ಜನದಟ್ಟಣೆ ಪ್ರದೇಶದಲ್ಲಿ ಪಟಾಕಿ ಮಾರಾಟ ನಿಷೇಧ ಊರ್ಜಿತ
ಬೆಂಗಳೂರು,ಆ.4. ಬೆಂಗಳೂರು ನಗರದ ಜನನಿಬಿಡ ಪ್ರದೇಶಗಳಲ್ಲಿ ಪಟಾಕಿ ಮಾರಾಟ ನಿಷೇಧಿಸಿದ್ದ ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕ್ರಮವನ್ನು ಹೈಕೋರ್ಟ್ ಊರ್ಜಿತಗೊಳಿಸಿದೆ. ಅಲ್ಲದೆ, ಪಟಾಕಿಗಳ ಬಳಕೆಯಿಂದ ಪ್ರಕೃತಿಯ ಮೇಲೆ ಅತ್ಯಂತು ದೊಡ್ಡ ಪ್ರಮಾಣದಲ್ಲಿ ದುಷ್ಪರಿಣಾಮ ಬೀರುತ್ತದೆ. ಅದರಲ್ಲೂ ಈಗಾಗಲೇ ಮಾಲಿನ್ಯದಿಂದ ನಲುಗುತ್ತಿರುವ ಜನನಿಬಿಡ ಪ್ರದೇಶಗಳಲ್ಲಿ ಪಟಾಕಿಗಳ ಪರಿಣಾಮ ಹೆಚ್ಚಿರುತ್ತದೆ. ಪಟಾಕಿಗಳ ಉತ್ಪಾದನೆ, ಸಾಗಾಟ ಮತ್ತು ಅವುಗಳನ್ನು ಸುಡುವುದರಿಂದ ಪ್ರಕೃತಿಗೆ ಅಪಾಯಕಾರಿ ಎಂದು ಹೇಳಲು ಯಾವುದೇ ಸಂಶೋಧನೆ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ರಾಯಲ್ ಫೈಯರ್ ವರ್ಕ್ ಇಂಡಸ್ಟ್ರೀಸ್ ಮತ್ತು ನಟರಾಜ್ ಟ್ರೇಡಿಂಗ್ ಕಂಪನಿ ಸೇರಿದಂತೆ ಪಟಾಕಿ ಮರಾಟಗಾರ ಕಂಪನಿಗಳ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕ ಸದಸ್ಯ ಪೀಠ ಈ ಆದೇಶ ನೀಡಿದೆ.
"ಪಟಾಕಿ ಕೇವಲ ಮನುಷ್ಯರ ಆರೋಗ್ಯಕ್ಕೆ ಮಾತ್ರವಲ್ಲ ಪರಿಸರ ಮೇಲೂ ದುಷ್ಪರಿಣಾ ಬೀರುವ ಮೂಲಕ ಅಪಾಯಕಾರಿಯಾಗಿದೆ'' ಎಂದು ನ್ಯಾಯಾಲಯ ಅಭಿಪ್ರಾಯಪಟ್ಟು ಬೆಂಗಳೂರಿನ ಮಾರುಕಟ್ಟೆ ಮತ್ತು ಜನನಿಬಿಡ ಪ್ರದೇಶದಲ್ಲಿ ಪಟಾಕಿ ಮಾರಾಟ ಮಾಡಲು ನೀಡಲಾಗಿದ್ದ ನಿರಾಕ್ಷೇಪಣಾ ಪತ್ರವನ್ನು ಹಿಂಪಡೆದು ನಗರ ಪೊಲೀಸ್ ಆಯುಕ್ತರು 2012ರ ಏ.18ಕ್ಕೆ ಹೊರಡಿಸಿದ್ದ ಆದೇಶ ಎತ್ತಿಹಿಡಿದಿದೆ.
ಅಂಧಕಾರದಲ್ಲಿ ಜೀವನ:
"ಪಟಾಕಿಗಳಿಂದ ಜನರ ಆರೋಗ್ಯದ ಮೇಲೆ ಅಪಾಯವಿದೆ. ಬೆಂಗಳೂರಿನಂತಹ ಜನನಿಬಿಡಿ ಪ್ರದೇಶಗಳು ಶಬ್ದ ಹಾಗೂ ವಾಯು ಮಾಲಿನ್ಯದಿಂದ ನರಳುತ್ತಿದೆ. ಹೀಗಿರುವಾಗಿ ಪಟಾಕಿಗಳನ್ನು ಸುಡುವುದಕ್ಕೆ ಅವಕಾಶ ಮಾಡಿಕೊಟ್ಟರೆ ಈಗಿರುವ ಸಂಕಟವನ್ನು ಮತ್ತಷ್ಟು ಹೆಚ್ಚಳ ಮಾಡುತ್ತದೆ. ಪಟಾಕಿಗಳಿಂದ ಎಷ್ಟು ಮಕ್ಕಳು ಹಾಗೂ ಯುವಕರು ತಮ್ಮ ಕಣ್ಣುಗಳನ್ನು ಕಳೆದುಕೊಂಡಿದ್ದಾರೆ. ಇದರಿಂದ ಅವರು ಜೀವಿಸುವ ಹಕ್ಕು ಉಲ್ಲಂಘನೆಯಾಗುತ್ತಿದೆ. ಇದು ಸಂವಿಧಾನದ ರಚನಾಕಾರರು ಸಮಾಧಿಯೊಳಗೆ ನಡುಗುವಂತೆ ಮಾಡುತ್ತಿದೆ. ಪಟಾಕಿಯಿಂದ ಕಣ್ಣು ಕಳೆದುಕೊಳ್ಳುತ್ತಾರೋ ಅವರು ತಮ್ಮ ಉಳಿದ ಜೀವನ್ನು ಅಂಧಕಾರದಲ್ಲಿ ಕಳೆಯಬೇಕಾಗುತ್ತದೆ'' ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ:
ಜನನಿಬಿಡಿ ಪ್ರದೇಶದಲ್ಲಿ ಪಟಾಕಿ ಮಾರಾಟ, ಸಾಗಾಟ ಮತ್ತು ಪರವಾನಗಿ ನವೀಕರಣಕ್ಕೆ ಸಂಬಂಧಿಸಿದಂತೆ ನೀಡಲಾಗಿದ್ದ ನಿರಾಕ್ಷೇಪಣಾ ಪತ್ರವನ್ನು ಹಿಂಪಡೆದಿದ್ದ ಆಯುಕ್ತರು ಹಾಗೂ ಡಿಜಿಪಿ, ಪಟಾಕಿ ದುರಂತದಿಂದ ಅವಘಡಗಳನ್ನು ಸಂಭವಿಸಿದರೆ ಅವುಗಳನ್ನು ನಿರ್ವಹಣೆ, ನಿಯಂತ್ರಣ ಮಾಡಲು ಕಷ್ಟವಾಗುತ್ತದೆ. ಜನನಿಬಿಡ ಪ್ರದೇಶಗಳ್ಳು ಕಿರಿದಾದ ದಾರಿಗಳು ಇರುತ್ತವೆ. ಆ್ಯಂಬುಲೆನ್ಸ್, ಅಗ್ನಿ ಶಾಮಕ ದಳದ ವಾಹನಗಳು ತುರ್ತಾಗಿ ಅವಗಢ ಸಂಭವಿಸಿದ ಪ್ರದೇಶಕ್ಕೆ ತೆರಳಲು ಕಷ್ಟವಾಗುತ್ತದೆ ಎಂದು ತಿಳಿಸಿದ್ದರು.
ಈ ಕ್ರವನ್ನು ಆಕ್ಷೇಪಿಸಿದ್ದ ಪಟಾಕಿ ಮಾರಾಟ ಕಂಪನಿಗಳು, ಆಯುಕ್ತರು ಹಾಗೂ ಡಿಜಿಪಿಯ ಆದೇಶದಿಂದ ತಾವು ವ್ಯಾಪಾರ ವಹಿವಾಟು ನಡೆಸಲು ಆಗುತ್ತಿಲ್ಲ. ಇದರಿಂದ ತಮ್ಮ ಮೂಲಭೂತ ಹಕ್ಕು ಉಲ್ಲಂಘನೆಯಾಗಿದ್ದು, ನಗರ ಆಯುಕ್ತರ ಹಾಗೂ ಡಿಜಿಪಿ ಹೊರಡಿಸಿರುವ ಆದೇಶಗಳನ್ನು ರದ್ದುಪಡಿಸಬೇಕು ಎಂದು ಕೋರಿದರು.