ಕಾರ್ಯಕರ್ತರು ವಿಸಿಟಿಂಗ್ ಕಾರ್ಡ್ಗೆ ಸೀಮಿತವಾಗಬಾರದು: ಕುಮಾರಸ್ವಾಮಿ
ಬೆಂಗಳೂರು, ಮೇ 21: ಬೆಂಗಳೂರು ನಗರಕ್ಕೆ ನಾನು ಮಾತ್ರ ಸಾರಥಿ ಅಲ್ಲ. ಕಾರ್ಯಕರ್ತರ ಜೊತೆಗೆ ಸೇರಿ ಕೆಲಸ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಜೆಡಿಎಸ್ ಪಕ್ಷ ಕಚೇರಿ ಜೆಪಿ ಭವನದಲ್ಲಿ ಇಂದು ಶನಿವಾರ ಸಂಜೆ ಬಿಬಿಎಂಪಿ ಚುನಾವಣೆ ಹಾಗೂ ಪಕ್ಷದ ಸಂಘಟನೆ ಸಂಬಂಧಿಸಿದಂತೆ ನಗರದ ಮುಖಂಡರ ಸಭೆ ನಡೆಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಗರದಲ್ಲಿ ಒಳ್ಳೆಯ ಕಾರ್ಯಕರ್ತರು ಇದ್ದಾರೆ. ಅವರಿಗೆ ಅವಕಾಶ ಸಿಕ್ಕಿಲ್ಲ. ಬಿಬಿಎಂಪಿ ಚುನಾವಣೆಯಲ್ಲಿ ಕೆಲಸ ಮಾಡುವವರಿಗೆ ನಾನು ಪ್ರೋತ್ಸಾಹ ಕೊಡುವೆ ಎಂದರು.
ನಗರದಲ್ಲಿ ಮಳೆಯಿಂದ ಆಗಿರುವ ಸಮಸ್ಯೆ ಕುರಿತು ನಮ್ಮ ಕಾರ್ಯಕರ್ತರಿಂದ ಮಾಹಿತಿ ಕೇಳಿದ್ದೇವೆ. ಪಕ್ಷದ ಸಂಘಟನೆ ಮಾಡಲು ಜನರ ಬಳಿ ಹೇಗೆ ಹೋಗಬೇಕು ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಮುಖ್ಯವಾಗಿ ನಗರದ ಪ್ರತಿ ಬಡಾವಣೆ ಜನರ ಸಮಸ್ಯೆ ಕೇಳುವ ಬಗ್ಗೆ ಚರ್ಚೆ ನಡೆದಿದೆ. ಇದರ ಜೊತೆಗೆ ಯಾವ ರೀತಿ ಕೆಲಸ ಆಗಬೇಕು. ಜನರ ಅಪೇಕ್ಷೆ ಏನಿದೆ. ಈ ಬಗ್ಗೆ ತಿಳಿದುಕೊಳ್ಳಲು ಆಂದೋಲನ ಮಾಡುತ್ತೇವೆ. ಆಂದೋಲನದ ದಿನಾಂಕ ಕೂಡ ನಿಗದಿ ಮಾಡುತ್ತೇವೆ ಎಂದರು.
ಬಿಬಿಎಂಪಿ ಚುನಾವಣೆ: ಸುಪ್ರೀಂಕೋರ್ಟ್ ತೀರ್ಪು ಸ್ವಾಗತಿಸಿದ ಹೆಚ್.ಡಿ.ಕುಮಾರಸ್ವಾಮಿ
ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆಯೂ ಸಭೆ ಚರ್ಚೆ ಆಗಿದೆ ಎಂದ ಹೆಚ್ ಡಿಕೆ, ನಗರ ಜನರ ಸಮಸ್ಯೆ ಕೇಳಬೇಕು. ನಾನೇ ಎಲ್ಲಾ ಕಡೆ ಹೋಗಲು ಆಗುತ್ತಿಲ್ಲ. ನಮ್ಮ ಕಾರ್ಯಕರ್ತರು ಅವರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಆಗಿರುವ ಸಮಸ್ಯೆ ಕುರಿತು ನನಗೆ ಮಾಹಿತಿ ನೀಡಬೇಕೆಂದು ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಹಣ ಇದ್ದವರಿಗೆ ಕುಮಾರಸ್ವಾಮಿ ಅವರು ಟಿಕೆಟ್ ಕೊಡುತ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಹಣ ಇಲ್ಲದೆ ಇರುವವರನ್ನು ಈ ಪಕ್ಷ ಗುರುತಿಸಿದೆ. ನಿಷ್ಠಾವಂತರಿಗೂ ಶಕ್ತಿ ಕೊಡಲಾಗಿದೆ. ಹಣ ಇಲ್ಲದವರನ್ನು ಪಕ್ಷ ಗುರುತಿಸಿ ಸಹಾಯ ಮಾಡಿ ಗೌರವ ಕೊಡಲಾಗಿದೆ, ಅದಕ್ಕೆ ಬೇಕಾದ್ರೆ ನೂರಾರು ಉದಾಹರಣೆಗೆ ಕೊಡುತ್ತೇನೆ ಎಂದು ಅವರು ಹೇಳಿದರು.
ಮತ್ತೊಮ್ಮೆ ಸಿಎಂ ಆಗಲು ದೇವಮೂಲೆಯ ಈ ಕ್ಷೇತ್ರದಿಂದ ಸ್ಪರ್ಧಿಸುತ್ತಾರಾ ಎಚ್ಡಿ ಕುಮಾರಸ್ವಾಮಿ?
ಮುಖಂಡರಿಗೆ ಬುದ್ಧಿವಾದ ಹೇಳಿದ ಹೆಚ್ಡಿಕೆ:
ಇದಕ್ಕೂ ಮುನ್ನ ಶೀಘ್ರದಲ್ಲೇ ಬಿಬಿಎಂಪಿ ಚುನಾವಣೆ ಘೋಷಣೆಯಾಗುವ ಹಿನ್ನೆಲೆಯಲ್ಲಿ ಪಕ್ಷದ ಕಚೇರಿಯಲ್ಲಿ ಮಹತ್ವದ ಸಭೆ ನಡೆಯಿತು. ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ವಿಧಾನ ಪರಿಷತ್ ಸದಸ್ಯರಾದ ಕೆ.ಎನ್.ತಿಪ್ಪೇಸ್ವಾಮಿ, ಮಾಜಿ ಸದಸ್ಯರಾದ ಟಿ.ಎ.ಶರವಣ, ಎ.ಎಂ. ರಮೇಶ್ ಗೌಡ, ಪಕ್ಷದ ಬೆಂಗಳೂರು ನಗರದ ಅಧ್ಯಕ್ಷ ಆರ್.ಪ್ರಕಾಶ್ ಮತ್ತಿತರೆ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.
ಸದ್ಯದಲ್ಲೇ ಬಿಬಿಎಂಪಿ ಚುನಾವಣೆ ಬರುತ್ತಿದೆ. ಪಕ್ಷವನ್ನು ಸದೃಢವಾಗಿ ಸಂಘಟಿಸಬೇಕು. ಕಳೆದ ಎರಡು ದಿನಗಳಿಂದ ನಾನು ನಗರದಲ್ಲಿ ಸುತ್ತಾಡುತ್ತಿದ್ದೇನೆ. ಜೆಡಿಎಸ್ ಬಗ್ಗೆ ಜನರಿಗೆ ವಿಶ್ವಾಸ ಇದೆ. ಆದರೆ ಮತ್ತಷ್ಟು ವಿಶ್ವಾಸ ಮೂಡಿಸುವ ಕೆಲಸ ಕಾರ್ಯಕರ್ತರು ಹಾಗೂ ಮುಖಂಡರಿಂದ ಆಗಬೇಕು. ಎರಡೂ ರಾಷ್ಟ್ರೀಯ ಪಕ್ಷಗಳಿಂದ ಜನ ಬೇಸತ್ತಿದ್ದಾರೆ. ಪ್ರತಿ ವಾರ್ಡ್ನಲ್ಲೂ ಪಕ್ಷ ಸಂಘಟಿಸುವ ಕೆಲಸ ಆಗಬೇಕು, ಜನರನ್ನು ಪಕ್ಷದ ಕಡೆ ಸೆಳೆಯುವ ಕೆಲಸ ಮಾಡಬೇಕು ಎಂದು ಸಭೆಯಲ್ಲಿ ಮುಖಂಡರಿಗೆ ಕುಮಾರಸ್ವಾಮಿ ಅವರು ತಾಕೀತು ಮಾಡಿದ್ದಾರೆ.
ಜೆಡಿಎಸ್ ಕಾರ್ಯಕರ್ತರು ಕೇವಲ ವಿಸಿಟಿಂಗ್ ಕಾರ್ಡ್ ಮತ್ತು ಹೆಸರು ಹಾಕಿಸಿಕೊಳ್ಳುವುದಕ್ಕಷ್ಟೆ ಸೀಮಿತವಾಗಬಾರದು. ಜನರಿಗಾಗಿ ಕೆಲಸ ಮಾಡಿದರೆ ತಾನಾಗಿಯೇ ಹುದ್ದೆ, ಅಧಿಕಾರ ಎಲ್ಲವೂ ಸಿಗುತ್ತದೆ ಎಂದ ಅವರು, ದೇವೇಗೌಡರು ಮುಖ್ಯಮಂತ್ರಿ, ಪ್ರಧಾನಿಯಾಗಿ ಹಾಗೂ ತಮ್ಮ ಕಾಲದಲ್ಲಿ ನಗರಕ್ಕೆ ಆದಂತಹ ಕೆಲಸಗಳ ಬಗ್ಗೆ ಜನರಿಗೆ ತಿಳುವಳಿಕೆ ಮೂಡಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದ್ದಾರೆ.
ಬಿಬಿಎಂಪಿ ಚುನಾವಣೆಗೆ ತಯಾರಿ, ಚುನಾವಣಾ ದಿನಾಂಕ ಘೋಷಣೆ ಒಳಗೆ ಜೆಡಿಎಸ್ ಅನ್ನು ಸಂಘಟಿಸಿ ಬಲಪಡಿಸುವ ಕೆಲಸ ಮಾಡಬೇಕು ಸೂಚನೆ ನೀಡಿದ್ದಾರೆ. ಹುದ್ದೆ ಕೊಡಲಿಲ್ಲ, ಅಧಿಕಾರ ಸಿಗಲಿಲ್ಲ. ಅನ್ನೋದಕ್ಕಿಂತ ಪಕ್ಷದಲ್ಲಿ ನಿಷ್ಠೆಯಿಂದ ಕೆಲಸ ಮಾಡಿದರೆ ಅಧಿಕಾರ ತಾನಾಗಿಯೇ ಹುಡುಕಿಕೊಂಡು ಬರುತ್ತದೆ. ಬೂತ್ ಮಟ್ಟದಿಂದ ಪಕ್ಷ ಸಂಘಟಿಸುವ ಕೆಲಸ ಕಾರ್ಯಕರ್ತರು ಮಾಡಬೇಕು ಎಂದು ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಸಲಹೆ ನೀಡಿದ್ದಾರೆ.
(ಒನ್ಇಂಡಿಯಾ ಸುದ್ದಿ)