ಕಾರ್ಯಕರ್ತರ ಬಾಯಿಗೆ ರಿವಾಲ್ವರ್: ಮನನೊಂದು BSY ಗೆ ಗೌಡರ ಪತ್ರ
Recommended Video
ಬೆಂಗಳೂರು, ಅಕ್ಟೋಬರ್ 26: ಯಾದಗಿರಿಯಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ವೊಬ್ಬರು ಜೆಡಿಎಸ್ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿರುವ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು, ಅವರನ್ನು ತಕ್ಷಣ ಅಮಾನತು ಮಾಡುವಂತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.
ಶುಕ್ರವಾರ ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿ ಕರೆದಿದ್ದ ಅವರು, ತಾವು ಮುಖ್ಯಮಂತ್ರಿಗಳಿಗೆ ಬರೆದ ಪತ್ರವನ್ನೂ ಪ್ರದರ್ಶಿಸಿದರು.
ಜೆಡಿಎಸ್ v/s ಪೊಲೀಸ್ ಇಲಾಖೆ ಕಿತ್ತಾಟ ತಾರಕಕ್ಕೆ: ಯಾದಗಿರಿ ಪ್ರಕ್ಷುಬ್ಧ
ರಾಜಕೀಯ ದುರುದ್ದೇಶದಿಂದ ಹೀಗೆ ಪಕ್ಷವೊಂದರ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸುವುದು ಸರಿಯಲ್ಲ. ಮುಂದದೆ ಬೇರೆ ಸರ್ಕಾರ ಬರುತ್ತದೆ. ಆಗಲೂ ಇದೇ ತಪ್ಪಾಗುತ್ತದೆ. ಇಂಥ ವ್ಯವಸ್ಥೆಗೆ ಅವಕಾಶ ಮಾಡಿಕೊಡಬಾರದು. ಇಂಥ ಅಮಾನುಷ ನಡೆಗೆ ಕಡಿವಾಣ ಹಾಕಬೇಕು ಎಂದು ದೇವೇಗೌಡರು ಪತ್ರದಲ್ಲಿ ಬರೆದಿದ್ದಾರೆ.
ಜೆಡಿಎಸ್ ಕಾರ್ಯಕರ್ತರೊಬ್ಬರ ಬಾಯಲ್ಲಿ ರಿವಾಲ್ವರ್ ಇಟ್ಟು, ಸ್ಟೇಶನನ್ನಿಗೆ ಕರೆಸಿಕೊಂಡು ಸಮಾನುಷವಾಗಿ ವರ್ತಿಸಿದ್ದಾರೆ, ಬೆಲ್ಟ್ ನಿಂದ ಹೊಡೆದು ಹಿಂಸಿಸಿದ್ದಾರೆ. ಎನ್ ಕೌಂಟರ್ ಮಾಡುವುದಾಗಿ ಹೆದರಿಸಿದ್ದಾರೆ. ನನ್ನ ನೋವನ್ನು ಅರ್ಥ ಮಾಡಿಕೊಂಡು ಆ ಸಬ್ ಇನ್ಸ್ ಪೆಕ್ಟರ್ ಅನ್ನು ಅಮಾನತಿನಲ್ಲಿಡಬೇಕೆಂದು ಕೋರುತ್ತೇನೆ ಎಂದು ದೇವೇಗೌಡರು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಜೈಲಿನಿಂದ ಬಿಡುಗಡೆಯಾದ ಬಳಿಕ ಡಿಕೆ ಶಿವಕುಮಾರ್ ಹೇಳಿದ್ದೇನು?
ಕೆಲವು ದಿನಗಳ ಹಿಂದಷ್ಟೆ ಯಾದಗಿರಿಗೆ ಸಿಎಂ ಯಡಿಯೂರಪ್ಪ ಭೇಟಿ ನೀಡಿದ್ದರು. ಗುರ್ಮಿಟ್ಕಲ್ ಕ್ಷೇತ್ರಕ್ಕೆ ಅನುದಾನ ಕಡಿತ ಮಾಡಿರುವ ಬಗ್ಗೆ ಅಸಮಾಧಾನಗೊಂಡಿದ್ದ ಜೆಡಿಎಸ್ ಕಾರ್ಯಕರ್ತರು ಸಿಎಂ ವಾಹನವನ್ನು ಅಡ್ಡಗಟ್ಟಿ ಕಪ್ಪುಬಾವುಟ ಪ್ರದರ್ಶಿಸಿದ್ದರು. ಘಟನೆ ನಡೆದ ಕೂಡಲೇ ಪಿಎಸ್ಐ ಬಾಪುಗೌಡ ಎಸ್.ಪಾಟೀಲ್ ನೇತೃತ್ವದಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಹಲವರನ್ನು ವಶಕ್ಕೆ ಪಡೆದಿದ್ದರು. ಅದರಲ್ಲಿ ಗುರ್ಮಿಟ್ಕಲ್ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರು ಪುತ್ರ ಜೆಡಿಎಸ್ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಶರಣಗೌಡ ಕಂದಕೂರು ಅವರ ಬೆಂಬಲಿಗರನ್ನೂ ವಶಕ್ಕೆ ಪಡೆಯಲಾಗಿತ್ತು. ಅವರಿಗೆ ಪೊಲೀಸರು ಹಿಂಸೆ ನೀದಿದ್ದಾರೆ ಎಂಬುದು ಆರೋಪವಾಗಿದೆ.