ಹೊಸಕೋಟೆಯಲ್ಲಿ ಜೆಡಿಎಸ್ ಸ್ಪರ್ಧೆ: ಕುಮಾರಸ್ವಾಮಿ ಅಚ್ಚರಿಯ ನಿರ್ಧಾರ
ಬೆಂಗಳೂರು, ನವೆಂಬರ್ 13: ರಾಜ್ಯ ರಾಜಕೀಯದಲ್ಲಿ ಮತ್ತೆ ಚುನಾವಣಾ ಕಾವು ಏರಿದೆ. 15 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆ ಬಿರುಸಾಗಿದೆ. ಹೊಸಕೋಟೆ ಕ್ಷೇತ್ರದಲ್ಲಿ ನಡೆಯಲಿರುವ ಉಪ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಇಳಿಸುವ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಡಿ. 5ರಂದು ನಡೆಯಲಿರುವ 15 ಕ್ಷೇತ್ರಗಳಲ್ಲಿನ ಉಪ ಚುನಾವಣೆ ಕುತೂಹಲ ಮೂಡಿಸಿದೆ. ತಮ್ಮ ಅನರ್ಹತೆಯನ್ನು ಪ್ರಶ್ನಿಸಿ ಕಾನೂನು ಸಮರ ನಡೆಸಿದ್ದ ಬಂಡಾಯ ಶಾಸಕರು ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಪಡೆದುಕೊಂಡಿದ್ದಾರೆ. ಈ ಶಾಸಕರು ಗುರುವಾರ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆ ಇದೆ. ಆ ಕೂಡಲೇ ಈ 15 ಕ್ಷೇತ್ರಗಳಲ್ಲಿ ಈ ಶಾಸಕರಿಗೆ ಅಥವಾ ಅವರು ಸೂಚನೆ ನೀಡುವ ಅಭ್ಯರ್ಥಿಗೆ ಟಿಕೆಟ್ ಸಿಗಲಿದೆ ಎನ್ನಲಾಗುತ್ತಿದೆ.
ಶರತ್ ಬಚ್ಚೇಗೌಡಗೆ ಆರ್.ಅಶೋಕ್ ಎಚ್ಚರಿಕೆ
ಈ ಕ್ಷೇತ್ರಗಳಲ್ಲಿ ಹೊಸಕೋಟೆ ವಿಧಾನಸಭೆ ಕ್ಷೇತ್ರ ಹೆಚ್ಚಿನ ಕುತೂಹಲ ಮೂಡಿಸಿದೆ. ಸಿದ್ದರಾಮಯ್ಯ ಅವರ ಆಪ್ತರ ವಲಯದಲ್ಲಿ ಗುರುತಿಸಿಕೊಂಡಿದ್ದ ಎಂಟಿಬಿ ನಾಗರಾಜ್, ಬಿಜೆಪಿಯಿಂದ ಸ್ಪರ್ಧಿಸುವುದಾಗಿ ಹೇಳಿಕೊಂಡಿದ್ದಾರೆ. ಹೊಸಕೋಟೆಯ ರಣರಂಗದಲ್ಲಿ ಅವರನ್ನು ಎದುರಿಸುವುದಾಗಿ ಡಿಕೆ ಶಿವಕುಮಾರ್ ಅವರಿಗೆ ಈ ಹಿಂದೆ ಸವಾಲು ಹಾಕಿದ್ದರು. ಎಂಟಿಬಿ ನಾಗರಾಜ್ ಅವರಿಗೆ ಹೊಸಕೋಟೆಯಲ್ಲಿ ಟಿಕೆಟ್ ನೀಡುವುದನ್ನು ವಿರೋಧಿಸಿ ಸಂಸದ ಬಿ.ಎನ್. ಬಚ್ಚೇಗೌಡ ಅವರ ಮಗ ಶರತ್ ಬಚ್ಚೇಗೌಡ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಕಾಂಗ್ರೆಸ್ ಕೂಡ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಆದರೆ ಜೆಡಿಎಸ್ ನಡೆ ಕುತೂಹಲ ಮೂಡಿಸಿದೆ.
ನಾಳೆ ನಾಮಪತ್ರ ಸಲ್ಲಿಕೆ
ಕಾಂಗ್ರೆಸ್ನಲ್ಲಿ ಬಂಡಾಯವೆದ್ದಿದ್ದ ಶಾಸಕ ಎಂಟಿಬಿ ನಾಗರಾಜ್ ಅವರಿಗೆ ಟಿಕೆಟ್ ನೀಡಲು ಬಿಜೆಪಿ ಮುಂದಾಗಿದೆ. ರಾಜೀನಾಮೆ ಪರ್ವ ಆರಂಭವಾದ ಸಮಯದಿಂದಲೂ ಬಿಜೆಪಿ ವಿರುದ್ಧ ಸಿಡಿದೆದ್ದಿರುವ ಶರತ್ ಬಚ್ಚೇಗೌಡ, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಹೊಸಕೋಟೆಯಲ್ಲಿ ಬಿಜೆಪಿಯಿಂದ ಮುಂದಿನ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಅವಕಾಶ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಶರತ್ ಬಚ್ಚೇಗೌಡ, ತಮ್ಮ ನಿರೀಕ್ಷೆ ಹುಸಿಯಾಗುತ್ತದೆ ಎಂಬ ಸುಳಿವು ಸಿಗುತ್ತಿದ್ದಂತೆಯೇ ಪಕ್ಷೇತರರಾಗಿ ಸ್ಪರ್ಧಿಸಲು ತಯಾರಿ ನಡೆಸಿದ್ದರು. ಗುರುವಾರ ಬೆಳಿಗ್ಗೆ 10.30ಕ್ಕೆ ಪಕ್ಷದ ಕಚೇರಿಯಿಂದ ತಹಶೀಲ್ದಾರ್ ಕಚೇರಿಗೆ ಪಾದಯಾತ್ರೆ ತೆರಳಿ ಅವರು ನಾಮಪತ್ರ ಸಲ್ಲಿಸಲಿದ್ದಾರೆ.
ಶರತ್ ಬಚ್ಚೇಗೌಡಗೆ ಬೆಂಬಲ
ಎಲ್ಲ 15 ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಇಳಿಸುವುದಾಗಿ ಹೇಳಿಕೊಂಡಿದ್ದ ಜೆಡಿಎಸ್, ಹೊಸಕೋಟೆ ಉಪ ಚುನಾವಣೆಯ ವಿಚಾರದಲ್ಲಿ ತನ್ನ ನಿಲುವು ಬದಲಿಸಿದೆ. ಇಲ್ಲಿ ಅಭ್ಯರ್ಥಿಯನ್ನು ಇಳಿಸುವ ಬದಲು ಪಕ್ಷೇತರ ಅಭ್ಯರ್ಥಿಗೆ ಬೆಂಬಲ ನೀಡುವ ಬಗ್ಗೆ ಆಲೋಚನೆ ಮಾಡುತ್ತಿದೆ. ಹೊಸಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿಗೆ ನಮ್ಮ ಅಗತ್ಯವಿದ್ದರೆ ಬೆಂಬಲ ನೀಡುತ್ತೇವೆ ಎಂದು ಎಚ್ ಡಿ ಕುಮಾರಸ್ವಾಮಿ ಬುಧವಾರ ತಿಳಿಸಿದರು.
ಉಪಚುನಾವಣೆಗೆ ಮುನ್ನ ಬಚ್ಚೇಗೌಡ್ರ ವಿರುದ್ದ ಎಂಟಿಬಿ ನಾಗರಾಜ್ ಸ್ಪೋಟಕ ಆರೋಪ
ಮನವಿ ಮಾಡಿದರೆ ಬೆಂಬಲ
14 ಕ್ಷೇತ್ರಗಳಿಗೆ ನಮ್ಮ ಅಭ್ಯರ್ಥಿಗಳನ್ನು ಹಾಕಲಿದ್ದೇವೆ. ಶರತ್ ಬಚ್ಚೇಗೌಡ ಅವರು ಹೊಸಕೋಟೆಯಲ್ಲಿ ನಮ್ಮ ಅಗತ್ಯವಿದೆ ಎಂದು, ಬೆಂಬಲ ನೀಡುವಂತೆ ಮನವಿ ಮಾಡಿದರೆ ಅಲ್ಲಿ ಅಭ್ಯರ್ಥಿಯನ್ನು ಹಾಕದೆ ಅವರಿಗೆ ಬೆಂಬಲ ನೀಡುವ ಕುರಿತು ಸಭೆಯಲ್ಲಿ ಚರ್ಚೆ ಮಾಡಲಿದ್ದೇವೆ ಎಂದು ಕುಮಾರಸ್ವಾಮಿ ಹೇಳಿದರು.
ಅವರ ಹೊರಗಿನವರಲ್ಲ, ನಮ್ಮವರೇ
ಪಕ್ಷೇತರರಾಗಿ ಶರತ್ ಬಚ್ಚೇಗೌಡ ಅವರು ಹೊರಗಿನವರಲ್ಲ. ಅವರು ನಮ್ಮವರೇ. ಬಚ್ಚೇಗೌಡರು ಮೂಲ ಜನತಾದಳದವರು ಎಂದು ಹೇಳಿದರು. ಆದರೆ ಬಿಜೆಪಿ ಸಂಸದ ಬಿಎನ್ ಬಚ್ಚೇಗೌಡ ಮತ್ತು ಜೆಡಿಎಸ್ ವರಿಷ್ಠ ಬದ್ಧ ರಾಜಕೀಯ ವೈರಿಗಳಾಗಿದ್ದಾರೆ. ಇಬ್ಬರ ನಡುವಿನ ವೈರತ್ವ ಸಾಕಷ್ಟು ಚರ್ಚೆಯಾಗಿತ್ತು. ಈಗ ಬಚ್ಚೇಗೌಡರ ಮಗ ಶರತ್ ಬಚ್ಚೇಗೌಡ ಅವರಿಗೆ ಜೆಡಿಎಸ್ ಬೆಂಬಲ ನೀಡುವ ವಿಚಾರ ಅಚ್ಚರಿ ಮೂಡಿಸಿದೆ.
ಹೊಸಕೋಟೆ ಉಪ ಕದನ; ಬಿಜೆಪಿ, ಎಂಟಿಬಿಗೆ ಕಷ್ಟದ ಸಮಯ!
ಶರತ್ಗೆ ನಿಖಿಲ್ ಸಾಥ್?
ಶರತ್ ಬಚ್ಚೇಗೌಡ ಅವರ ನಾಮಪತ್ರ ಸಲ್ಲಿಕೆ ವೇಳೆ ಎಚ್ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಸಾಥ್ ನೀಡಲಿದ್ದಾರೆ ಎಂದು ಹೇಳಲಾಗಿದೆ. ಹೊಸಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಇಳಿಯಲಿರುವ ಎಂಟಿಬಿ ನಾಗರಾಜ್ ಅವರನ್ನು ಸೋಲಿಸಲು ಪಣತೊಟ್ಟಿರುವ ಜೆಡಿಎಸ್, ಪಕ್ಷೇತರ ಅಭ್ಯರ್ಥಿಗೆ ಬೆಂಬಲ ನೀಡಲು ನಿರ್ಧರಿಸಿದೆ. ರಾಜ್ಯದಲ್ಲಿ ಉಪ ಚುನಾವಣೆ ಬಳಿಕವೂ ಬಿಜೆಪಿ ಸರ್ಕಾರಕ್ಕೆ ತೊಂದರೆಯಾಗುವುದಿಲ್ಲ ಎಂದು ಎಚ್ ಡಿ ದೇವೇಗೌಡ ಹೇಳಿದ್ದರು. ಹೀಗಾಗಿ ಸರ್ಕಾರಕ್ಕೆ ತೊಂದರೆಯಾದರೂ ಬಿಜೆಪಿಗೆ ಜೆಡಿಎಸ್ ಬೆಂಬಲ ನೀಡಲಿದೆ ಎಂದು ವಿಶ್ಲೇಷಿಸಲಾಗಿತ್ತು. ಅದರ ನಡುವೆಯೇ ಹೊಸಕೋಟೆ ಕ್ಷೇತ್ರದಲ್ಲಿ ಬಿಜೆಪಿ ವಿರುದ್ಧ ಜೆಡಿಎಸ್ ಹೊಸ ನಡೆ ಕುತೂಹಲ ಮೂಡಿಸಿದೆ.