ಡಿಸೆಂಬರ್ನಲ್ಲೇ ವಿಧಾನಸಭೆ ಚುನಾವಣೆ; ಎಚ್ಡಿಕೆ ಸುಳಿವು
ಬೆಂಗಳೂರು ಜುಲೈ 1: 2023ರ ವಿಧಾನಸಭೆ ಚುನಾವಣೆ ಇದೇ ವರ್ಷ ಡಿಸೆಂಬರ್ನಲ್ಲೇ ಎದುರಾಗುವ ಸಾಧ್ಯತೆಗಳಿವೆ. ಕಾರ್ಯಕರ್ತರು ಈಗಿನಿಂದಲೇ ಸಜ್ಜಾಗಬೇಕೆಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಕರೆ ನೀಡಿದರು.
ಶುಕ್ರವಾರ ಜೆಡಿಎಸ್ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ 'ಜನತಾಮಿತ್ರ' ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕನಿಷ್ಠ ಹದಿನೈದು ಕ್ಷೇತ್ರಗಳನ್ನು ಗೆಲ್ಲುವ ಸಾಮರ್ಥ್ಯ ಜೆಡಿಎಸ್ ಗೆ ಇದೆ.
ವಿಧಾನಸಭೆ ಮತ್ತು ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಯಕರ್ತರು ಸಂಘಟಿತರಾಗಬೇಕು. ಬೆಂಗಳೂರು ಹಂತ ಹಂತವಾಗಿ ಬೆಳೆಯುತ್ತಿದೆ. ಬೆಂಗಳೂರಿನಲ್ಲಿ ನಮ್ಮ ಪಕ್ಷ ಶಕ್ತಿಯುತವಾಗಿಲ್ಲ ಎಂಬ ಭಾವನೆಯನ್ನ ತೆಗೆದುಹಾಕಬೇಕು ಎಂದರು.
"ಕಾರ್ಯಕರ್ತರು ರಾಜರಾಜೇಶ್ವರಿ ನಗರದಲ್ಲಿ ಜೆಡಿಎಸ್ ಮತಗಳಿರುವುದನ್ನು ಮರೆಯಬಾರದು. ಜೆಡಿಎಸ್ ನಾಯಕರು ಅಧಿಕಾರಲ್ಲಿದ್ದಾಗ ಅಕ್ರಮವಾಗಿ ಹಣ ಲೂಟಿ ಮಾಡಿಲ್ಲ. ನಮ್ಮಲ್ಲಿ ಮೂರು ಜನ ಶಾಸಕರು ಪಕ್ಷದಲ್ಲಿದ್ದರು. ಅವರೂ ಬೇರೆ ಕಡೆ ಹೋಗಿದ್ದಾರೆ. ಚಾಮರಾಜಪೇಟೆಯಲ್ಲಿ ನಮ್ಮ ನಾಯಕರು ಹೋರಾಟ ಮಾಡಿದರು. ಅದರಿಂದಾಗಿ ಚಾಮರಾಜಪೇಟೆ, ಪುಲಕೇಶಿನಗರ, ಮಹಾಲಕ್ಷ್ಮಿ ಲೇಔಟ್ನಲ್ಲಿ ಗೆದ್ದೆವು. ಪಕ್ಷ ಉಳಿದರೆ ನಾವೆಲ್ಲಾ ಉಳಿಯುತ್ತೇವೆ" ಎಂದರು ತಿಳಿಸಿದರು.
2 ಬಾರಿ ಸಿಎಂ ಆಗಿದ್ದೇನೆ
ದೇವರ ದಯೆಯಿಂದ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಇತಿಹಾಸದ ಪುಟ ಸೇರಿದ್ದೇನೆ. ಈಗಿನ ಸರ್ಕಾರ ಲೂಟಿ ಹೊಡೆಯುತ್ತಿದೆ. ಇದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ನನಗೆ ಒಂದು ಅವಕಾಶ ಕೊಡಲಿ. ನಮಗೆ ಇಪ್ಪತ್ತು ವರ್ಷ ಬೇಡ ಐದು ವರ್ಷದ ಅವಕಾಶ ಕೊಟ್ಟರೆ ಸಾಕು ಎಂದು ಮನವಿ ಮಾಡಿದರು.
ಜೆಡಿಎಸ್ ಕಾರ್ಯಕರ್ತರು ಪ್ರತಿ ಮನೆ ಮನೆಗೂ ಹೋಗಿ, ಜನರ ಆದ್ಯತೆ ಏನು ಎಂಬುದನ್ನು ಅರಿಯುವ ಕೆಲಸ ಮಾಡಿ. ಜನರಿಂದ ಎಲ್ಲ ಮಾಹಿತಿಯನ್ನು ಸಂಗ್ರಹಿಸೋಣ. ಅದರಂತೆ ನಡೆಯೋಣ. ಮುಂದೆ ಜೆಡಿಎಸ್ ಅಧಿಕಾರಕ್ಕೆ ಜನರ ಸಮಸ್ಯೆಗೆ ಪರಿಹಾರ ಕಲ್ಪಿಸಲು ಅನುಕೂಲವಾಗಲಿದೆ ಎಂದರು.
15ದಿನದ ಜನತಾ ಕಾರ್ಯಕ್ರಮ
ಹದಿನೈದು ದಿನಗಳ ಕಾಲ ನಡೆಯಲಿರುವ 'ಜನತಾ ಮಿತ್ರ' ಕಾರ್ಯಕ್ರಮಕ್ಕೆ ಇಂದು ಚಾಲನೆ ದೊರೆತಿದೆ. ಬೆಂಗಳೂರು ನಗರದ ಕಾರ್ಯಕರ್ತರ ಸಮಾವೇಶವನ್ನು ಜುಲೈ 17 ಬೃಹತ್ ಪ್ರಮಾಣದಲ್ಲಿ ನಡೆಸುತ್ತೇವೆ. ಅಂದು ಸುಮಾರು ಒಂದೂವರೆ ಲಕ್ಷ ಜನ ಸಮಾರೋಪ ಸಮಾರಂಭದಲ್ಲಿ ಪಾಳ್ಗೊಳ್ಳುವ ನಿರೀಕ್ಷೆ ಇದೆ ಎಂದು ಕುಮಾರಸ್ವಾಮಿ ತಿಳಿಸಿದರು.
2 ಪಕ್ಷಗಳಿಂದ ರಾಜಧಾನಿ ಹಾದಿ ತಪ್ಪುತ್ತಿದೆ
ಬೆಂಗಳೂರು ಜನರನ್ನು ಎರಡೂ ರಾಷ್ಟ್ರೀಯ ಪಕ್ಷಗಳು ಹಾದಿ ತಪ್ಪಿಸುತ್ತಿವೆ. ಬೆಂಗಳೂರು ಆ ಎರಡು ಪಕ್ಷಗಳಿಂದ ನಗರಕ್ಕೆ ಏನು ಕೊಡುಗೆ ಸಿಕ್ಕಿದೆ. ಬ್ಯಾಟರಾಯನಪುರ, ಯಲಹಂಕದ ಬಡವಾಣೆಗಳನ್ನು ನೋಡಿದ್ದೇನೆ. ಪ್ರಾಣಿಗಳು ಬದಕಲು ಆಗದಂತಹ ಪರಿಸ್ಥಿತಿ ಇದೆ. ಬೆಂಗಳೂರು ನಗರವನ್ನು ಸಿಂಗಾಪುರ ಮಾಡುತ್ತೇವೆ ಎಂದು ಸುಳ್ಳು ಹೇಳಿ ಪ್ರಚಾರ ಪಡೆದಿದ್ದರು. ಸಿಂಗಾಪುರ ಮಾಡಲು ಹೊರಟಿದ್ದ ಸರ್ಕಾರ ಬೆಂಗಳೂರಿನ ಕೆರೆಕಟ್ಟೆಗಳನ್ನು ನಾಶ ಮಾಡಿದೆ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಆಗಸ್ಟ್ ನಲ್ಲಿ 'ಪಂಚರತ್ನ ರಥಯಾತ್ರೆ
ಮುಂದಿನ ತಿಂಗಳ ಆಗಸ್ಟ್ ನಲ್ಲಿ ಜೆಡಿಎಸ್ 'ಪಂಚರತ್ನ ರಥಯಾತ್ರೆ' ಕಾರ್ಯಕ್ರಮ ಆರಂಭಿಸಲಿದೆ. ಅದರ ಮೂಲಕ ಹಳ್ಳಿ ಹಳ್ಳಿಗೆ ಹೋಗುತ್ತೇವೆ. ಮೂರು ತಿಂಗಳು ಬೆಂಗಳೂರಿಗೆ ಬರುವುದಿಲ್ಲ. ರಾಜ್ಯಾದ್ಯಂತೆ ಮೂಲೆ ಮೂಲೆ ಸುತ್ತಿ ಜನರನ್ನು ಸಂಪರ್ಕಿಸುತ್ತೇನೆ. ಹದಿನೈದು ದಿನ ಬೆಂಗಳೂರಿಗೆ ಮೀಸಲು ಇಟ್ಟಿದ್ದೇನೆ. ಎಲ್ಲೆಲ್ಲಿ ಜನತಾ ಮಿತ್ರ ಕಾರ್ಯಕ್ರಮ ಮಾಡುತ್ತಾರೋ ಅಲ್ಲಿಗೆ ಹೋಗಿ ಮಾತನಾಡುತ್ತೇನೆ ಎಂದು ಮುಂದಿನ ಯೋಜನೆ ಕುರಿತು ವಿವರಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರು, ಜೆಡಿಎಸ್ ರಾಜ್ಯಾಧ್ಯಕ್ಷ ಸಿ. ಎಂ. ಇಬ್ರಾಹಿಂ, ಶಾಸಕ ಆರ್. ಮಂಜುನಾಥ್, ಕೇರಳ ರಾಜ್ಯದ ಜೆಡಿಎಸ್ ಪಕ್ಷದ ಸಚಿವ ಕೃಷ್ಣನ್ ಕುಟ್ಟಿ, ಕೇರಳ ಜೆಡಿಎಸ್ ಶಾಸಕ ಥಾಮಸ್ ಟಿ. ಮ್ಯಾಥ್ಯೂ, ಜೆಡಿಎಸ್ ನಗರ ಅಧ್ಯಕ್ಷ ಆರ್. ಪ್ರಕಾಶ ಮುಂತಾದವರು ಭಾಗವಹಿಸಿದ್ದರು.
Recommended Video