ನಮ್ಮೊಂದಿಗೆ ಇದ್ದಾಗ ಸೆಕ್ಯುಲರಿಸಂ ಇತ್ತು, ಈಗಿಲ್ಲವೇ?: ಸಿದ್ದರಾಮಯ್ಯಗೆ ಎಚ್ಡಿಡಿ ಪ್ರಶ್ನೆ
ಬೆಂಗಳೂರು, ನವೆಂಬರ್ 14: ರಾಜ್ಯ ಜಾತ್ಯತೀತ ಜನತಾ ದಳ ಪಕ್ಷದಲ್ಲಿ ಸೆಕ್ಯುಲರಿಸಂ ಎಲ್ಲಿಗೆ ಎಂದು ಟೀಕಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ತರಾಟೆಗೆ ತೆಗೆದುಕೊಂಡಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ಗೆ ಸೆಕ್ಯುಲರಿಸಂ ಎಲ್ಲಿದೆ ಎಂದು ಸಿದ್ದರಾಮಯ್ಯ ಕೇಳಿದ್ದಾರೆ. ನಾವು ನಮ್ಮ ಜಾತ್ಯತೀತತೆಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ವರ್ಗಾಯಿಸಿದ್ದೇವೆ. ಅವರ ಬಳಿಯಿಂದ ನಮ್ಮ ಸೆಕ್ಯುಲರಿಸಂ ವಾಪಸ್ ಪಡೆಯುವ ಕಾಲ ಬರಲಿದೆ ಎಂದು ವ್ಯಂಗ್ಯವಾಗಿ ಹೇಳಿದರು.
ಅತೃಪ್ತ ಶಾಸಕರ ಸಭೆಯಲ್ಲಿ ನೋವು ತೋಡಿಕೊಂಡು ಕ್ಷಮೆಕೋರಿದ ಕುಮಾರಸ್ವಾಮಿ
'ನನ್ನೊಂದಿಗೆ ರಾಜಕೀಯ ಮಾಡುವಾಗ ಸಿದ್ದರಾಮಯ್ಯಗೆ ಸೆಕ್ಯುಲರಿಸಂ ಗೊತ್ತಿರಲಿಲ್ಲವೇ? ಸಿದ್ದರಾಮಯ್ಯ ಯಾರು? ಅವರು ಎಲ್ಲಿಂದ ಬಂದರು ಎಂಬುದನ್ನೆಲ್ಲಾ ಸದ್ಯದಲ್ಲಿಯೇ ಹೇಳುತ್ತೇನೆ' ಎಂದು ವಾಗ್ದಾಳಿ ನಡೆಸಿದರು.
ತಮಿಳುನಾಡಿನಲ್ಲಿ ಜಾತ್ಯತೀತತೆ ಬಗ್ಗೆ ಮಾತನಾಡುತ್ತಿದ್ದ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರೇ ಆರು ವರ್ಷ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದರು. ಇಂತಹ ಕರುಣಾನಿಧಿ ಅವರ ಮನೆಗೆ ಕಾಂಗ್ರೆಸ್ ನಾಯಕರು ಹೋಗಿರಲಿಲ್ಲವೇ? ಕರುಣಾನಿಧಿ ಜತೆ ಮೈತ್ರಿ ಮಾತುಕತೆ ನಡೆಸಿರಲಿಲ್ಲವೇ? ಎಂದು ಪ್ರಶ್ನಿಸಿದರು.
ಉಪ ಚುನಾವಣೆ ಹೊಸ್ತಿಲಲ್ಲೇ ಬಿಜೆಪಿ ಸರ್ಕಾರಕ್ಕೆ ದೇವಗೌಡರ ಅಭಯ
ಅನರ್ಹ ಶಾಸಕರ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಸ್ವಾಗತಿಸಿದ ಅವರು, ಈ ತೀರ್ಪಿನಿಂದ ಬಿಜೆಪಿ ಸರ್ಕಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಮೂರೂವರೆ ವರ್ಷ ಯಡಿಯೂರಪ್ಪ ಅವರೇ ಸಿಎಂ ಆಗಿರುತ್ತಾರೆ. ಸಿದ್ದರಾಮಯ್ಯ ಅವರು ವಿಪಕ್ಷ ನಾಯಕರಾಗಿಯೇ ಇರುತ್ತಾರೆ ಎಂದರು.