ಕಡ್ಡಾಯ ವರ್ಗಾವಣೆಗೆ ತಡೆ: ಶಿಕ್ಷಣ ಸಚಿವರ ಮನೆ ಮುಂದೆ ಶಿಕ್ಷಕರ ಪ್ರತಿಭಟನೆ
ಬೆಂಗಳೂರು, ಸೆಪ್ಟೆಂಬರ್ 3: ಕಡ್ಡಾಯ ವರ್ಗಾವಣೆ ಪ್ರಕ್ರಿಯೆಯನ್ನು ತಡೆ ಹಿಡಿದಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮನೆಮುಂದೆ ಶಿಕ್ಷಕರು ಪ್ರತಿಭಟನೆ ಆರಂಭಿಸಿದ್ದಾರೆ.
ಬಸವೇಶ್ವರದಲ್ಲಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.
ರಾಜ್ಯದ ಹಲವು ಜಿಲ್ಲೆಗಳಿಂದ ನೂರಾರು ಸಂಖ್ಯೆಯಲ್ಲಿ ಶಿಕ್ಷಕರು ಬಂದಿದ್ದಾರೆ. ಸಚಿವ ಸುರೇಶ್ ಕುಮಾರ್ ಶಿಕ್ಷಕರ ಅಹವಾಲನ್ನು ಸ್ವೀಕರಿಸಿದ್ದಾರೆ.
ಸೋಮವಾರವಷ್ಟೇ ಶಿಕ್ಷಕರ ವರ್ಗಾವಣೆ ಕುರಿತು ಮಾತನಾಡಿದ್ದ ಸುರೇಶ್ ಕುಮಾರ್ ಅವರು, ಸಾಕಷ್ಟು ಮಂದಿ ಶಿಕ್ಷಕರು ನನ್ನ ಬಳಿ ಬಂದು ಮಾತನಾಡಿದ್ದಾರೆ.ಈಗಾಗಲೇ ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ, ಮಂಗಳವಾರ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದರು.
ಸರ್ಕಾರಿ ಶಾಲಾ ಶಿಕ್ಷಕರಿಗೆ ಸಿಹಿ ಸುದ್ದಿ ನೀಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್
ಹಿಂದಿನ ಸರ್ಕಾರದ ಇಂಗ್ಲಿಷ್ ಮಾಧ್ಯಮ ಶಾಲೆ ವಿಚಾರಕ್ಕೆ ಸಂಬಂಧಿಸಿದಂತೆ ಸದ್ಯ ನಮ್ಮ ಮುಂದೆ ಶಿಕ್ಷಕರ ಕಡ್ಡಾಯ ವರ್ಗಾವಣೆ ವಿಚಾರ ಇದೆ. ಅದನ್ನು ಬಗೆಹರಿಸಿ ನಂತರ, ಪಬ್ಲಿಕ್ ಸ್ಕೂಲ್, ಇಂಗ್ಲಿಷ್ ಮಾಧ್ಯಮ ಕಲಿಕೆ ವಿಚಾರಗಳತ್ತ ಗಮನಕೊಡುತ್ತೇವೆ ಎಂದು ಹೇಳಿದ್ದರು.
ಹಲವು ಬಾರಿ ಸ್ಥಗಿತಗೊಂಡಿದ್ದ ಶಿಕ್ಷಕರ ವರ್ಗಾವಣೆ ಮತ್ತೆ ಆರಂಭಗೊಂಡಿತ್ತು. ಕೌನ್ಸಿಲಿಂಗ್ ಮೂಲಕವೂ ಮುಕ್ತಾಯ ಹಂತಕ್ಕೆ ಬಂದು ನಿಂತಿತ್ತು. ಇದೀಗ ಮತ್ತೆ ತಾತ್ಕಾಲಿಕವಾಗಿ ಸ್ಥಗಿತ ಮಾಡಿರುವುದಾಗಿ ಇಲಾಖೆ ಸಚಿವರು ತಿಳಿಸಿದ್ದಾರೆ.
ಹಲವು ಶಿಕ್ಷಕರು ವರ್ಗಾವಣೆಯನ್ನು ಮಾಡದಂತೆ ಮನವಿ ಮಾಡಿದ್ದಾರೆ. ಹೀಗಾಗಿ ಶಿಕ್ಷಕರ ವರ್ಗಾವಣೆಗೆ ತಾತ್ಕಾಲಿಕವಾಗಿ ತಡೆ ನೀಡಲಾಗಿದೆ ಎಂದು ಹೇಳಿದರು.