆ ಮಾತನಾಡಿದ್ದ ಕ್ಯಾಸೆಟ್ ಇಲ್ಲ ಅಂದ್ರೆ ನಾನೇ ಕಳಿಸಿ ಕೊಡುತ್ತೇನೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ಗೆ ಟಾಂಗ್ ನೀಡಿದರು. ಇಮ್ರಾನ್ ಖಾನ್ ಅಳಿಯನಾ, ಓವೈಸಿ ಪಕ್ಷ ಮಾಡಲು ಹೊರಟಿದ್ದಾರಾ, ಹುಚ್ಚಾಸ್ಪತ್ರೆಗೆ ಸೇರಿಸಬೇಕು ಅಂದಿದ್ದಾರೆ. ಆದರೆ ನನಗೆ ಅಂತಹ ಪರಿಸ್ಥಿತಿ ಬಂದಿಲ್ಲ. ಹುಚ್ಚಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾದವರು ನೀವು, ಯಡಿಯೂರಪ್ಪ ಬಗ್ಗೆ ಏನು ಮಾತಾಡಿದ್ದಿರಿ, ಈಗ ಏನು ಮಾತಾಡುತ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದರು.
ಸೀರೆ ಬಳೆ ಕೊಂಡೊಯ್ದವರು ಯಾರು?
ನನ್ನನ್ನು ಪಾಕಿಸ್ತಾನದ ಅಳಿಯನನ್ನಾಗಿ ಮಾಡಲು ಹೊರಟಿದ್ದೀರಿ. ಆದರೆ ಪಾಕಿಸ್ತಾನಕ್ಕೆ ಸೀರೆ ಬಳೆ ತೆಗೆದುಕೊಂಡು ಹೋದವರು ಯಾರು? ದೇವೇಗೌಡರು ಪ್ರಧಾನಿಯಾಗಿದ್ದಾಗ ಒಂದೂ ಭಯೋತ್ಪಾದನಾ ಘಟನೆ ನಡೆದಿರಲಿಲ್ಲ. ಈಗ ಯಾಕೆ ನಡೆಯುತ್ತಿವೆ ಎಂದು ಸಚಿವ ಪ್ರಹ್ಲಾದ ಜೋಷಿಯನ್ನು ಪ್ರಶ್ನಿಸಿದರು.
ಶರಣಾಗತಿ ಕೂಡ ನಾಟಕ
ಪೊಲೀಸ್ ಅಧಿಕಾರಿ ಹರ್ಷ ನನ್ನ ಭೇಟಿ ಮಾಡಿದ್ದರು, ಸರ್ಕಾರ ಮೆಚ್ಚಿಸಲು ಕೆಲಸ ಮಾಡಬೇಡಿ, ಜನರ ರಕ್ಷಣೆ ಮಾಡಿ ಎಂದು ಕೆಲಸ ಮಾಡಿ ಎಂದು ಸಲಹೆ ನೀಡಿದ್ದೇನೆ ಎಂದರು.
ಆರೋಪಿ ಶರಣಾಗತಿ ಕೂಡ ನಾಟಕ ಅನ್ನಿಸಲಿದೆ. ಡಿಜಿ ಅಷ್ಟು ಬೆಳಗ್ಗೆ ಕಚೇರಿಗೆ ಯಾಕೆ ಬಂದಿದ್ದರು? ಮುಂದೆ ಎಲ್ಲಾ ಗೊತ್ತಾಗಲಿದೆ. ಈ ಎಲ್ಲ ಮಾಹಿತಿಯನ್ನು ಪ್ರಧಾನಿ, ಅಮಿತ್ ಶಾ ಗಮನಕ್ಕೆ ತರಬೇಕಿದೆ ಎಂದರು.
ಉದ್ಯೋಗ ಕೊಡಲು ಆಗಿಲ್ಲ
ದೇಶದಲ್ಲಿ ವಲಸಿಗರ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ ಆದರೆ ಭಾರತದವರೇ ಹೆಚ್ಚು ವಲಸೆ ಹೋಗಿದ್ದಾರೆ. 17.5 ಮಿಲಿಯನ್ ನಾಗರಿಕರು ಬೇರೆ ಬೇರೆ ದೇಶಕ್ಕೆ ಹೋಗಿ ಬದುಕುತ್ತಿದ್ದಾರೆ ಇಲ್ಲಿ ನಾವು ಅವರಿಗೆ ಉದ್ಯೋಗ ಕೊಡಲು ಆಗಲಿಲ್ಲ, ಅದಕ್ಕಾಗಿ ಅವರು ಹೋಗಿದ್ದಾರೆ. ಆದರೆ ನೀವು ಸಿಎಎ, ಎನ್ಪಿಆರ್ ಅಂತಾ ಹೊರಟಿದ್ದೀರಿ. ಇದು ಈಗ ಅಗತ್ಯವಲ್ಲ. ಆರ್ಥಿಕ ಕುಸಿತ, ಉದ್ಯೋಗ ಕೊಡುವಲ್ಲಿ ಎಡವಿದ್ದೇವೆ. ಅದರ ಬಗ್ಗೆ ನೋಡಿ ಮೋದಿ ಅವರೇ ಎಂದು ಟೀಕಿಸಿದರು.
ನೆಹರು ಸಾಯುವಾಗ ಹುಟ್ಟೇ ಇರಲಿಲ್ಲ
ಈಶ್ವರಪ್ಪ ಒಗ್ಗಟ್ಟಿನ ಮಂತ್ರಕ್ಕೆ ಟೀಕಿಸಿದ ಹೆಚ್ಡಿಕೆ, ನೀವು ಬೆಂಕಿ ಹಿಡಿದು ಬನ್ನಿ ನಾವು ನೀರು ತಂದು ಆರಿಸುತ್ತೇವೆ ಎಂದು ವ್ಯಂಗ್ಯವಾಡಿದರು.
ನೆಹರು ಮಾಡಿರುವ ತಪ್ಪು ಸರಿಪಡಿಸುತ್ತಿದ್ದೇವೆ ಎಂದು ಅಮಿತ್ ಶಾ ಹೇಳುತ್ತಾರೆ ಆದರೆ ನೆಹರೂ ನಿಧನರಾದಾಗ ಇವರು ಹುಟ್ಟೇ ಇರಲಿಲ್ಲ, ಇವರ ರಾಜಕೀಯ ಇತಿಹಾಸ ನೋಡಿದರೆ, ನಕಲಿ ಎನ್ ಕೌಂಟರ್, ಗುಜರಾತ್ನಲ್ಲಿ ಬೆಂಕಿ ಹಚ್ಚಿದ್ದಷ್ಟೇ ಆಗಿದೆ ಎಂದರು.
ಕುಂಬಳಕಾಯಿ ಬಾಂಬುಂಟು
ಹಾಸ್ಯನಟ ದಿನೇಶ್ ಅಭಿನಯದ ಚಿತ್ರವಂದರಲ್ಲಿ 'ಕುಂಬಳಕಾಯಿಯಲ್ಲಿ ಬಾಂಬುಂಟು ಮಾರಾಯಾ' ಎನ್ನುವ ಹಾಸ್ಯ ಸನ್ನಿವೇಶ ವಿವರಿಸಿದ ಹೆಚ್ಡಿಕೆ ಈ ಕಥೆ ಮಂಗಳೂರಿನಲ್ಲೂ ಆಗಿದೆ. ಫುಲ್ವಾಮಾ ಘಟನೆ ಮತ್ತೆ ಆಗದಂತೆ ಮಂಗಳೂರಿನ ಈ ತಜ್ಞರನ್ನೇ ಕರೆದೊಯ್ಯಿರಿ ಎಂದು ವ್ಯಂಗ್ಯವಾಡಿದರು.
ಕೆಲವರು ಅವರೇ ಫೋನ್ ಮಾಡಿಸಿ ಬೆದರಿಕೆ ಇದೆ ಎಂದು ಬಿಂಬಿಸಿಕೊಂಡು ಭದ್ರತೆ ಪಡೆಯುವ ಟ್ರೆಂಡ್ ಈಗ ಸೃಷ್ಟಿಯಾಗಿದೆ ಎಂದು ಇತ್ತೀಚಿನ ಬೆದರಿಕೆ ಕರೆಗಳ ಸನ್ನಿವೇಶವನ್ನು ಟೀಕಿಸಿದರು.
ಸಿಎಂ ಆಗಿದ್ದಾಗ ಬಾಂಬ್ ಕರೆ ಬಂದಿತ್ತು
ನಾನು ಕೂಡ ಸಿಎಂ ಆಗಿದ್ದ ವೇಳೆ ರಾಯಚೂರು ಪ್ರವಾಸಕ್ಕೆ ಹೋಗುವಾಗ ಬಾಂಬ್ ಕರೆ ಬಂದಿತ್ತು. ಇದನ್ನು ಬಹಿರಂಗೊಡಿಸದಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೆ. ಇದನ್ನು ದೊಡ್ಡದಾಗಿ ಮಾಡದಂತ ಸೂಚನೆ ನೀಡಿದ್ದೆ ಎಂದು ತಮ್ಮ ಅವದಿಯಲ್ಲಿ ಘಟನೆಯನ್ನು ವಿವರಿಸಿದರು.