ಚುನಾವಣೆ ಹೊಸ್ತಿಲಲ್ಲಿ ಎಚ್ ಡಿ ಕುಮಾರಸ್ವಾಮಿ ಮನೆ ವಾಸ್ತು ಬದಲಾವಣೆ
Recommended Video
ಬೆಂಗಳೂರು, ಆಗಸ್ಟ್ 23: ಮಾಜಿ ಮುಖ್ಯಮಂತ್ರಿ- ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಬುಧವಾರದಂದು ಜೆ.ಪಿ.ನಗರದ ಮನೆಯ ದುರಸ್ತಿ ನಂತರ ಪೂಜೆ ಮಾಡಿ, ಗೃಹಪ್ರವೇಶ ಮಾಡಿದ್ದಾರೆ. ಅವರೇ ಹೇಳುವ ಪ್ರಕಾರ, ಹಿತೈಷಿಗಳ ಸಲಹೆ ಮೇರೆಗೆ ಕೆಲ ವಾಸ್ತು ಬದಲಾವಣೆಗಳನ್ನು ಮಾಡಿ, ಆಗಸ್ಟ್ ಇಪ್ಪತ್ಮೂರರಂದೇ ಗೃಹಪ್ರವೇಶ ಮಾಡಲಾಗಿದೆ.
ಕುಮಾರಸ್ವಾಮಿ-ಅನಿತಾ ದಂಪತಿಯಿಂದ ಹುಬ್ಬಳ್ಳಿಯಲ್ಲಿ ಗೃಹಪ್ರವೇಶ
ಕಳೆದ ಕೆಲ ವರ್ಷಗಳಿಂದ ಕುಮಾರಸ್ವಾಮಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಪಕ್ಷದೊಳಗೆ ಕೂಡ ಕೆಲವು ಅನಿರೀಕ್ಷಿತ ಬದಲಾವಣೆಗಳಾಗಿ ಗೆಳೆಯರಾಗಿದ್ದವರೇ ಶತ್ರುಗಳಾದಂತಾಗಿದೆ. ಇವೂ ಸೇರಿದಂತೆ ಇತರ ಕಾರಣಗಳಿಗಾಗಿ ವಾಸ್ತು ಬದಲಾವಣೆಗಾಗಿ ತೀರ್ಮಾನಿಸಲಾಗಿತ್ತು.
ಈ ಬಗ್ಗೆ ಬುಧವಾರ ಮಾಧ್ಯಮದೊಂದಿಗೆ ಮಾತನಾಡಿದ ಎಚ್ ಡಿಕೆ, ಈ ಮನೆಯನ್ನು ಮಾರಲು ನನಗೆ ಇಷ್ಟವಿರಲಿಲ್ಲ. ಇಲ್ಲಿ ನನಗೆ ಹೆಚ್ಚಿನ ನೆಮ್ಮದಿ ಸಿಕ್ಕಿದೆ. ನಾನು ಮುಖ್ಯಮಂತ್ರಿ ಆಗುವ ಮೊದಲಿನಿಂದಲೂ ರಾಜ್ಯದ ನಾನಾ ಭಾಗಗಳಿಂದ ಇಲ್ಲಿಗೆ ಜನರು ಬಂದು ನನ್ನನ್ನು ಕಾಣುತ್ತಿದ್ದರು. ಆದ್ದರಿಂದ ಈ ಮನೆಯ ಬಗ್ಗೆ ವಿಶೇಷ ಪ್ರೀತಿ ಇದೆ. ಆದ್ದರಿಂದ ವಾಸ್ತು ಪ್ರಕಾರ ನವೀಕರಣ ಮಾಡಿಸಲಾಗಿದೆ ಎಂದು ತಿಳಿಸಿದರು.
ಜೆಡಿಎಸ್ ಅಧಿಕಾರಕ್ಕೆ ಬರುತ್ತದೆ
ಬುಧವಾರದಂದು ಮನೆಯೊಳಗೆ ಗೋವಿನ ಪ್ರವೇಶ ಮಾಡಿಸಲಾಗಿದೆ. ಕುಮಾರಸ್ವಾಮಿ-ಅನಿತಾ ದಂಪತಿ ವಿಶೇಷ ಪೂಜೆ ಕೂಡ ಸಲ್ಲಿಸಿದ್ದಾರೆ. ಇದೇ ಮನೆಯಲ್ಲಿದ್ದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುತ್ತದೆ. ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಸಿ ಫೋರ್ ಸಮೀಕ್ಷೆಗೆ ವಾಗ್ದಾಳಿ
ಇನ್ನು ಇದೇ ವೇಳೆ ಸಿ ಫೋರ್ ಸಮೀಕ್ಷೆ ಬಗ್ಗೆ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಸಿ ಫೋರ್ ನ ವ್ಯವಸ್ಥಾಪಕ ನಿರ್ದೇಶಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಷನ್ ಗ್ರೂಪ್ ನಲ್ಲಿ ಇದ್ದಾರೆ. ಸಿಎಂ ತಮಗೆ ಬೇಕಾದಂತೆ ಸಮೀಕ್ಷೆ ಹೊರಬರುವಂತೆ ನೋಡಿಕೊಂಡಿದ್ದಾರೆ ಎಂದು ಹೇಳಿದರು.
ಕಾಲಭೈರವೇಶ್ವರನ ಸನ್ನಿಧಿಯಲ್ಲಿ ಅಮಾವಾಸ್ಯೆ ಪೂಜೆ
ಇನ್ನು ಕಳೆದ ಕೆಲ ತಿಂಗಳಿಂದ ಆದಿಚುಂಚನಗಿರಿಯ ಕಾಲಭೈರವೇಶ್ವರನ ಸನ್ನಿಧಿಯಲ್ಲಿ ಪ್ರತಿ ಅಮಾವಾಸ್ಯೆಯಂದು ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದಿಂದ ಪೂಜೆ ಮಾಡುತ್ತಾ ಬರಲಾಗಿದೆ. ಮೊನ್ನೆಯ ಅಮಾವಾಸ್ಯೆ ಎಚ್.ಡಿ.ರೇವಣ್ಣ ದಂಪತಿ ಪೂಜೆಯಲ್ಲಿ ಭಾಗವಹಿಸಿದ್ದರು. ಅದಕ್ಕೂ ಮುನ್ನ ಕುಮಾರಸ್ವಾಮಿ ದಂಪತಿ ಪೂಜೆ ಸಲ್ಲಿಸಿದ್ದರು.
ಸರ್ಪ ಕಾಣಿಸಿಕೊಂಡಿತ್ತು
ದೇವೇಗೌಡರ ಕುಟುಂಬಕ್ಕೆ ವಾಸ್ತು-ಜ್ಯೋತಿಷ್ಯದಲ್ಲಿ ಅಪಾರ ನಂಬಿಕೆ ಇದ್ದು, ಕುಮಾರಸ್ವಾಮಿ ಅವರ ಮನೆ ಬಳಿ ಸರ್ಪ ಕಾಣಿಸಿಕೊಂಡಿತ್ತು. ಅದು ಶುಭ ಸೂಚನೆಯಲ್ಲ ಎಂಬುದು ಜ್ಯೋತಿಷ್ಯ ಶಾಸ್ತ್ರದ ಉಲ್ಲೇಖ. ಅದನ್ನೂ ಗಮನದಲ್ಲಿಟ್ಟುಕೊಂಡು ಬುಧವಾರ ಪೂಜೆ-ಪುನಸ್ಕಾರ ಮಾಡಲಾಗಿದೆ ಎಂದು ಕೂಡ ವಿಶ್ಲೇಷಣೆ ನಡೆದಿದೆ.