ಆರ್ಆರ್ ನಗರ: ಮಾಜಿ ಪ್ರಧಾನಿ ದೇವೇಗೌಡರ ತಂತ್ರಗಾರಿಕೆಗೆ ಮುನಿರತ್ನ ತತ್ತರ!
ಬೆಂಗಳೂರು, ಅ 21: ಆರ್ ಆರ್ ನಗರದಲ್ಲಿ ಉಪ ಚುನಾವಣೆ ಗೆಲ್ಲಲು ಜೆಡಿಎಸ್ ಪಕ್ಷ ಗೌಪ್ಯವಾಗಿಯೇ ಮೆಗಾ ಪ್ಲಾನ್ ಮಾಡಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ರಾಜಕೀಯ ತಂತ್ರಗಾರಿಕೆ ಈ ಬಾರಿ ಜೆಡಿಎಸ್ ಅಭ್ಯರ್ಥಿಗೆ ಪ್ಲಸ್ ಪಾಯಿಂಟ್ ಆಗಿದೆ.
ಉಪ ಚುನಾವಣೆಯಲ್ಲಿ ರಾಜಕೀಯ ನಾಯಕರ ಪ್ರಚಾರ ಭರ್ಜರಿಯಾಗಿಯೇ ಮುಂದುವರೆದಿದೆ. ಕಣದಲ್ಲಿರುವ ಪ್ರಮುಖ ಮೂವರೂ ಅಭ್ಯರ್ಥಿಗಳು ಮತದಾರರ ಮನಗೆಲ್ಲಲು ಕಸರತ್ತು ನಡೆಸಿದ್ದಾರೆ. ಬಿಜೆಪಿ ಅಭ್ಯರ್ಥಿ, ಮಾಜಿ ಶಾಸಕ ಮುನಿರತ್ನ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಚ್. ಕುಸುಮಾ ಹಾಗೂ ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಅವರು ತಮ್ಮ ತಮ್ಮ ಪ್ರಚಾರವನ್ನು ತೀವ್ರಗೊಳಿಸಿದ್ದಾರೆ. ಈ ಮಧ್ಯೆ ಜೆಡಿಎಸ್ ವರಿಷ್ಠ ದೇವೇಗೌಡ ಅವರು ಅಖಾಡಕ್ಕೆ ಇಳಿದಿರುವುದು ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಅವರಿಗೆ ಬಲ ಬಂದಂತಾಗಿದೆ.
ನಾನು ಈ ಕ್ಷೇತ್ರದ ಮಗ ನಿಮ್ಮೆಲ್ಲರ ಕಷ್ಟ ಸುಖಗಳನ್ನು ನೋಡಿಕೊಂಡೇ ಬೆಳೆದವನು. ಜೆಡಿಎಸ್ ಕಾರ್ಯಕರ್ತರು ಯಾವುದಕ್ಕೂ ಹೆದರಬೇಕಿಲ್ಲ. ಈ ಚುನಾವಣೆಯಲ್ಲಿ ನಾವೇ ಗೆಲ್ಲುವುದು ಎಂದು ಕೃಷ್ಣಮೂರ್ತಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಕಾರಣ ಮಾಜಿ ಪ್ರಧಾನಿ ದೇವೇಗೌಡರ ರಾಜಕೀಯ ತಂತ್ರಗಾರಿಕೆ. ಏನದು?
ಚುನಾವಣೆ ಗೆಲ್ಲಲು ಜಡಿಎಸ್ ಪಕ್ಷದ 50 ತಂಡ
ಮೂರು ಪಕ್ಷಗಳಿಗೂ ರಾಜರಾಜೇಶ್ವರಿ ನಗರ ಉಪಚುನಾವಣೆ ಪ್ರತಿಷ್ಠೆಯ ಕಣವಾಗಿದೆ. ಆರ್ಆರ್ ನಗರ ಗೆಲ್ಲಲು ಜೆಡಿಎಸ್ ಕೂಡ ರಣತಂತ್ರ ರೂಪಿಸಿದೆ. ಒಟ್ಟು 50 ತಂಡಗಳನ್ನು ರಚಿಸಿರುವ ಜೆಡಿಎಸ್ ಪ್ರತಿ ತಂಡಕ್ಕೆ 10 ರಿಂದ 15 ಬೂತ್ಗಳ ಉಸ್ತುವಾರಿ ನೀಡಿದೆ. ಜೊತೆಗೆ 10 ಶಾಸಕರಿಗೆ ವಾರ್ಡ್ವಾರು ಉಸ್ತುವಾರಿ ನೀಡಲಾಗಿದೆ..
ಅಬ್ಬರದ ಪ್ರಚಾರವಿಲ್ಲ, ಮತದಾರರ ಮನೆಗೆ ಕಾರ್ಯಕರ್ತರು!
ಕೊರೊನಾ ವೈರಸ್ ಕಾರಣದಿಂದ ಅಬ್ಬರದ ಪ್ರಚಾರಕ್ಕೆ ಮಣೆ ಹಾಕದೇ ಪ್ರತಿ ಮತದಾರರನ್ನು ತಲುಪುವ ಕಾರ್ಯತಂತ್ರವನ್ನು ಜೆಡಿಎಸ್ ನಾಯಕರು ರೂಪಿಸಿದ್ದಾರೆ. ಜೆಡಿಎಸ್ ಪಕ್ಷದ ಶಾಸಕರು ಹಾಗೂ ನಾಯಕರು ವಾರ್ಡ್ವಾರು ಪ್ರತಿ ಮನೆ-ಮನೆಗೂ ಭೇಟಿ ನೀಡಿ ಮತಯಾಚಿಸುತ್ತಿದ್ದಾರೆ. ಬೆಂಗಳೂರು ಹಾಗೂ ರಾಜ್ಯಕ್ಕೆ ಜೆಡಿಎಸ್ ಪಕ್ಷ ನೀಡಿರುವ ಕೊಡುಗೆಗಳನ್ನು ಮತದಾರರಿಗೆ ಮನದಟ್ಟು ಮಾಡಿಕೊಡಲಾಗುತ್ತಿದೆ.
ರಾಷ್ಟ್ರೀಯ ಪಕ್ಷಗಳ ವಿರುದ್ಧ ನಮ್ಮ ಹೋರಾಟ
ಆರ್ಆರ್ ನಗರ ವ್ಯಾಪ್ತಿಯ ಸಜ್ಜೆಪಾಳ್ಯ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಅವರು, ಕಾರ್ಯಕರ್ತರು ಯಾವುದಕ್ಕೂ ಹೆದರಬೇಕಿಲ್ಲ, ನಾನು ಎಂದೆಂದಿಗೂ ನಿಮ್ಮ ಜೊತೆ ಇರುತ್ತೇನೆ. ಬಿಜೆಪಿ-ಕಾಂಗ್ರೆಸ್ ನಾಯಕರು ಎಷ್ಟೇ ಜನರನ್ನು ಜೆಡಿಎಸ್ನಿಂದ ಸೆಳೆದರೂ ನಮ್ಮ ಮೇಲೆ ಯಾವ ಪರಿಣಾಮ ಬೀರಲ್ಲ. ರಾಷ್ಟ್ರೀಯ ಪಕ್ಷಗಳ ವಿರುದ್ಧ ಹೋರಾಟ ಮುಂದುವರಿಸೋಣ ಎಂದು ಕಾರ್ಯಕರ್ತರಿಗೆ ಭರವಸೆ ನೀಡಿದ್ದಾರೆ.
Recommended Video
ಮನೆ-ಮನೆಗೆ ಭೇಟಿ ನೀಡಿ ಮತಯಾಚನೆ
ಬೆಳಗಿನಿಂದಲೇ ಬಿರುಸಿನ ಪ್ರಚಾರ ನಡೆಸಿದ ಕೃಷ್ಣಮೂರ್ತಿ, ಬಿಇಎಂಎಲ್ ಲೇಔಟ್ನ ಮಾರುತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ದಿನವಿಡೀ ಪ್ರೆಸ್ ಲೇಔಟ್ ಪಾರ್ಕ್, ಬಿಇಎಂಎಲ್ ಲೇಔಟ್, ಲಗ್ಗೆರೆ, ಕೊಟ್ಟಿಗೆಪಾಳ್ಯ ಹಾಗೂ ಜ್ಞಾನಭಾರತಿ ವಾರ್ಡ್ಗಳಲ್ಲಿ ಮನೆ-ಮನೆಗೆ ಭೇಟಿ ನೀಡಿ ಮತಯಾಚಿಸಿದರು. ಅಭ್ಯರ್ಥಿಗೆ ಜೆಡಿಎಸ್ ಬೆಂಗಳೂರು ನಗರ ಘಟಕದ ಅಧ್ಯಕ್ಷ ಆರ್. ಪ್ರಕಾಶ್ ಸೇರಿ ಅನೇಕ ಮುಖಂಡರು ಸಾಥ್ ನೀಡಿದರು.