ಪಿಯುಸಿ ಮೌಲ್ಯಮಾಪನಕ್ಕಾಗಿ ಉಪನ್ಯಾಸಕರಿಗೆ ಸರ್ಕಾರದಿಂದ ಧಮ್ಕಿ: ಎಚ್ಡಿಕೆ ಆರೋಪ
ಬೆಂಗಳೂರು, ಮೇ 30: ರಾಜ್ಯದಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಆತಂಕ ಹೆಚ್ಚಿಸುತ್ತಿದೆ. ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಮುಂದಾಗಿರುವುದು ದುರದೃಷ್ಟಕರ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಖಂಡಿಸಿದ್ದಾರೆ.
ದ್ವಿತೀಯ ಪಿಯುಸಿ ಬಾಕಿ ಉಳಿದಿದ್ದ ಇಂಗ್ಲಿಷ್ ಪರೀಕ್ಷೆ ಜೂನ್ 18 ರಂದು ಪರೀಕ್ಷೆ ನಡೆಯಲಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಈ ಕಡೆ ಪರೀಕ್ಷೆ ಮುಗಿಯುತ್ತಿದ್ದ ಜುಲೈ 8 ರೊಳಗೆ ಫಲಿತಾಂಶ ಪ್ರಕಟ ಮಾಡಲಿದ್ದೇವೆ ಎಂದು ಪ್ರಕಟಿಸಿದ್ದಾರೆ.
ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ದಿನಾಂಕ ಪ್ರಕಟ
ಕೊರೊನಾ ವೈರಸ್ ಸಮುದಾಯಕ್ಕೆ ಹರಡುವ ಭೀತಿ ಉಂಟಾಗಿರುವ ಈ ಸಮಯದಲ್ಲಿ ಮೌಲ್ಯಮಾಪನಕ್ಕೆ ಹಾಜರಾಗುವಂತೆ ಉಪನ್ಯಾಸಕರ ಮೇಲೆ ರಾಜ್ಯ ಸರ್ಕಾರ ಒತ್ತಡ ಹಾಕುತ್ತಿರುವುದು ಅವಿವೇಕದ ಕ್ರಮ ಎಂದು ಟೀಕಿಸಿದ್ದಾರೆ. ಮುಂದೆ ಓದಿ....
ಉಪನ್ಯಾಸಕರ ಜೀವದೊಂದಿಗೆ ಸರ್ಕಾರ ಚೆಲ್ಲಾಟ
ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಉಪನ್ಯಾಸಕರ ಮೇಲೆ ರಾಜ್ಯ ಸರ್ಕಾರ ಒತ್ತಡ ತಂತ್ರ ಹೇರುತ್ತಿರುವುದು ಖಂಡನೀಯ. ಕರೋನಾ ಸೋಂಕು ಸಮುದಾಯಕ್ಕೆ ವ್ಯಾಪಿಸುವ ಭೀತಿಯಲ್ಲಿರುವಾಗ ಬೆದರಿಕೆಯ ಅಸ್ತ್ರ ಬಳಸುವ ಮೂಲಕ ಉಪನ್ಯಾಸಕರ ಜೀವದೊಂದಿಗೆ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ಕುಮಾರಸ್ವಾಮಿ ವಿರೋಧ ವ್ಯಕ್ತಪಡಿಸಿದ್ದಾರೆ.
ಒಬ್ಬರಿಗೆ ಕೊರೊನಾ ಬಂದ್ರೆ ಏನ್ ಮಾಡ್ತೀರಾ?
ಮೌಲ್ಯಮಾಪನ ಶಿಬಿರದಲ್ಲಿ ಸಾವಿರಾರು ಉಪನ್ಯಾಸಕರ ಭಾಗವಹಿಸಬೇಕಾಗುತ್ತದೆ. ಈ ವೇಳೆ ದೊಡ್ಡ ಸಮೂಹ ಒಂದೆಡೆ ಸೇರಬೇಕಾಗುತ್ತದೆ. ಅವರೆಲ್ಲರೂ ಬೇರೆ ಬೇರೆ ಕಡೆಯಿಂದ ಪ್ರಯಾಣಿಸಬೇಕು. ಬಹುತೇಕರು ಬಸ್ನಲ್ಲಿ ಸಂಚಾರ ಮಾಡಬೇಕು. ಅಷ್ಟು ಜನರು ಕೆಲವೇ ಶೌಚಾಲಯ ಬಳಸಬೇಕು, ಒಂದೇ ಕ್ಯಾಂಟೀನ್ ಅವಲಂಭಿಸಬೇಕು, ಒಂದೇ ಕಂಪ್ಯೂಟರ್ನಲ್ಲಿ ಅಪ್ಲೌಡ್ ಮಾಡಬೇಕು. ಇಂತಹ ಪರಿಸ್ಥಿತಿಯಲ್ಲಿ ಯಾರಿಗಾದರೂ ಒಬ್ಬರಿಗೆ ಕೊವಿಡ್ ಬಂದ್ರೆ ಏನು ಮಾಡ್ತೀರಾ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಕ್ವಾರಂಟೈನ್ ಮಾಡಲು ಸಾಧ್ಯವೇ? ಆಮೇಲೆ ಏನು?
ನೆಗಡಿ, ಕೆಮ್ಮು, ದೇಹದ ಉಷ್ಣತೆ ಆಧರಿಸಿ ಸೋಂಕು ದೃಢಪಟ್ಟಿರುವುದರನ್ನು ಪತ್ತೆ ಹಚ್ಚಲಾಗುತ್ತಿದೆ. ಈ ನಡುವೆ ರೋಗಲಕ್ಷಣಗಳೇ ಇಲ್ಲದ ವ್ಯಕ್ತಿಗಳಿಗೂ ಸೋಂಕು ಖಚಿತವಾಗಿದೆ. ಇಂತಹ ಆತಂಕ ಇರುವಾಗ ಮೌಲ್ಯಮಾಪನ ಎಷ್ಟು ಅಗತ್ಯ? ಒಂದೇ ಸಮಯದಲ್ಲಿ 500-800 ಜನರನ್ನು ಕ್ವಾರಂಟೈನ್ ಮಾಡ್ತೀರಾ? ಒಮ್ಮೆ ಕ್ವಾರಂಟೈನ್ಗೆ ಒಳಗಾದರೆ ಮೌಲ್ಯಮಾಪನ ಸ್ಥಗಿತಗೊಳ್ಳಬೇಕೆ? ಆಗ ಫಲಿತಾಂಶ ಬಿಡುಗಡೆಗೆ ಹಿನ್ನಡೆಯಾಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
'ಧಮ್ಕಿ' ಹಾಕಿಸುತ್ತಿರುವುದು ಸರಿಯಾದ ಕ್ರಮವಲ್ಲ
ಸೂಕ್ತ ವಸತಿ, ಸಾರಿಗೆ ಮತ್ತು ಹೋಟೆಲ್ ಸೌಲಭ್ಯ ಇಲ್ಲದಿರುವಾಗ ಹೊರ ಜಿಲ್ಲೆಗಳಿಗೆ ಹೋಗಿ ಉಪನ್ಯಾಸಕರು ಮೌಲ್ಯಮಾಪನ ಮಾಡುವುದು ಬಲು ಕಷ್ಟ. ಯಾವುದೇ ಕನಿಷ್ಠ ಸೌಲಭ್ಯಗಳನ್ನು ಒದಗಿಸದೆ ಮೌಲ್ಯಮಾಪನಕ್ಕೆ ಒತ್ತಡ ತಂತ್ರ ಅನುಸರಿಸುತ್ತಿರುವುದನ್ನು ಸರ್ಕಾರ ಕೂಡಲೇ ಕೈಬಿಡಬೇಕು. ಡಿಡಿಪಿಐ ಗಳು, ಜಿಲ್ಲಾಧಿಕಾರಿಗಳಿಂದ ಮೌಲ್ಯಮಾಪನಕ್ಕೆ ಬರದಿದ್ದರೆ ವೇತನರಹಿತ ರಜೆ ಎಂಬ 'ಧಮ್ಕಿ' ಹಾಕಿ ಸುತ್ತಿರುವುದು ಸರ್ಕಾರದ ಅವಿವೇಕದ ಕ್ರಮ. ಪಿಯುಸಿ ಎಕ್ಸಾಮ್ ಮುಗಿಯಲು ಜೂನ್ 18 ರವರೆಗೆ ಕಾಲಾವಕಾಶ ಇದೆ. ಸರ್ಕಾರ 'ಗುಬ್ಬಿ ಮೇಲೆ ಬ್ರಹ್ಮಾಸ್ತ್ರ" ಪ್ರಯೋಗ ಮಾಡಲು ಮುಂದಾಗಿರುವುದನ್ನು ತಕ್ಷಣ ಸ್ಥಗಿತ ಗೊಳಿಸುವಂತೆ ಆಗ್ರಹಿಸುತ್ತೇನೆ'' ಎಂದಿದ್ದಾರೆ.