ಆಶಾ ಕಾರ್ಯಕರ್ತರ ಮೇಲಿನ ಹಲ್ಲೆ ಖಂಡಿಸಿದ ಕುಮಾರಸ್ವಾಮಿ
ಬೆಂಗಳೂರು, ಏಪ್ರಿಲ್ 2: ಬೆಂಗಳೂರಿನ ಬ್ಯಾಟರಾಯನಪುರ ಕ್ಷೇತ್ರದ ಸಾದಿಕ್ ನಗರದಲ್ಲಿ ಕೊರೊನಾ ವೈರಸ್ಗೆ ತಪಾಸಣೆಗೆ ಹೋಗಿದ್ದ ಸಮಯದಲ್ಲಿ ಆಶಾ ಕಾರ್ಯಕರ್ತೆಯರ ಮೇಲೆ ನಡೆದ ಹಲ್ಲೆಯನ್ನು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಖಂಡಿಸಿದ್ದಾರೆ.
ಈ ಕುರಿತು ಟ್ವಿಟ್ಟರ್ನಲ್ಲಿ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ ''ಬೆಂಗಳೂರಿನ ಹೆಗಡೆನಗರದ ಬಳಿ ಬರುವ ಸಾಧಿಕ್ ನಗರದಲ್ಲಿ ಆಶಾ ಕಾರ್ಯಕರ್ತೆಯರು ತಪಾಸಣೆ ಮಾಡುವ ವೇಳೆ ಯುವಕರು ಗುಂಪಾಗಿ ಸೇರಿ ಅಸಭ್ಯವಾಗಿ ವರ್ತಿಸಿ ಹಲ್ಲೆ ಮಾಡಿದ್ದು ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು' ಎಂದು ಆಗ್ರಹಿಸಿದ್ದಾರೆ.
ಬೆಂಗಳೂರಿನ ಹೆಗಡೆನಗರದ ಬಳಿ ಬರುವ ಸಾಧಿಕ್ನಗರದಲ್ಲಿ ಆಶಾ ಕಾರ್ಯಕರ್ತೆಯರು ತಪಾಸಣೆ ಮಾಡುವ ವೇಳೆ ಯುವಕರು ಗುಂಪಾಗಿ ಸೇರಿ ಅಸಭ್ಯವಾಗಿ ವರ್ತಿಸಿ ಹಲ್ಲೆ ಮಾಡಿದ್ದು ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
— H D Kumaraswamy (@hd_kumaraswamy) April 2, 2020
ಇನ್ನು ದೆಹಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಂದವರ ಬಗ್ಗೆ ಮಾತನಾಡಿದ ಕುಮಾರಸ್ವಾಮಿ ''ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದವರೆಲ್ಲರೂ ಕಡ್ಡಾಯವಾಗಿ ಸ್ವಯಂಪ್ರೇರಿತರಾಗಿ ವೈದ್ಯಕೀಯ ತಪಾಸಣೆಗೆ ಒಳಗಾಗಬೇಕು. ಜೀವಕ್ಕಿಂತ ಯಾವ ಧರ್ಮವೂ ದೊಡ್ಡದಲ್ಲ. ತಪಾಸಣೆ ಮಾಡಲು ಬಂದ ವೈದ್ಯಕೀಯ ಸಿಬ್ಬಂದಿಯ ಮೇಲೆ ಹಲ್ಲೆ ಮಾಡುವುದು, ತಿರುಗಿ ಬೀಳುವುದು ಖಂಡನೀಯ. ದೇಶದ ಸ್ವಾಸ್ಥ್ಯ ಮತ್ತು ಸಂವಿಧಾನಕ್ಕಿಂತ ಯಾರೂ ದೊಡ್ಡವರಲ್ಲ' ಎಂದಿದ್ದಾರೆ.
ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ; ಸಿಎಂ ಯಡಿಯೂರಪ್ಪ ಏನಂದ್ರು?
'ರಾಷ್ಟ್ರದ ಹಿತಾಸಕ್ತಿ ವಿರುದ್ಧ ಯಾರೂ ಧ್ವನಿ ಎತ್ತಬಾರದು. ಅತಿರೇಕದ ವರ್ತನೆಗಳಿಗೆ ಖಂಡಿತಾ ನನ್ನ ಬೆಂಬಲವಿಲ್ಲ. ಇದು ಜಾತಿ-ಧರ್ಮಗಳ ಪ್ರಶ್ನೆಯಲ್ಲ. ರಾಷ್ಟ್ರದ ಭವಿಷ್ಯದ ಪ್ರಶ್ನೆ' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನು ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಲಾಕ್ಡೌನ್ ಚಾಲ್ತಿಯಲ್ಲಿರುವುದರಿಂದ ಅನೇಕ ಕಾರ್ಮಿಕರಿಗೆ ಕಷ್ಟ ಎದುರಾಗಿದೆ. ಇಂತವರ ನೆರವಿಗೆ ಬಂದಿರುವ ಕುಮಾರಸ್ವಾಮಿ 'ಎಚ್ಡಿಕೆ ಜನತಾ ದಾಸೋಹ' ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಊಟದ ವ್ಯವಸ್ಥೆ ಮಾಡುತ್ತಿದ್ದಾರೆ.
ರಾಮನಗರ, ಚನ್ನಪಟ್ಟಣದಲ್ಲಿ ಆರಂಭಿಸಿರುವ 'ಎಚ್ಡಿಕೆ ಜನತಾ ದಾಸೋಹ'ದ ರೀತಿ ಎಲ್ಲಾ ಶಾಸಕರೂ ಹಸಿದವರಿಗೆ ಆಹಾರ ಪೂರೈಸುವಂತೆಯೂ ಮನವಿ ಮಾಡಿದ್ದೇನೆ. ಇದಕ್ಕೆ ಶಾಸಕರೂ ಸಮ್ಮತಿಸಿದ್ದಾರೆ ಎಂದು ಕೂಡ ತಿಳಿಸಿದ್ದಾರೆ.