ಕಾರ್ಮಿಕ ಕಾಯಿದೆ ತಿದ್ದುಪಡಿ ವಿರೋಧಿ ಹೋರಾಟಕ್ಕೆ ದೇವೇಗೌಡ ಸಿದ್ಧತೆ
ಬೆಂಗಳೂರು, ಜುಲೈ 31: ಕಾರ್ಮಿಕ ಕಾಯಿದೆಗೆ ತಿದ್ದುಪಡಿ ವಿರೋಧಿಸಿ ಹೋರಾಟದ ರೂಪುರೇಷೆ ಕುರಿತು ಚರ್ಚಿಸಲು ಮಾಜಿ ಪ್ರಧಾನಿ ದೇವೇಗೌಡ ನಾಲ್ಕನೇ ತಾರೀಕು ಜೆಡಿಎಸ್ ನಾಯಕರ ಸಭೆ ಕರೆದಿದ್ದಾರೆ.
ಜೆಪಿ ಭವನದಲ್ಲಿ ನಡೆಯಲಿರುವ ಈ ಸಭೆಯಲ್ಲಿ ಜೆಡಿಎಸ್ ಪಕ್ಷದ ಶಾಸಕರು, ಸೋತ ಅಭ್ಯರ್ಥಿಗಳು, ಜಿಲ್ಲಾ ಅಧ್ಯಕ್ಷರು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಹಾಗೂ ತಾಲೂಕು ಅಧ್ಯಕ್ಷರ ಸಭೆಯನ್ನು ಮತ್ತೊಂದು ಬಾರಿ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ಸಿನಿಂದ ದೂರದೂರವಾಗುತ್ತಿರುವ ಗೌಡ್ರು, ಕುಮಾರಣ್ಣ: ಬಿಜೆಪಿಯತ್ತ ಸಾಫ್ಟ್ ಕಾರ್ನರ್?
ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದೇವೇಗೌಡ 'ರಾಜ್ಯಾದ್ಯಂತ ಯಾವ ರೀತಿ ಪ್ರತಿಭಟನೆ ಮಾಡಬೇಕು ಎಂದು ಸಭೆಯಲ್ಲಿ ನಿರ್ಧಾರ ಮಾಡುತ್ತೇವೆ. ಕೊರೊನಾ ಇದ್ದರೂ ನಾವು ಯಾವ ರೀತಿ ಹೋರಾಟ ಮಾಡಬೇಕು ಅಂತಾ ಸಮಾಲೋಚನೆ ಮಾಡುತ್ತೇವೆ. ಇದರ ಬಗ್ಗೆ ರಾಜ್ಯಪಾಲರಿಗೆ ಪತ್ರ ಬರೆಯುತ್ತೇವೆ. ಅಧಿವೇಶನ ಕರೆಯಲು ರಾಜ್ಯ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಇದರ ಬಗ್ಗೆ ಕೂಡ ರಾಜ್ಯಪಾಲರ ಗಮನಕ್ಕೆ ತರುತ್ತೀವಿ' ಎಂದು ಮಾಹಿತಿ ನೀಡಿದರು.
ರಾಜ್ಯ ಸರ್ಕಾರ ಟಿಪ್ಪು ವಿಚಾರವನ್ನು ಪಠ್ಯದಿಂದ ತೆಗೆದ ವಿಚಾರವಾಗಿ ಮಾತನಾಡಿದ ಮಾಜಿ ಪ್ರಧಾನಿ 'ಈ ಹಿಂದೆ ಪ್ರಾಥಮಿಕ ಶಾಲೆಯಲ್ಲಿ ಟಿಪ್ಪು ಪಾಠವನ್ನು ನಾವೇ ಓದಿದ್ದೇವೆ, ಟಿಪ್ಪು ಹೆಸರಲ್ಲಿ ರೆಸಿಡೆನ್ಸಿಯಲ್ ಶಾಲೆ ಮಾಡಿದ್ದೇವೆ. ಗುಲ್ಬರ್ಗ, ಬಿಜಾಪುರ, ಶ್ರೀರಂಗಪಟ್ಟಣ, ರಾಮನಗರ, ಧಾರವಾಡದಲ್ಲಿ ಟಿಪ್ಪು ಹೆಸರಲ್ಲಿ ರೆಸಿಡೆನ್ಸಿಯಲ್ ಶಾಲೆಗಳು ಇವೆ. ಆಗ ಯಾರೂ ವಿರೋಧ ಮಾಡಿರಲಿಲ್ಲ. ಈಗ ಈ ವಿಚಾರದಲ್ಲಿ ಅನಗತ್ಯ ವಿವಾದ ಸೃಷ್ಟಿ ಮಾಡೋದು ಬೇಕಿರಲಿಲ್ಲ. ಈ ಬಗ್ಗೆ ಸರ್ಕಾರ ಮತ್ತೆ ಪರಿಶೀಲನೆ ಮಾಡಬೇಕು ಎಲ್ಲರಿಗೂ ಸಮಾಧಾನ ಆಗುವಂತಹ ನಿರ್ಧಾರ ತೆಗೆದುಕೊಳ್ಳಬೇಕು' ಎಂದು ಆಗ್ರಹಿಸಿದ್ದಾರೆ.
ಡಿಕೆ ಶಿವಕುಮಾರ್ ಮತ್ತು ಕುಮಾರಸ್ವಾಮಿ ಕುರಿತು ವಿಧಾನ ಪರಿಷತ್ ಸದಸ್ಯ ಸಿ ಪಿ ಯೋಗೇಶ್ವರ್ ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ದೇವೇಗೌಡ, 'ಯೋಗೇಶ್ವರ್ ಮಾಡಿರುವ ಆರೋಪಕ್ಕೆ ಅದಕ್ಕೇನಾದ್ರೂ ಸಾಕ್ಷಿಯಾಧಾರ ಇದೀಯಾ? ಕುಮಾರಸ್ವಾಮಿ ಕದ್ದು ಹೋಗಿ ಯಾರನ್ನೂ ಭೇಟಿ ಮಾಡುವ ಅವಶ್ಯಕತೆ ಇಲ್ಲ. ಯಡಿಯೂರಪ್ಪ ಅವರು ಹೇಳಿದಂತೆ ಒಂದು ಕಾಲದಲ್ಲಿ ಕುಮಾರಸ್ವಾಮಿ ಅಧಿಕಾರ ಮಾಡಿದ್ದಾರೆ. ರಾಜಕಾರಣಿಗಳು ಸುಮ್ಮನೆ ಈ ರೀತಿ ಮತ್ತೊಬ್ಬರ ಲಘುವಾಗಿ ಮಾತಾಡಬಾರದು' ಎಂದಿದ್ದಾರೆ.