ಯೋಧನಿಗೆ ಕಿಡ್ನಿ ಕಸಿ ಅನುಮತಿಗೆ ನಕಾರ, ಎಂಥಾ ಅನ್ಯಾಯ ಸ್ವಾಮಿ
ಬೆಂಗಳೂರು, ಜು.19: ನಮ್ಮನ್ನು ಭದ್ರವಾಗಿಡಲು ಇಡೀ ಸರ್ವಸ್ವವನ್ನೇ ತ್ಯಾಗಮಾಡುವ ಯೋಧನಿಗೆ ಕಿಡ್ನಿ ಕಸಿ ಮಾಡಲು ಅನುಮತಿ ನೀಡದ ರಾಜ್ಯ ಆರೋಗ್ಯ ಇಲಾಖೆಯ ಮಾನವ ಕಸಿ ಅಂಗಾಂಗ ಅನುಮೋದನಾ ಸಮಿತಿಯನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಹೈಕೋರ್ಟ್ ಆದೇಶದ ಹೊರತಾಗಿಯೂ ಪುಣೆಯ ವಾಯುಸೇನೆಯ ಕರ್ನಲ್ ಪಂಕಜ್ ಭಾರ್ಗವ್ ಅವರಿಗೆ ಕಿಡ್ನಿ ಕಸಿ ಮಾಡಿಸಿಕೊಳ್ಳಲು ಮಾನವ ಅಗಾಂಗ ಕಸಿ ಅನುಮೋದನಾ ಸಮಿತಿ ಸಮ್ಮತಿ ನೀಡದೇ ಇರುವುದಕ್ಕೆ ನ್ಯಾಯಮೂರ್ತಿ ಅರವಿಂದ್ ಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರ್ನಲ್ ಪಂಕಜ್ ಭಾರ್ಗವ್ ಅವರಿಗೆ ಕಿಡ್ನಿ ನೀಡಲು ಜೈಪುರದ ಮೂಲದ ವರ್ಷ ಶರ್ಮಾ ಮುಂದೆಬಂದಿದ್ದರೂ ಅದಕ್ಕೆ ಸಮಿತಿಯು ಅನುಮತಿ ನೀಡಿರಲಿಲ್ಲ. ಇದರಿಂದ ಅವರು ಕೋರ್ಟ್ಗೆ ಮೊರೆ ಹೋಗಿದ್ದರು.
ಅರ್ಜಿದಾರರು ಮಾನವ ಅಂಗಾಂಗಳ ಕಸಿ ಅನುಮೋದನಾ ಸಮಿತಿ ಮುಖ್ಯಸ್ಥರಿಗೆ ಅಗತ್ಯ ವೈದ್ಯಕೀಯ ದಾಖಲೆಗಳನ್ನು ಸಲ್ಲಿಸಿ ಕಿಡ್ನಿ ಕಿಡ್ನಿ ಕಸಿಗೆ ಅನುಮತಿ ಕೋರಬೇಕು. ಅದಾದ ಬಳಿಕ 24 ಗಂಟೆಯೊಳಗೆ ಸಮಿತಿಯು ಈ ಕುರಿತು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಮೇ 10ರಂದು ಹೈಕೋರ್ಟ್ ತಿಳಿಸಿತ್ತು.
ಆದರೆ ಎರಡು ತಿಂಗಳು ಕಳೆದರೂ ಕಿಡ್ನಿ ಕಸಿಗೆ ಅನುಮತಿ ನೀಡದಕ್ಕೆ ಅರ್ಜಿದಾರ ಪರ ವಕೀಲ ಹೈಕೋರ್ಟ್ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ. ಹೈಕೋರ್ಟ್ ಆದೇಶದಂತೆ ಅಂಗಾಂಗ ಕಸಿ ಅನುಮೋದನಾ ಸಮಿತಿಗೆ ಅಗತ್ಯ ದಾಖಲೆ ಒದಗಿಸಿದರೂ ಸಮಿತಿಯು ಈವರೆಗೆ ಸಭೆ ನಡೆಸಿ ಅರ್ಜಿದಾರರಿಗೆ ಕಿಡ್ನಿ ಕಸಿಗೆ ಅನುಮತಿ ನೀಡುವ ಕುರಿತು ಪ್ರಕಟಿಸಿಲ್ಲ ಎಂದು ದೂರಿಸಿದ್ದಾರೆ.