ಈ ಆಟೋ ಚಾಲಕನ ಪ್ರಾಮಾಣಿಕತೆಗೆ ಬೆಲೆಕಟ್ಟಲು ಸಾಧ್ಯವೆ?
ಬೆಂಗಳೂರು, ಏ. 1 : ಗ್ರಾಹಕರೊಬ್ಬರು ಬಿಟ್ಟುಹೋಗಿದ್ದ ಹೊಚ್ಚಹೊಸ ಲ್ಯಾಪ್ಟಾಪ್ ಮತ್ತಿತರ ವಸ್ತುಗಳನ್ನು ಪ್ರಾಮಾಣಿಕವಾಗಿ ಹಿಂದಿರುಗಿಸಿದ ಆಟೋ ಚಾಲಕ ಗಾಯತ್ರಿನಗರದ 37 ವರ್ಷದ ಮಧುಸೂಧನ ಅವರಿಗೆ ಹ್ಯಾಟ್ಸಾಫ್, ಅಭಿನಂದನೆ ಮತ್ತು ಶುಭಾಶಯಗಳು. ಪ್ರಾಮಾಣಿಕತೆಗೆ ಬೆಲೆ ಕಟ್ಟಲು ಸಾಧ್ಯವೆ?
ಜನರಲ್ಲಿ ಅಭಿಪ್ರಾಯ ಹೇಗೆ ಮೂಡಿದೆಯೆಂದರೆ, ಶಾಸಕರು ಮಾನವೀಯತೆ ತೋರಿ ಸಹಾಯ ಮಾಡಿದ್ದು, ಪೊಲೀಸ್ ಪೇದೆಯಾಗಲಿ, ಆಟೋ ಚಾಲಕನಾಗಲಿ ಸಿಕ್ಕವಸ್ತುವನ್ನು ಪ್ರಾಮಾಣಿಕವಾಗಿ ಹಿಂದಿರುಗಿಸಿದ ಕಥೆಯನ್ನು ಬರೆದರೆ ಮೂರ್ಖರ ದಿನಾಚರಣೆಯ ಸ್ಟೋರಿ ಎಂದು ತಪ್ಪು ತಿಳಿಯುವ ಸಾಧ್ಯತೆ ಇರುತ್ತದೆ. ಆದ್ದರಿಂದ ಮೊದಲೇ ಸ್ಪಷ್ಟಪಡಿಸುವುದು ಒಳ್ಳೆಯದು. ಇದು ಏಪ್ರಿಲ್ 1ರ ಕಥೆಯಲ್ಲ, ನಿಜವಾಗಿಯೂ ನಡೆದದ್ದು.
ಕಾಕತಾಳೀಯವೆಂಬಂತೆ, ಈ ಘಟನೆ ನಡೆದಿರುವುದು ಕೂಡ ಏಪ್ರಿಲ್ 1ರಂದು. ಆಗಿದ್ದೇನೆಂದರೆ, ಮಿಜೋರಾಂ ಮೂಲದ ಜೈರೆಮ್ಚುಂಗಾ ಎಂಬುವವರು ಮಂಡ್ಯದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಲ್ಯಾಪ್ಟಾಪ್ ಖರೀದಿಸಲೆಂದು ಬೆಂಗಳೂರಿಗೆ ಬಂದಿದ್ದರು. ಎಸ್ಪಿ ರಸ್ತೆಯಲ್ಲಿ 51 ಸಾವಿರ ರು. ಮೌಲ್ಯದ ಲ್ಯಾಪ್ಟಾಪ್ ಖರೀದಿಸಿದ್ದರು.
ಅಲ್ಲಿಂದ ಬ್ರಿಗೇಡ್ ರಸ್ತೆಗೆ ಹೋಗಲೆಂದು ಮಧುಸೂಧನ ಅವರ, KA 04 AA 0951 ಸಂಖ್ಯೆಯ ಆಟೋವನ್ನು ಸ್ನೇಹಿತೆಯೊಂದಿಗೆ ಹತ್ತಿದ್ದರು. ಅದ್ಯಾವ ಧ್ಯಾನದಲ್ಲಿದ್ದರೋ ಇಳಿಯುವಾಗ ಹೊಸ ಲ್ಯಾಪ್ಟಾಪ್ ಆಟೋದಲ್ಲೇ ಬಿಟ್ಟು ಇಳಿದಿದ್ದಾರೆ. ಮತ್ತೊಬ್ಬರು ಗಿರಾಕಿಯನ್ನು ಹತ್ತಿಸಿಕೊಳ್ಳುವ ಸಂದರ್ಭದಲ್ಲಿ ಇದು ಮಧುಸೂಧನ ಅವರ ಗಮನಕ್ಕೆ ಬಂದಿದೆ. [ಅಪ್ರತಿಮ ಪ್ರಾಮಾಣಿಕ ಸೈನಿಕನಿಗೊಂದು ಸೆಲ್ಯೂಟ್]
ಕೂಡಲೆ ಮಧುಸೂಧನ ಅವರು ಲ್ಯಾಪ್ಟಾಪ್ ತೆಗೆದು ಫೋನ್ ನಂಬರ್ ಹುಡುಕಾಡಿದ್ದಾರೆ. ಅದೃಷ್ಟವಶಾತ್ ಲ್ಯಾಪ್ಟಾಪ್ ಖರೀದಿಸಿದ ಬಿಲ್ ಅದರಲ್ಲೇ ಇತ್ತು. ಅದರಲ್ಲಿ ಜೈರೆಮ್ಚುಂಗಾ ಫೋನ್ ನಂಬರ್ ಕೂಡ ನಮೂದಿಸಲಾಗಿತ್ತು. ಆದರೆ, ಮಧುಸೂಧನ ಅವರ ಕರೆ ಬರುವುದಷ್ಟರಲ್ಲಿ ಜೈರೆಮ್ಚುಂಗಾ ಅವರು ಪೊಲೀಸರನ್ನು ಸಂಪರ್ಕಿಸಿದ್ದರು.
ಬ್ರಿಗೇಡ್ ರಸ್ತೆಯ ಟ್ರಾಫಿಕ್ ಪೊಲೀಸ್ ಜೈರೆಮ್ಚುಂಗಾ ಅವರನ್ನು ಸಂಚಾರ ನಿರ್ವಹಣಾ ಕೇಂದ್ರಕ್ಕೆ ಹೋಗಿ ಅಲ್ಲಿ, ಬ್ರಿಗೇಡ್ ರಸ್ತೆಯ ಸಿಸಿಟಿವಿ ಕ್ಯಾಮೆರಾ ಮುಖಾಂತರ ಯಾವ ಆಟೋದಲ್ಲಿ ಹತ್ತಿ ಇಳಿದಿದ್ದನ್ನು ಖಾತ್ರಿ ಮಾಡಿಕೊಳ್ಳಲು ಹೇಳಿದ್ದಾರೆ. ಟ್ರಾಫಿಕ್ ಮ್ಯಾನೇಜ್ಮೆಂಟ್ ಸೆಂಟರ್ನಲ್ಲಿದ್ದಾಗಲೇ ಮಧುಸೂಧನ ಅವರ ಕರೆ ಬಂದಿದೆ, ಜೈರೆಮ್ಚುಂಗಾ ಅವರು ನಿರಾಳರಾಗಿದ್ದಾರೆ.
ಅಲ್ಲಿಗೆ ಆಟೋದಲ್ಲಿ ಧಾವಿಸಿದ ಮಧುಸೂಧನ ಅವರು ಲ್ಯಾಪ್ಟಾಪ್ ಮತ್ತಿತರ ವಸ್ತುಗಳನ್ನು ಪೊಲೀಸರ ಸಮ್ಮುಖದಲ್ಲೇ ಜೈರೆಮ್ಚುಂಗಾ ಅವರಿಗೆ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಜೈರೆಮ್ಚುಂಗಾ ಅವರು ಕೂಡ ಮಧುಸೂಧನ ಅವರಿಗೆ ಹಾರ ಹಾಕಿ ಧನ್ಯವಾದ ಹೇಳಿದರು. [ಬೆಂಗಳೂರು ಆಟೋ ಡ್ರೈವರುಗಳಿಬ್ರು ಏನ್ಮಾಡಿದ್ದಾರೆ ನೋಡಿ]
ಈ ಘಟನೆ ಕುರಿತು ಒನ್ಇಂಡಿಯಾ ಜೊತೆ ಸಂತಸ ಹಂಚಿಕೊಂಡ ಮಧುಸೂಧನ ಅವರು, ಜನರಲ್ಲಿ ಆಟೋ ಚಾಲಕರ ಬಗ್ಗೆ ಒಳ್ಳೆಯದಕ್ಕಿಂತ ಕೆಟ್ಟ ಅಭಿಪ್ರಾಯಗಳೇ ತುಂಬಿಕೊಂಡಿವೆ. ಅದಕ್ಕೆ ತಕ್ಕಂತೆ ಕೆಲವರು ಗ್ರಾಹಕರೊಂದಿಗೆ ದುರ್ವರ್ತನೆ ಮಾಡುತ್ತಾರೆ ಕೂಡ. ಆದರೆ, ಇದು ನಿವಾರಣೆಯಾಗಿ ಆಟೋದವರ ಬಗ್ಗೆಯೂ ಒಳ್ಳೆಯ ಅಭಿಪ್ರಾಯ ಬರಬೇಕು ಎಂದರು.
ಮಧುಸೂಧನ ಅವರಿಗೆ ಒನ್ಇಂಡಿಯಾದ ಹೃತ್ಪೂರ್ವಕ ಅಭಿನಂದನೆಗಳು. ನೀವೂ ಕೂಡ 8105412054 ಸಂಖ್ಯೆಗೆ ಕರೆಮಾಡಿ ಅವರನ್ನು ಅಭಿನಂದಿಸಬಹುದು. ಇದಕ್ಕೆ ಪ್ರತಿಯಾಗಿ ಸೂಕ್ತ ಬಹುಮಾನ ನೀಡುವುದಾಗಿ ಟ್ರಾಫಿಕ್ ಪೊಲೀಸರು ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದರು.