ಕಾರ್ಯಕರ್ತರ ಎದುರು ಭಾವುಕರಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ!
ಬೆಂಗಳೂರು, ಫೆ. 14: ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸುವುದಿಲ್ಲ ಎಂದು ಹೇಳಿಕೆ ನೀಡುವ ಮೂಲಕ ಕುತೂಹಲ ಸೃಷ್ಟಿಸಿದ್ದ ಜೆಡಿಎಸ್ ನಾಯಕರು, ಇದೀಗ ಉಪ ಚುನಾವಣೆ ಹಿನ್ನಲೆಯಲ್ಲಿ ಪಕ್ಷ ಸಂಘಟ ಮಾಡಲು ಬೆಂಗಳೂರಿನಲ್ಲಿ ಮಹತ್ವದ ಸಮಾವೇಶ ನಡೆಸಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಜೆಡಿಎಸ್ ನಾಯಕರು ಹಾಗೂ ಗ್ರಾಮ ಪಂಚಾಯಿತಿಗಳಿಗೆ ಆಯ್ಕೆಯಾಗಿರುವ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಸಭೆಯಲ್ಲಿ ಭಾಗವಹಿಸಿದ್ದಾರೆ.
ಜೆಡಿಎಸ್ ಸಮಾವೇಶದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಮಹತ್ವದ ಹೇಳಿಕೆ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಜೆಡಿಎಸ್ ಬೆಂಬಲಿತ ಸದಸ್ಯರಿಗೆ ಅಭಿನಂದನೆಯನ್ನು ಸಲ್ಲಿಸಲಾಗಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ. ಕುಮಾರ ಸ್ವಾಮಿ, ಜೆಡಿಎಸ್ ನಾಯಕರಾದ ಬಂಡೆಪ್ಪ ಕಾಶಂಪೂರ್, ವೆಂಕಟ್ ರಾವ್ ನಾಡಗೌಡ, ನಾಗನಗೌಡ ಕಂದಕೂರ, ಕೋನರೆಡ್ಡಿ, ಜಫ್ರುಲ್ಲಾ ಖಾನ್, ದಾಸರಹಳ್ಳಿ ಮಂಜುನಾಥ್, ಶರವಣ, ಆರ್ ಪ್ರಕಾಶ್, ಮಹಿಳಾ ಜೆಡಿಎಸ್ ಅಧ್ಯಕ್ಷೆ ಲೀಲಾದೇವಿ ಆರ್ ಪ್ರಸಾದ್ ಸೇರಿ ಹಲವು ಶಾಸಕರು ಮತ್ತು ಮುಖಂಡರು ಭಾಗಿಯಾಗಿದ್ದಾರೆ.
ಮನಬಿಚ್ಚಿ ಮಾತನಾಡಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಪಕ್ಷದ ನಾಯಕರು ಹಾಗೂ ಕಾರ್ಯಕರ್ತರ ಎದುರು ಭಾವುಕ ಮಾತುಗಳನ್ನು ಆಡಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಯ ಜವಾಬ್ದಾರಿಯ ಕುರಿತು ಅವರು ಮಾತನಾಡಿದ್ದಾರೆ.
ದೇವೇಗೌಡರ ಭಾವುಕ ಭಾಷಣ
ಅರಮನೆ ಮೈದಾನದಲ್ಲಿ ನಡೆದಿರುವ ಸಮಾವೇಶದಲ್ಲಿ ಭಾವುಕರಾಗಿ ಮಾತನಾಡಿದ ದೇವೇಗೌಡರು, ನಾನು ಇನ್ಮುಂದೆ ನಿಮಗೆ ಮಾರ್ಗದರ್ಶನ ಮಾಡಬಹುದು ಅಷ್ಟೇ, ಎಲ್ಲಾ ಕಡೆ ಪ್ರವಾಸ ಮಾಡಲು ನನ್ನಿಂದ ಸಾಧ್ಯ ಆಗಲ್ಲ. ಹೀಗೆ ಮಾಡಿ ಎಂದು ನಾನು ಸಲಹೆ ಕೊಡಬಹುದು. ನಮ್ಮಲ್ಲಿ ಪ್ರಬಲವಾದ ಘಟಕಗಳು ಇವೆ. ಬರುವ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ನಾವು ಹಿಂದೆ ಬಿದ್ದಿಲ್ಲ ಎಂಬುದನ್ನು ಸಾಬೀತು ಮಾಡಬೇಕಿದೆ. ಅದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯ ಎಂದು ದೇವೇಗೌಡರು ಭಾಷಣ ಮಾಡಿದರು.
ನಮ್ಮ ಶಕ್ತಿಯನ್ನು ತೋರಿಸಬೇಕಿದೆ
ಜಿ.ಪಂ. ಹಾಗೂ ತಾ.ಪಂ. ಚುನಾವಣೆಯಲ್ಲಿ ನಮ್ಮ ಶಕ್ತಿ ಏನು ಎಂಬುದನ್ನು ತೋರಿಸಬೇಕಿದೆ. ಪಂಚಾಯಿತಿ ಚುನಾವಣೆಗೆ ಸೀಟು ಹಂಚುವಾಗ ಸಣ್ಣಪುಟ್ಟ ವ್ಯತ್ಯಾಸ ಆಗಬಹುದು. ಅದರ ಬಗ್ಗೆ ದಯವಿಟ್ಟು ಯಾರು ತಲೆ ಕೆಡಿಸಿಕೊಳ್ಳಬೇಡಿ. ನಾವೆಲ್ಲರೂ ಐಕ್ಯತೆಯಿಂದ ಕೆಲಸ ಮಾಡಬೇಕಿದೆ. ಮುಂಬರುವ ಚುನಾವಣೆಯಲ್ಲಿ ನಮ್ಮ ಪಕ್ಷ ಅತಿ ಹೆಚ್ಚು ಸ್ಥಾನ ಗೆಲ್ಲಬೇಕು, ಜೊತೆಗೆ ಈ ರಾಜ್ಯದಲ್ಲಿ ನಮ್ಮ ಪ್ರಾದೇಶಿಕ ಪಕ್ಷವನ್ನು ಉಳಿಸಬೇಕು. ಅದು ನಿಮ್ಮಿಂದ ಮಾತ್ರ ಸಾಧ್ಯ. ನೀವೇ ಈ ಪಕ್ಷ ಉಳಿಸಬೇಕು ಎಂದು ಕಾರ್ಯಕರ್ತರಲ್ಲಿ ದೇವೇಗೌಡರು ಮನವಿ ಮಾಡಿದರು.
ಚುನಾವಣೆಗೆ ಮೊದಲು ಲಘುವಾಗಿ ನೋಡಿದ್ರು
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಎಲ್ಲರೂ ನಮ್ಮನ್ನು ಲಘುವಾಗಿ ನೋಡಿದ್ದರು. ಆದರೆ ಚುನಾವಣೆ ಫಲಿತಾಂಶ ಬಂದ ಮೇಲೆ ನಮ್ಮ ಶಕ್ತಿಯ ಅರಿವಾಗಿದೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ 16 ಸಾವಿರ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಆ ಮೂಲಕ ನಾವು ಯಾರಿಗೂ ಕಮ್ಮಿ ಇಲ್ಲ ಎಂದು ಗೆದ್ದವರು ತೋರಿಸಿದ್ದಾರೆ ಎಂದು ಗ್ರಾಮ ಪಂಚಾಯಿತಿ ನೂತನ ಸದಸ್ಯರನ್ನು ದೇವೇಗೌಡರು ಅಭಿನಂದಿಸಿದರು.
Recommended Video
ನಿಷ್ಠಾವಂತರು ಪಕ್ಷ ಬಿಟ್ಟಿಲ್ಲ
ನಮ್ಮ ಮುಖಂಡರು ಯಾರೂ ನಮ್ಮನ್ನು ಬಿಟ್ಟು ಹೋಗಿಲ್ಲ. ಪಕ್ಷಕ್ಕೆ ನಿಷ್ಠೆಯಿಂದ ಇರುವ ಮುಖಂಡರು ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಜೊತೆಗೆ ರಾಯಚೂರು, ಯಾದಗಿರಿ, ಹಾಗೂ ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕದಲ್ಲಿಯೂ ನಮ್ಮ ಪಕ್ಷಕ್ಕೆ ಶಕ್ತಿ ತುಂಬಿದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ನಾವು ಹೋರಾಟ ಮಾಡಬೇಕು ಅನ್ನೋದು ನಮ್ಮ ಉದ್ದೇಶ.
ಚುನಾವಣೆ ಬಳಿಕ ಜೆಡಿಎಸ್ ಪಕ್ಷ ಇರುವುದಿಲ್ಲ ಎಂದು ಒಬ್ಬರು ಹೇಳಿದ್ದರು. ಅವರು ಯಾರು ಅಂತಾ ಹೇಳುವುದಿಲ್ಲ, ಅವರ ಹೆಸರು ಹೇಳುವುದಿಲ್ಲ. ಅವರು ನಮ್ಮ ಪಕ್ಷದ ಬಗ್ಗೆ ಲಘವಾಗಿ ಮಾತಾಡಿದ್ದಾರೆ. ಅದಕ್ಕೆ ಈಗ ನಾನು ಉತ್ತರ ಕೊಡುವುದಿಲ್ಲ, ಪಂಚಾಯಿತಿ ಚುನಾವಣೆ ಬಳಿಕ ಮಾತಾಡುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೆಸರು ಹೇಳದೇ ಪರೋಕ್ಷ ವಾಗ್ದಾಳಿಯನ್ನು ದೇವೇಗೌಡರು ನಡೆಸಿದರು.