ದಂಡ ವಸೂಲಿಗೆ ಸರ್ಕಾರದ ಟಾರ್ಗೆಟ್: ಎಚ್ಡಿಕೆ ಗಂಭೀರ ಆರೋಪ!
ಬೆಂಗಳೂರು, ಅ. 20: ಕೊರೊನಾ ವೈರಸ್ ನಿರ್ವಹಣೆ ಕುರಿತಂತೆ ರಾಜ್ಯ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಒಂದೊಂದಾಗಿ ಬಿಚ್ಚಿಡುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು, ದಂಡ ಹಾಕುವ ನೆಪದಲ್ಲಿ ರಾಜ್ಯದಲ್ಲಿ ಡ್ರೈವರ್ಗಳ ಜೇಬಿಗೆ ಕತ್ತರಿ ಹಾಕಿದೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕೋವಿಡ್-19 ವೇಳೆ ಸಂಕಟಕ್ಕೆ ಸಿಲುಕಿದ್ದ ಚಾಲಕರಿಗೆ 5 ಸಾವಿರ ರೂ. ಪರಿಹಾರ ಕೊಡುವುದಾಗಿ ಘೋಷಣೆ ಮಾಡಿತ್ತು. ಆ ಆಶ್ವಾಸನೆ ಕೊಟ್ಟು ಡ್ರೈವರ್ಗಳ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿತ್ತು, ಆದರೆ ಅದು ಅನುಷ್ಠಾನಕ್ಕೆ ಬರಲೇ ಇಲ್ಲ ಎಂದಿದ್ದಾರೆ.
ಚಾಲಕರಿಗೆ ಪರಿಹಾರ ಕೊಡದೆ ಮಾತು ತಪ್ಪಿದ ಸರ್ಕಾರ ಈಗ ದಂಡ ವಸೂಲಿಯ ನೆಪದಲ್ಲಿ ಚಾಲಕರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದು ಆರೋಪಿಸಿದ್ದಾರೆ. ಕಳೆದ ಏಳು ತಿಂಗಳಿಂದ ಸಂಪಾದನೆ ಇಲ್ಲದೆ ಅತ್ಯಂತ ಸಂಕಷ್ಟದಿಂದ ಹತಾಶರಾಗಿರುವ ರಿಕ್ಷಾ, ಕ್ಯಾಬ್ ಡ್ರೈವರ್ಗಳಿಗೆ ದಂಡದ ರೂಪದಲ್ಲಿ ಹಗಲು ದರೋಡೆ ಮಾಡುತ್ತಿರುವ ಸರ್ಕಾರ, ಅವರ ಮೂರು ಕಾಸಿನ ಮೇಲೂ ಕೆಂಗಣ್ಣು ಬೀರಿರುವುದು ರಾಕ್ಷಸೀ ಪ್ರವೃತ್ತಿ ಎಂದು ಆರೋಪಿಸಿದ್ದಾರೆ.
ಟಾರ್ಗೆಟ್ಕೊಟ್ಟು ವಸೂಲಿ ಮಾಡುತ್ತಿದೆ ಸರ್ಕಾರ
ಸರ್ಕಾರ ಪೊಲೀಸರಿಗೆ ಟಾರ್ಗೆಟ್ ಕೊಟ್ಟಿದೆ. ಹೀಗಾಗಿ ಡ್ರೈವರ್ಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ಬಡ ಚಾಲಕರ ಹಿಡಿಶಾಪ ಸರ್ಕಾರಕ್ಕೆ ತಗುಲುವ ಮುನ್ನವೇ ದರ್ಪ ದೌರ್ಜನ್ಯವನ್ನು ತಕ್ಷಣ ನಿಲ್ಲಿಸಬೇಕು. ಉರಿವ ಮನೆಯಲ್ಲಿ ಗಳ ಹಿರಿಯುವ ಕೆಲಸ ಜವಾಬ್ದಾರಿಯುತ ಸರ್ಕಾರಕ್ಕೆ ಒಳ್ಳೆಯದಲ್ಲ. ಇಂತಹ ದುಂಡಾವರ್ತಿ ಪ್ರವೃತ್ತಿಯನ್ನು ಸರ್ಕಾರ ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.
ಡ್ರೈವರ್ಗಳಿಗೆ ಬರ ಸಿಡಿಲು ಬಡಿದಂತಾಗಿದೆ
ಕೊರೊನಾ ಹಾಗೂ ಲಾಕ್ಡೌನ್ನಿಂದ ಮೊದಲೇ ಸಂಪಾದನೆ ಇಲ್ಲದೆ ಡ್ರೈವರ್ಗಳು ಕಂಗೆಟ್ಟಿದ್ದಾರೆ. ಆದರೂ ಸಂಪಾದನೆ ಇಲ್ಲದಿರುವ ಆಟೋರಿಕ್ಷಾ ಚಾಲಕರು ಹಾಗೂ ಕ್ಯಾಬ್ ಡ್ರೈವರ್ಗಳಿಂದ ದಂಡ ವಸೂಲಿ ಮಾಡುತ್ತಿರುವ ಸಂಚಾರಿ ಪೊಲೀಸರು ಮತ್ತು ಸಾರಿಗೆ ಅಧಿಕಾರಿಗಳ ಕಾರ್ಯಾಚರಣೆ ಬಡ ಚಾಲಕರಿಗೆ ಬರಸಿಡಿಲು ಬಡಿದಂತಾಗಿದೆ ಎಂದಿದ್ದಾರೆ.
ಮಾಸ್ಕ್ ನೆಪದಲ್ಲಿ ಜನರಿಂದ ದಂಡ ವಸೂಲಿ
ಮಾಸ್ಕ್ ಹಾಕಿಲ್ಲ ಎಂದು ಕಾನೂನು-ಸುವ್ಯವಸ್ಥೆ ಹಾಗೂ ಸಂಚಾರಿ ಪೊಲೀಸರು ದಂಡ ವಸೂಲಿ ದಂಧೆಗೆ ಇಳಿದಿದ್ದಾರೆ. ಇದು ನಾಗರಿಕರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ಜಾಗೃತಿ ಮೂಡಿಸಬೇಕಾದ ಪೊಲೀಸರು ವಾಹನ ತಪಾಸಣೆ ಹೆಸರಲ್ಲಿ ಬಡ ಡ್ರೈವರ್ಗಳ ಸುಲಿಗೆ ಮಾಡುತ್ತಿರುವುದು ಸರಿಯಲ್ಲ. ಜನರಿಗೆ ತಿಳುವಳಿಕೆ ಕೊಡಬೇಕಾದ ಸರ್ಕಾರ ಅದನ್ನು ಬಿಟ್ಟು ವಸೂಲಿಗೆ ಇಳಿದಿದೆ ಎಂದು ಆರೋಪಿಸಿದ್ದಾರೆ.
Recommended Video
ಕಷ್ಟಕಾಲದಲ್ಲಿ ಮಾನವೀಯತೆ ತೋರಿ
ದಂಡ ವಸೂಲಿ ಕುರಿತು ಸರ್ಕಾರ ಟಾರ್ಗೆಟ್ ನೀಡಿರುವುದು ಈ ಎಲ್ಲದಕ್ಕೂ ಮೂಲ ಕಾರಣ. ಸರ್ಕಾರದ ಟಾರ್ಗೆಟ್ ನಿಗದಿ ಮಾಡಿರುವುದು ಈಗ ಗುಟ್ಟಾಗಿ ಉಳಿದಿಲ್ಲ. ಸರ್ಕಾರ ತಕ್ಷಣ ಚಾಲಕರನ್ನು ಸುಲಿಯುವ ನಿರ್ದಾಕ್ಷಿಣ್ಯ ಕ್ರಮಕ್ಕೆ ತಡೆಯೊಡ್ಡಿ ಔದಾರ್ಯ ತೋರುವ ಮೂಲಕ ಚಾಲಕರಿಗೆ ತುಸು ನೆಮ್ಮದಿ ನೀಡಬೇಕಾದ ತುರ್ತು ಅಗತ್ಯವಿದೆ.
ಎಗ್ಗಿಲ್ಲದೆ ದಂಡ ವಸೂಲಿ ಮಾಡುವ ಪೋಲಿಸರ ಕ್ರಮದಿಂದ ಚಾಲಕರು ನಲುಗಿ ಹೋಗಿದ್ದಾರೆ. ಇಂತಹ ಕಡು ಕಷ್ಟಕಾಲದಲ್ಲಿ ಸರ್ಕಾರ ಮಾನವೀಯತೆಯನ್ನು ಪ್ರದರ್ಶಿಸಬೇಕು ಎಂದು ಆಗ್ರಹಿಸುತ್ತೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.