ಬಾಡಿಗೆ ಮನೆ ಹಾನಿ ಪ್ರಕರಣ: ಯಶ್ ತಾಯಿಗೆ ಸಿಕ್ತು ನಿರಾಳ ಸುದ್ದಿ
Recommended Video
ಬೆಂಗಳೂರು, ಜೂನ್ 19: ಬಾಡಿಗೆ ಮನೆ ಹಾನಿ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಯಶ್ ಅವರ ತಾಯಿ ಪುಷ್ಪಾ ವಿರುದ್ಧ ದಾಖಲಿಸಿದ್ದ ಎಫ್ಐಅರ್ ರದ್ದುಗೊಳಿಸುವಂತೆ ಗಿರಿನಗರ ಠಾಣೆ ಪೊಲೀಸರಿಗೆ ಹೈಕೋರ್ಟ್ ಆದೇಶಿಸಿದೆ.
ಹೈಕೋರ್ಟ್ ಆದೇಶದಂತೆ ಮನೆ ಖಾಲಿ ಮಾಡುವ ವೇಳೆ ಮನೆಯ ಅನೇಕ ವಸ್ತುಗಳಿಗೆ ಹಾನಿಯುಂಟು ಮಾಡಿದ್ದಾರೆ ಎಂದು ನಟ ಯಶ್ ಹಾಗೂ ತಾಯಿ ಪುಷ್ಪಾ ವಿರುದ್ಧ ಮನೆ ಮಾಲೀಕರಾದ ಡಾ.ವನಜಾ ಹಾಗೂ ಮುನಿಪ್ರಸಾದ್ ಅವರು ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ದೂರು ದಾಖಲಿಸಿಕೊಂಡಿರುವ ಪೊಲೀಸರು ಯಶ್ ಹಾಗೂ ಅವರ ತಾಯಿ ವಿರುದ್ಧ ಐಪಿಸಿ ಕಲಂ 427 ಅಡಿಯಂತೆ ಎಫ್ ಐ ಆರ್ ಹಾಕಿದ್ದರು.
ಹುಟ್ಟೂರಿನಲ್ಲಿ ತೋಟ, ಮನೆ ಖರೀದಿಸಿದ ಯಶ್, ರೈತ ಮಿತ್ರನಾಗುವತ್ತ!
ರಾಕಿಂಗ್ ಸ್ಟಾರ್ ಯಶ್ ಅವರ ಕತ್ರಿಗುಪ್ಪೆ ಬಾಡಿಗೆ ಮನೆ ವಿವಾದ ಮುಗಿಯಿತು ಎನ್ನುವಷ್ಟರಲ್ಲಿ ಮತ್ತೊಮ್ಮೆ ಆರಂಭವಾಗಿದೆ.ಮನೆ ಖಾಲಿ ಮಾಡುವ ಸಂದರ್ಭ ಯಶ್ ಹಾನಿ ಮಾಡಿದ್ದ ಮನೆಯ ವಸ್ತುಗಳನ್ನು ರಿಪೇರಿ ಮಾಡಲು ತಗುಲುವ ವೆಚ್ಚ ಪರಿಗಣಿಸಿ ಮನೆ ಮಾಲೀಕರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಇದಕ್ಕೆ ಪ್ರತಿಯಾಗಿ ಯಶ್ ಅವರ ತಾಯಿ ಪುಷ್ಪಾ ಅವರ ಪರ ವಕೀಲರು ಕೂಡಾ ಪ್ರತಿ ವಾದ ಮಂಡಿಸಿ, ಎಫ್ಐಆರ್ ರದ್ದುಗೊಳಿಸುವಂತೆ ಕೋರಿದ್ದರು.
ಪ್ರಕರಣ ಕೋರ್ಟಿನಲ್ಲಿರುವಾಗ ಎಫ್ಐಆರ್ ಏಕೆ?
ಬಾಡಿಗೆ ಮನೆ ವಿವಾದ ಪ್ರಕರಣ ಕೋರ್ಟಿನಲ್ಲಿರುವಾಗ ಎಫ್ಐಆರ್ ಯಾವ ಆಧಾರದ ಮೇಲೆ ಹಾಕಲಾಗಿದೆ. ಕೋರ್ಟ್ ಆದೇಶದಂತೆ ನಿಗದಿತ ಸಮಯ ಹಾಗೂ ಕ್ರಮದಲ್ಲೇ ಮನೆಯನ್ನು ಖಾಲಿ ಮಾಡಿ, ಕೀ ಹಸ್ತಾಂತರಿಸಲಾಗಿದೆ. ಮನೆಯ ವಸ್ತುಗಳು ಹಾನಿಯಾಗಿದೆ ಎಂಬ ಆರೋಪದ ಜೊತೆಗೆ ಬೆಲೆ ಬಾಳುವ ವಸ್ತುಗಳನ್ನು ಹಾಳುಗೆಡವಲಾಗಿದೆ ಎಂದು ತಪ್ಪಾಗಿ ಸೇರಿಸಲಾಗಿದೆ. ದೂರುದಾರರ ವಕೀಲರು ಮನೆಯನ್ನು ಪರಿಶೀಲಿಸಿದ್ದಾರೆ. ಆದರೆ, ಪ್ರಕರಣದ ಕೋರ್ಟಿನಲ್ಲಿ ಇತ್ಯರ್ಥವಾಗಿದ್ದರೂ ಮತ್ತೊಮ್ಮೆ ಪೊಲೀಸರ ಮೊರೆ ಹೋಗಿದ್ದು ಏಕೆ? ನ್ಯಾಯಾಲಯಕ್ಕೆ ಬೆಳವಣಿಗೆ ಬಗ್ಗೆ ತಿಳಿಸಬಹುದಾಗಿತ್ತು ಎಂದು ಯಶ್ ತಾಯಿ ಪರ ವಕೀಲರಾದ ರವಿಶಂಕರ್ ಮಂಡಿಸಿದ ವಾದವನ್ನು ಪುರಸ್ಕರಿಸಿದ ಹೈಕೋರ್ಟ್ ಜಡ್ಜ್, ಎಫ್ಐಆರ್ ರದ್ದುಗೊಳಿಸುವಂತೆ ಪೊಲೀಸರಿಗೆ ಸೂಚಿಸಿದರು.
ಜೂನ್ 07 ಮನೆಯನ್ನು ತೊರೆದಿದ್ದರು
42ನೇ ಸಿಟಿ ಸಿವಿಎಲ್ ನ್ಯಾಯಾಲಯವು ಏಪ್ರಿಲ್ ತಿಂಗಳಿನಲ್ಲಿ ನೀಡಿದ್ದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿತ್ತು. ಮನೆ ಬಾಡಿಗೆ ಪಾವತಿಸಿ, ಇಲ್ಲವೇ ಮನೆ ಖಾಲಿ ಮಾಡಿ ಎಂದು ನಟ ಯಶ್ ತಾಯಿಗೆ ನಿರ್ದೇಶಿಸಿತ್ತು. ಹಾಸನದಲ್ಲಿ ಮನೆ ನಿರ್ಮಾಣ ಮಾಡುತ್ತಿರುವುದರಿಂದ ಕಾಲಾವಕಾಶ ನೀಡಬೇಕು ಎಂದು ಯಶ್ ಅವರ ತಾಯಿ ಮನವಿ ಮಾಡಿದ್ದರು. ಹೀಗಾಗಿ, 23.27 ಲಕ್ಷ ರೂ. ಬಾಡಿಗೆ ಪಾವತಿಸಿ, ಮೇ 31ರ ವರೆಗೆ ಇರಬಹುದಾಗಿತ್ತು. ಮೇ 31ರ ಬದಲು ಜೂನ್ 07 ಮನೆಯನ್ನು ತೊರೆದಿದ್ದರು.
ಯಶ್ ಅದೃಷ್ಟದ ಮನೆ
ಬನಶಂಕರಿ ಮೂರನೇ ಹಂತದ ಮೂರನೇ ಬ್ಲಾಕ್ ಕತ್ರಿಗುಪ್ಪೆಯಲ್ಲಿರುವ ಮನೆ ನಂಬರ್ 757 ರಲ್ಲಿ 2010ರಿಂದ ನಟ ಯಶ್ ಬಾಡಿಗೆಗೆ ವಾಸವಾಗಿದ್ದರು. ಅಂದು ಮಾಡಿಕೊಂಡಿದ್ದ ಬಾಡಿಗೆ ಕರಾರಿನ ಪ್ರಕಾರ 40 ಸಾವಿರ ರೂ.ಗೆ ನಟ ಯಶ್ ತಾಯಿ ಪುಷ್ಪಾ ಬಾಡಿಗೆ ಮನೆ ಪಡೆದುಕೊಂಡಿದ್ದರು. ಒಂದು ವರ್ಷದವರೆಗೆ ಬಾಡಿಗೆ ನೀಡಿದ್ದ ಯಶ್ ಕುಟುಂಬ, ನಂತರ ಬಾಡಿಗೆ ನೀಡಿಲ್ಲ ಎಂದು ಮುನಿಪ್ರಸಾದ್ ಆರೋಪಿಸಿದ್ದರು. ಸಿವಿಎಲ್ ಕೋರ್ಟ್, ಹೈಕೋರ್ಟ್ ತನಕ ಪ್ರಕರಣ ತಲುಪಿ, ಯಶ್ ತಾಯಿ ವಿರುದ್ಧ ತೀರ್ಪು ಬಂದಿತ್ತು.
ಡಾ. ವನಜಾ ಮುನಿಪ್ರಸಾದ್ ನೀಡಿದ್ದ ದೂರು
2010ರ ಅಗಸ್ಟ್ 11ರಂದು ಬನಶಂಕರಿ 3ನೇ ಹಂತದ ಮನೆಯನ್ನು ಪುಷ್ಪಾಗೆ ಬಾಡಿಗೆಗೆ ನೀಡಿದ್ದೆವು. ಬಾಡಿಗೆ ನೀಡದ ಕಾರಣ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದೆವು. 7 ವರ್ಷ ಅಧೀನ ನ್ಯಾಯಾಲಯ ಮತ್ತು ಹೈಕೋರ್ಟ್ನಲ್ಲಿ ವಿಚಾರಣೆ ನಡೆದು ಮನೆ ಖಾಲಿ ಮಾಡುವಂತೆ ಪುಷ್ಪಾಗೆ ಆದೇಶ ನೀಡಿತ್ತು. ಆದರೆ, ಮನೆ ಖಾಲಿ ಮಾಡುವಾಗ ಎಲೆಕ್ಟ್ರಿಕಲ್ ಬಲ್ಬ್ಗಳು, ಅಲಂಕಾರಿಕ ದೀಪಗಳು, ಫ್ಯಾನ್ಗಳು, ಒಳಗಿನ ಬಾಗಿಲುಗಳು, ಶೆಟರ್, ಪೂಜೆ ಕೊಠಡಿ ಬಾಗಿಲು, ಬಾತ್ರೂಮ್ ಬಾಗಿಲುಗಳನ್ನು ಬಿಚ್ಚಿ ತೆಗೆದುಕೊಂಡು ಹೋಗಿದ್ದಾರೆ. ವಾಷ್ ಬೆಸಿನ್ ಮತ್ತು ಕಮೋಡ್ಗಳನ್ನು ಉದ್ದೇಶಪೂರ್ವಕವಾಗಿ ಒಡೆದು ವಶಪಡಿಸಿದ್ದಾರೆ. ಇವೆಲ್ಲದರ ಮೌಲ್ಯ ಅಂದಾಜು 28 ಲಕ್ಷ ರೂ. ಎಂದು ತಿಳಿಸಲಾಗಿದೆ.