ಸ್ವಪಕ್ಷದ ಮುಖಂಡರ ವಿರುದ್ದವೇ ಕುಮಾರಸ್ವಾಮಿ ಸಿಟ್ಟಾಗಿದ್ದಾರಾ..?
ಬೆಂಗಳೂರು, ಡಿಸೆಂಬರ್ 27: ಸಮ್ಮಿಶ್ರ ಸರ್ಕಾರದ ಅವಧಿಯಲ್ಲಾದ ಅಭಿವೃದ್ದಿ ಯೋಜನೆಗಳು ಮತ್ತು ಸಾಲಮನ್ನಾ ಯೋಜನೆಯನ್ನು ಜನರಿಗೆ ಸರಿಯಾಗಿ ತಿಳಿಸುವಲ್ಲಿ ವಿಫಲರಾದ ಜೆಡಿಎಸ್ ನಾಯಕರ ವಿರುದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಿಟ್ಟು ಹೊರ ಹಾಕಿದ್ದಾರೆ.
ಉಪ ಚುನಾವಣೆ ಸಮಯದಲ್ಲಿ ರಾಜ್ಯದ ಜನರಿಗೆ ಸಾಲಮನ್ನಾ ಯೋಜನೆಯ ಬಗ್ಗೆ ತಿಳುವಳಿಕೆ ಮಾಡಿಕೊಡಬೇಕಿತ್ತು, ಹಾಗಾಗಿದ್ದರೆ ಕನಿಷ್ಠ ಮೂರು-ನಾಲ್ಕು ಕ್ಷೇತ್ರದಲ್ಲಿ ಜಯ ಗಳಿಸಬಹುದಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಬಿಎಸ್ವೈ ಸರಕಾರದ ವಿರುದ್ದ ಕುಮಾರಸ್ವಾಮಿ ಮಾಡಿದ ಆರು ಗಂಭೀರ ಟ್ವೀಟ್
ಒಂದೆರಡು ಶಾಸಕರು ಬಿಟ್ಟರೆ ಉಳಿದ ಶಾಸಕರು ಹೆಚ್ಚು ಕೆಲಸ ಮಾಡಲಿಲ್ಲ, ಇದೇ ಹಿನ್ನಡೆಯಾಗಲು ಕಾರಣವಾಗಿದೆ. ಅಧಿಕಾರದಲ್ಲಿದ್ದಾಗ ಎಲ್ಲರೂ ಹತ್ತಿರವಿದ್ದರು, ಇಲ್ಲದಿದ್ದಾಗ ದೂರ ಸರಿಯುತ್ತಾರೆ ಎಂದು ಅಸಮಾಧಾನಗೊಂಡಿದ್ದಾರೆ.
ಇನ್ನು ಮುಂದೆ ಬರುವ ಚುನಾವಣೆಗೆ ಇವತ್ತಿನಿಂದಲೇ ಕಾರ್ಯ ಪ್ರವೃತ್ತರಾಗುವಂತೆ ಸೂಚಿಸಿದ್ದಾರೆ. ನಮ್ಮ ಅವಧಿಯಲ್ಲಾದ ಸಾಲಮನ್ನಾ ಯೋಜನೆ ಜನರಿಗೆ ತಲುಪಿದ್ದು, ಅದನ್ನೇ ಅಸ್ತ್ರವಾಗಿಟ್ಟುಕೊಂಡು ಪಕ್ಷ ಸಂಘಟಿಸಬೇಕು ಎಂದು ಹೇಳಿದ್ದಾರೆ. ಯುವಜನರ, ರೈತಾಪಿ ವರ್ಗದ ಜನರನ್ನು ಗಮನದಲ್ಲಿರಿಸಿಕೊಂಡು ಪಕ್ಷ ಬಲಪಡಿಸಲು ಪ್ರಯತ್ನಿಸಬೇಕೆಂದು ಆಪ್ತರಲ್ಲಿ ಹೇಳಿಕೊಂಡಿದ್ದಾರೆ.