ಮನೆ ಬಾಡಿಗೆಯಿಂದ ವಿನಾಯಿತಿ ಘೋಷಿಸಿ: ಮೋದಿಗೆ ಎಚ್ಡಿಕೆ ಆಗ್ರಹ
ಬೆಂಗಳೂರು, ಏಪ್ರಿಲ್ 12: ಲಾಕ್ಡೌನ್ ಜಾರಿಯಲ್ಲಿರುವುದರಿಂದ ದೇಶದ ಆರ್ಥಿಕ ಚಟುವಟಿಕೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಇದು ಸಾಮಾನ್ಯ ಜನರಿಗೆ ಭಾರಿ ಸಂಕಷ್ಟ ತಂದಿದೆ. ಪಡಿತರ, ಬ್ಯಾಂಕ್ ಸಾಲ, ಇನ್ನಿತರ ಸಾಲ ಹಾಗೂ ಮನೆ ಬಾಡಿಗೆ ಹೀಗೆ ಉದ್ಯೋಗ ಇಲ್ಲದೇ ಇದನ್ನೆಲ್ಲ ನಿಭಾಯಿಸಲು ಸಾಧ್ಯವಾಗುತ್ತಿಲ್ಲ.
ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವವರಿಗೆ ಬಾಡಿಗೆ ವಿನಾಯಿತಿ ಘೋಷಿಸಿ ಎಂದು ದೇಶದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ ದೆಹಲಿ ಮಾದರಿ ಇಡಿ ದೇಶದಲ್ಲಿ ನಿಯಮ ತನ್ನಿ ಎಂದು ಆಗ್ರಹಿಸಿದ್ದಾರೆ. ಮುಂದೆ ಓದಿ...
ಬಾಡಿಗೆ ವಿನಾಯಿತಿ ಯೋಜನೆ
''ಆರ್ಥಿಕ ಚಟುವಟಿಕೆ ಸಮಗ್ರವಾಗಿ ಸ್ಥಗಿತಗೊಂಡ ಈ ದಿನಗಳಲ್ಲಿ ಎಂದಿನಂತೆ ಪ್ರತಿ ತಿಂಗಳು ಮನೆ ಬಾಡಿಗೆಯನ್ನು ಕೊಡಲೇಬೇಕು ಅಂತ ಮಾಲೀಕರು ಪಟ್ಟು ಹಿಡಿದರೆ ಆರ್ಥಿಕ ಹೊರೆಯನ್ನು ತಾಳಲಾರದ ಬಾಡಿಗೆದಾರ ಇನ್ನೊಂದು ಮನೆ ಹುಡುಕಿಕೊಂಡು ಹೋಗುವ ಸ್ಥಿತಿಯೂ ಇಲ್ಲವಾದ್ದರಿಂದ, ಕೇಂದ್ರ ಸರಕಾರ ಈ ಕೂಡಲೇ ಬಾಡಿಗೆ ವಿನಾಯಿತಿ ಯೋಜನೆಯನ್ನು ಘೋಷಿಸಬೇಕು'' ಎಂದು ಮೋದಿ ಅವರನ್ನು ಆಗ್ರಹಿಸಿದ್ದಾರೆ.
ಕೊರೊನಾ ಕುರಿತು ಜಪಾನ್ ಪ್ರಧಾನಿ ಜೊತೆ ಚರ್ಚೆ: ಮೋದಿ ಹೇಳಿದ್ದೇನು?
ಬಾಡಿಗೆ ಪಡೆಯದೆ ಉದಾರತೆ ತೋರಲಿ
'ದೆಹಲಿ ಮುಂಬಯಿ ಬೆಂಗಳೂರಿನಂತಹ ನಗರಗಳಲ್ಲಿ ವೃತ್ತಿ ಮಾಡುವ ಹಾಗೂ ಇಲ್ಲಿನ ಸಂಸ್ಥೆಗಳಲ್ಲಿ ಓದುತ್ತಿರುವ ಅನೇಕ ಜನರ ಆರ್ಥಿಕ ಸ್ಥಿತಿ ನಾಜೂಕಾಗಿದೆ. ಇಂತಹ ಸಂದರ್ಭದಲ್ಲಿ ಮನೆ, ಪಿಜಿ, ಹಾಸ್ಟೆಲ್ ಮಾಲೀಕರು ಎಂದಿನಂತೆ ಬಾಡಿಗೆ ವಸೂಲಿಗೆ ಇಳಿಯದೆ ಉದಾರತೆ ತೋರಲಿ. ಸರಕಾರ ಬಾಡಿಗೆ ವಿನಾಯಿತಿ ಘೋಷಿಸಿ ಜನಸಾಮಾನ್ಯನ ಕಷ್ಟಗಳಿಗೆ ಸ್ಪಂದಿಸಬೇಕು' ಎಂದು ಮನವಿ ಮಾಡಿದ್ದಾರೆ.
ದೆಹಲಿ ಸರ್ಕಾರ ಮಾದರಿಯಾಗಲಿ
'ಆರ್ಥಿಕ ಮುಗ್ಗಟ್ಟಿನಿಂದ ಬಾಡಿಗೆದಾರರನ್ನು ಕಾಪಾಡಲು ಅನೇಕ ದೇಶಗಳು ಕೊರೊನಾ ಸಂಕಟದ ಅವಧಿಗೆ ಬಾಡಿಗೆ ವಿನಾಯಿತಿಯನ್ನು ಘೋಷಿಸಿವೆ. ದೆಹಲಿಯ ಸರಕಾರ ಮೂರು ತಿಂಗಳ ಬಾಡಿಗೆಯನ್ನು ತಾನೇ ಕೊಡುವ ಯೋಜನೆ ಘೋಷಿಸಿದೆ. ಇಡೀ ದೇಶಕ್ಕೆ ಅನ್ವಯವಾಗುವಂತೆ ಮೂರು ತಿಂಗಳು ಬಾಡಿಗೆ ವಿನಾಯಿತಿಯನ್ನು ಸನ್ಮಾನ್ಯ ಪ್ರಧಾನಿ ಘೋಷಿಸಲು ಮನವಿ ಮಾಡಿಕೊಳ್ಳುತ್ತೇನೆ' ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ವೈಟ್ ಹೌಸ್ ಟ್ವಿಟ್ಟರ್ ನಲ್ಲಿ ಫಾಲೋ ಮಾಡುತ್ತಿರುವ ವಿಶ್ವದ ಏಕೈಕ ನಾಯಕ
ಮೋದಿ ಭಾಷಣದ ಮೇಲೆ ಕುತೂಹಲ
ಏಪ್ರಿಲ್ 14ರ ಲಾಕ್ಡೌನ್ ಮುಗಿಯುತ್ತಿರುವ ಕಾರಣ, ಲಾಕ್ಡೌನ್ ವಿಸ್ತರಣೆ ಮಾಡಲು ಎಲ್ಲ ರಾಜ್ಯ ಸರ್ಕಾರಗಳು ನಿರ್ಧರಿಸಿದೆ. ಈ ಕುರಿತು ಈಗಾಗಲೇ ರಾಜ್ಯ ಸರ್ಕಾರಗಳಿಂದ ಮಾಹಿತಿ ಪಡೆದುಕೊಂಡಿರುವ ಮೋದಿ ದೇಶವನ್ನು ಉದ್ದೇಶಿಸಿ ರಾಷ್ಟ್ರದಭಾಷಣ ಮಾಡಲಿದ್ದಾರೆ. ಈ ಸಲ ಜನರಿಗೆ ಯಾವ ರೀತಿಯ ಸೌಲಭ್ಯ ಸಿಗಲಿದೆ ಎಂದು ಕುತೂಹಲ ಹೆಚ್ಚಿದೆ. ಸದ್ಯಕ್ಕೆ ಮೋದಿ ಭಾಷಣದ ಬಗ್ಗೆ ನಿಗದಿತ ಸಮಯ ಪ್ರಕಟವಾಗಿಲ್ಲ.