ದತ್ತಪೀಠ ವಿವಾದ: ಅರ್ಜಿ ವಿಚಾರಣೆ ನಡೆಸಲು ಹೈಕೋರ್ಟ್ ತೀರ್ಮಾನ
ಬೆಂಗಳೂರು, ಅಕ್ಟೋಬರ್ 26: ದಶಕಗಳ ಕಾಲದಿಂದ ವಿವಾದದ ಗೂಡಾಗಿರುವ ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡನ್ಗಿರಿ ಕ್ಷೇತ್ರದ ವಿವಾದ ಕುರಿತಂತೆ ದಶಕಗಳ ಬಳಿಕ ಮತ್ತೆ ವಿಚಾರಣೆ ನಡೆಸಲು ಹೈಕೋರ್ಟ್ ಮುಂದಾಗಿದೆ.
ಶುಕ್ರವಾರ ಈ ಕುರಿತು ಹೈಕೋರ್ಟ್ನಲ್ಲಿ ನಡೆದ ವಿಚಾರಣೆ ವೇಳೆ, ಸುಪ್ರೀಂಕೋರ್ಟ್ನಲ್ಲಿ ಈಗಾಗಲೇ ನಡೆಯುತ್ತಿರುವ ನ್ಯಾಯಾಂಗ ನಿಂದನಾ ಅರ್ಜಿಯನ್ನು ಪರಿಗಣಿಸಿಕೊಂಡೇ ಅರ್ಜಿ ವಿಚಾರಣೆ ನಡೆಸಲು ನ್ಯಾಯಾಲಯ ನಿರ್ಧರಿಸಿತು.
ಚಿಗುರಿದ ಬಾಬಾಬುಡನ್ಗಿರಿ ವಿವಾದ-ನೂರಾರು ಮಂದಿಯ ಬಂಧನ
ಸುಪ್ರೀಂಕೋರ್ಟ್ನಲ್ಲಿರುವ ನ್ಯಾಯಾಂಗ ನಿಂದನೆ ಅರ್ಜಿಯು ಈ ವಿಚಾರಣೆಗೆ ಅಡ್ಡಿಯಾಗುವುದಿಲ್ಲ ಎಂದು ತಿಳಿಸಿದೆ, ಅರ್ಜಿದಾರರು ಹಾಗೂ ಸರ್ಕಾರಿ ವಕೀಲರ ಅಭಿಪ್ರಾಯ ದಾಖಲಿಸಿಕೊಂಡು ವಿಚಾರಣೆಯನ್ನು ಅಕ್ಟೋಬರ್ 30ಕ್ಕೆ ಮುಂದೂಡಿತು.
ಸೂಫಿ ದರ್ಗಾ ಎಂದು ಕ್ರೋಢೀಕರಿಸಿ ಅಲ್ಲಿ ನಡೆಯಬೇಕಾದ ಧಾರ್ಮಿಕ ಮತ್ತು ಆಡಳಿತಾತ್ಮಕ ವಿಧಿವಿಧಾನಗಳ ಬಗ್ಗೆ 1989ರಲ್ಲಿ ಧಾರ್ಮಿಕ ದತ್ತಿ ಆಯುಕ್ತರು ನೀಡಿದ್ದ ಆದೇಶವನ್ನು 2007 ಫೆಬ್ರವರಿ 14ರಂದು ರದ್ದುಗೊಳಿಸಿದ ಹೈಕೋರ್ಟ್ ಏಕಸದಸ್ಯ ಪೀಠ, ಕ್ಷೇತ್ರದ ಧಾರ್ಮಿಕ ಸ್ವರೂಪದ ಬಗ್ಗೆ ಹೊಸದಾಗಿ ಸಾರ್ವಜನಿಕ ವಿಚಾರಣೆ ನಡೆಸಲು ಆದೇಶಿಸಿತ್ತು. 2008ರಲ್ಲಿ ರಾಜ್ಯ ಸರಕಾರದ ಅಹವಾಲು ರದ್ದುಗೊಳಿಸಿದ ಹೈಕೋರ್ಟ್ ದ್ವಿಸದಸ್ಯ ಪೀಠ ಏಕಸದಸ್ಯ ಪೀಠದ ಆದೇಶ ಎತ್ತಿ ಹಿಡಿದಿತ್ತು.
ಈ ಆದೇಶದ ವಿರುದ್ಧ ಕೋಮು ಸೌಹಾರ್ದ ವೇದಿಕೆ ಮತ್ತು ಸಿಟಿಜನ್ಸ್ ಫಾರ್ ಜಸ್ಟೀಸ್ ಅಂಡ್ ಪೀಸ್ ಸಂಘಟನೆಗಳು ಜಂಟಿಯಾಗಿ, ಶಾಖಾದ್ರಿ ಪ್ರತ್ಯೇಕವಾಗಿ 2008 ಸೆಪ್ಟಂಬರ್ನಲ್ಲಿ ಸುಪ್ರೀಂ ಕೋರ್ಟ್ಗೆ ಅಹವಾಲು ಸಲ್ಲಿಸಿದ್ದರು. ಈ ಅಹವಾಲು ಆಲಿಸಿ ಸುಪ್ರೀಂ ಕೋರ್ಟ್ನ ದ್ವಿಸದಸ್ಯ ಪೀಠ ವಿವಾದಕ್ಕೆ ಅಂತಿಮ ತೆರೆ ಎಳೆಯುತ್ತದೆ ಎಂಬುದು ಎಲ್ಲರ ನಂಬಿಕೆಯಾಗಿತ್ತು. ಆದರೆ, ವಿವಾದ ಪರಿಹರಿಸುವ ಜವಾಬ್ದಾರಿಯನ್ನು ನ್ಯಾಯಾಲಯ ರಾಜ್ಯ ಸರಕಾರಕ್ಕೇ ವಹಿಸಿತ್ತು.
ದತ್ತ ಪೀಠ : ಸರ್ಕಾರದ ಮೇಲ್ಮನವಿ ತಿರಸ್ಕೃತ
ಇದೀಗ 10 ವರ್ಷಗಳ ನಂತರ ವಿವಾದದ ವಿಚಾರಣೆ ನಡೆಸಲು ಹೈಕೋರ್ಟ್ ತೀರ್ಮಾನಿಸಿದೆ. ಕಳೆದ ಎರಡು ತಿಂಗಳ ಹಿಂದೆ ಎರಡೂ ಧರ್ಮದ ಅರ್ಚಕರಿಗೆ ವಿಧಿ ವಿಧಾನ ನಡೆಸಲು ಹೈಕೋರ್ಟ್ ಸಲಹೆ ನೀಡಿತ್ತು. ಈ ಕುರಿತು ಸರ್ಕಾರದೊಂದಿಗೆ ಚರ್ಚಿಸುತ್ತೇವೆ ಎಂದು ತಿಳಿಸಿತ್ತು.