ಇ ಸಿಟಿ ಕೊಲೆ ಕೇಸ್: ಸಹೋದರರಿಬ್ಬರಿಗೆ ಜಾಮೀನು ನಿರಾಕರಿಸಿದ HC
ಬೆಂಗಳೂರು, ಜು.3: ಆರೋಪಿಗಳು ಅಮಾಯಕ ವ್ಯಕ್ತಿಯೊಬ್ಬನ ಜೀವ ತೆಗೆದಿದ್ದಾರೆ. ಇದೀಗ ಆರೋಪಿಗಳು ತಮ್ಮ ತಂದೆಯ ಜೀವ ಉಳಿಸಲು ಜಾಮೀನು ಕೋರಿದರೆ ಅದನ್ನು ಮಾನ್ಯ ಮಾಡಲಾಗದು ಎಂದು ಹೈಕೋರ್ಟ್ ಕೊಲೆ ಪ್ರಕರಣವೊಂದರಲ್ಲಿ ಕಳೆದ ಒಂದೂವರೆ ವರ್ಷದಿಂದ ನ್ಯಾಯಾಂಗ ಬಂಧನದಲ್ಲಿರುವ ಸಹೋದರರಿಬ್ಬರಿಗೆ ಜಾಮೀನು ನಿರಾಕರಿಸಿದೆ.
ಅಲ್ಲದೆ, ಜೀವ ಎನ್ನುವುದು ಕೇವಲ ಆರೋಪಿಗಳಿಗೆ ಮಾತ್ರವಲ್ಲ, ಸಂತ್ರಸ್ತರ ಕುಟುಂಬದವರಿಗೂ ಬಹಳ ಮುಖ್ಯವಾಗಿರುತ್ತದೆ. ಆದ್ದರಿಂದ, ಒಬ್ಬ ವ್ಯಕ್ತಿಯನ್ನು ಬರ್ಬರವಾಗಿ ಕೊಲೆಗೈದಿರುವ ಆರೋಪಿಗಳು, ಮತ್ತೊಬ್ಬ ವ್ಯಕ್ತಿಯ ಅಂದರೆ, ತಂದೆಯ ಜೀವ ಉಳಿಸುವ ಕಾರಣ ನೀಡಿ ಜಾಮೀನು ಕೋರಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನಡೆದಿದ್ದ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಸಾದಿಕ್ ಖಾನ್ ಹಾಗೂ ಆದಿಲ್ ಖಾನ್ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಕೆ ನಟರಾಜನ್ ಅವರಿದ್ದ ಏಕಸದಸ್ಯಪೀಠ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
''ಜೀವ ಎಲ್ಲರಿಗೂ ಮುಖ್ಯ, ಜೀವ ಎನ್ನುವುದು ಪ್ರತಿಯೊಬ್ಬರಿಗೂ ಮುಖ್ಯವಾಗಿರುತ್ತದೆ. ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವವರು ತಮ್ಮ ಅನಾರೋಗ್ಯ ಪೀಡಿತ ತಂದೆಯ ಜೀವ ಉಳಿಸುವುದಕ್ಕಾಗಿ ಜಾಮೀನು ಕೋರಲು ಸಾಧ್ಯವಿಲ್ಲ'' ಎಂದು ಅನಿಸಿಕೆ ವ್ಯಕ್ತಪಡಿಸಿದೆ.
ಶಿಕ್ಷಕನ ವಿರುದ್ಧ ಲೈಂಗಿಕ ಕಿರುಕುಳ FIR, ರದ್ದುಗೊಳಿಸಲು HC ನಕಾರ
ತಂದೆಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಖಾಸಗಿ ಆಸ್ಪತ್ರೆಯೊಂದರ ವರದಿ ಸಲ್ಲಿಸಿ ಜಾಮೀನು ಕೋರಿರುವ ಆರೋಪಿಗಳು, ತಂದೆ ಜೀವ ಉಳಿಸಲು ತಕ್ಷಣವೇ ಶಸ್ತ್ರಚಿಕತ್ಸೆ ನಡೆಸುವ ಅಗತ್ಯವಿದೆ. ಅದಕ್ಕಾಗಿ 5 ರಿಂದ 6 ಲಕ್ಷ ರೂ. ಹೊಂದಿಸಬೇಕಿದ್ದು, ಜಾಮೀನು ನೀಡುವಂತೆ ಮನವಿ ಮಾಡಿದ್ದಾರೆ.
ತಂದೆಯ ಚಿಕಿತ್ಸೆಗಾಗಿ 5ರಿಂದ 6 ಲಕ್ಷ ರೂ. ಹೊಂದಿಸಬೇಕಿದೆ ಎಂಬ ಕಾರಣಕ್ಕೆ ಆರೋಪಿಗಳಿಗೆ ಜಾಮೀನು ನೀಡಲು ಸಾಧ್ಯವಿಲ್ಲ. ಜಾಮೀನಿನ ಮೇಲೆ ಬಿಡುಗಡೆ ಮಾಡಲು ಯಾವುದೇ ಬಲವಾದ ಕಾರಣಗಳಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಈ ಹಿಂದೆ ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಇದೇ ಹೈಕೋರ್ಟ್ ವಜಾಗೊಳಿಸಿದೆ ಎಂಬ ವಿಚಾರವನ್ನು ನ್ಯಾಯಾಲಯ ಆದೇಶದಲ್ಲಿ ಉಲ್ಲೇಖಿಸಿದೆ.
ಪ್ರಕರಣದ ವಿವರ: ಅಕ್ರಂ ಪಾಷಾ ಎಂಬ ವ್ಯಕ್ತಿ 2021ರ ಫೆ.1ರಂದು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಗೆ ತೆರಳಿ, ತಮ್ಮ ಸಹೋದರ ಅಫ್ಜಲ್ ಪಾಷಾ ಮೇಲೆ ಮಾರಣಾಂತಿಕವಾಗಿ ಹಲ್ಲೆನಡೆಸಿ ಕೊಲೆ ಮಾಡಲಾಗಿದೆ ಎಂದು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೊಲೀಸರು ಪ್ರತ್ಯಕ್ಷದರ್ಶಿಗಳ ಹೇಳಿಕೆ ಆಧರಿಸಿ, ಆರೋಪಿಗಳನ್ನು ಬಂಧಿಸಿದ್ದರು.
ಫೆ.4ರಂದು ವಿಚಾರಣಾ ನ್ಯಾಯಾಲಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಈ ಮಧ್ಯೆ, ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸೆಷನ್ಸ್ ಕೋರ್ಟ್ ವಜಾಗೊಳಿಸಿತ್ತು. ಹೈಕೋರ್ಟ್ ಸಹ 2021ರ ನ.12ರಂದು ಆರೋಪಿಗಳಿಗೆ ಜಾಮೀನು ನಿರಾಕರಿಸಿತ್ತು. ಇದೀಗ, ತಂದೆಯ ಅನಾರೋಗ್ಯ ಕಾರಣ ನೀಡಿ ಆರೋಪಿಗಳು ಜಾಮೀನು ಕೋರಿ ಮತ್ತೊಮ್ಮೆ ಹೈಕೋರ್ಟ್ ಮೆಟ್ಟಿಲೇರಿದ್ದರು.