ಊಬ್ಲೋ ವಾಚ್ ಪ್ರಕರಣ: ಎಸಿಬಿಗೆ ಹೈಕೋರ್ಟ್ ಸೂಚನೆ
ಬೆಂಗಳೂರು, ಜುಲೈ 2: ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಮಾಜಿ ಯಾದರೂ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಕೊಡುಗೆಯಾಗಿ ಪಡೆದಿದ್ದಾರೆ ಎನ್ನಲಾದ ಊಬ್ಲೋ ವಾಚ್ ಪ್ರಕರಣ ಅವರನ್ನು ಇನ್ನೂ ಕೈಬಿಡುತ್ತಿಲ್ಲ.
ಸೋಮವಾರ ಪ್ರಕರಣದ ಕುರಿತು ಹೈಕೋರ್ಟ್ ಮಹತ್ವದ ಆದೇಶ ನೀಡಿದ್ದು, ಎಸಿಬಿಗೆ ನಿರ್ದೇಶನವೊಂದನ್ನು ನೀಡಿದೆ. ಆರ್ಟಿಐ ಕಾರ್ಯಕರ್ತ ನಟರಾಜ್ ಶರ್ಮಾ ಎನ್ನುವವರು ಎಸಿಬಿಗೆ ಇದೇ ಪ್ರಕರಣದ ದಾಖಲೆಗಳನ್ನು ಕೊಡುವಂತೆ ಕೋರಿದ್ದರು. ಆದರೆ ಎಸಿಬಿ ಮಾಹಿತಿಯನ್ನು ನೀಡಲು ನಿರಾಕರಿಸಿದ್ದು, ಈ ಹಿನ್ನೆಲೆಯಲ್ಲಿ ಶರ್ಮಾ ಹೈಕೋರ್ಟ್ ಮೆಟ್ಟಿಲೇರಿದ್ದರು.
ಸಿದ್ದರಾಮಯ್ಯ ಊಬ್ಲೋ ವಾಚ್: ಪಿಐಎಲ್ ಹಿಂಪಡೆದ ಅನುಪಮಾ ಶೆಣೈ
ಸೋಮವಾರ ಶರ್ಮಾ ಅವರ ಅರ್ಜಿಯನ್ನು ವಿಚಾರಣೆ ನಡೆಸಿ ಹೈಕೋರ್ಟ್ ಎಸಿಬಿ ಮಾಹಿತಿ ಕೋಟಾದಡಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ ಊಬ್ಲೋ ವಾಚ್ ಪ್ರಕರಣ ಕುರಿತಂತೆ ದಾಖಲಾತಿಗಳನ್ನು ಒದಗಿಸುವುದನ್ನು ಪರಿಗಣಿಸುವಂತೆ ಸೂಚನೆ ನೀಡಿದೆ. ಇದೇ ವೇಳೆ ಅರ್ಜಿದಾರ ನಟರಾಜ್ ಶರ್ಮಾ ಅವರಿಗೆ ಆರ್ಟಿಐ ಕಾಯ್ದೆಯಡಿ ಅರ್ಜಿ ಸಲ್ಲಿಸುವಂತೆ ಸೂಚನೆ ನೀಡ ಅರ್ಜಿಯನ್ನಿ ಇತ್ಯರ್ಥಪಡಿಸಿದೆ.
ಈ ಹಿನ್ನಲೆಯಲ್ಲಿ ಆರ್ಟಿಐ ಕಾರ್ಯಕರ್ತ ನಟರಾಜ್ ಶರ್ಮಾ ಎಸಿಬಿಗೆ ಅರ್ಜಿ ಸಲ್ಲಿಸಿದರೆ ಮುಂದೆ ಎಸಿಬಿ ಯಾವ ಕ್ರಮ ಕೈಗೊಳ್ಳುತ್ತಿದೆ ಎನ್ನುವುದು ಮುಂದಿನ ಕುತೂಹಲವಾಗಿದೆ.