ಬೆಳಿಗ್ಗೆ ಕನ್ನಡ ಹೋರಾಟಗಾರ, ರಾತ್ರಿ ಒಡವೆ ಚೋರ
ಬೆಂಗಳೂರು, ನವೆಂಬರ್ 20 : ಬೆಳಿಗ್ಗೆ ನೀಟಾಗಿ ಬಿಳಿ ಶರ್ಟ್ ಧರಿಸಿ, ಮೇಲೊಂದು ಕನ್ನಡ ಧ್ವಜದ ಬಣ್ಣವುಳ್ಳ ಶಾಲು ಧರಿಸಿ ಕನ್ನಡಪರ ಹೋರಾಟಗಾರನಂತೆ ಫೋಸುಕೊಡುತ್ತಿದ್ದ ಆಸಾಮಿ ರಾತ್ರಿ ಆಗುತ್ತಿದ್ದಂತೆ ತನ್ನ ನಿಜ ಬಣ್ಣಕ್ಕೆ ತಿರುಗಿಕೊಳ್ಳುತ್ತಿದ್ದ.
ಹಲಸೂರಿನ ಜೋಗುಪಾಳ್ಯ ವಾರ್ಡ್ ಕರವೇ ಅದ್ಯಕ್ಷ ವರುಣ್ ಅಲಿಯಾಸ್ ಚಿನ್ನಿ ಎಂಬುವವನು ಬೆಳಗ್ಗೆಲ್ಲಾ ಕನ್ನಡ ಹೋರಾಟಗಾರನೆಂದು ಓಡಾಡುತ್ತಾ ರಾತ್ರಿ ಆಗುತ್ತಲೆ ಕಳ್ಳತನ, ರಾಬರಿಗಿಳಿಯುತ್ತಿದ್ದ.
ರಾತ್ರಿ ಸಮಯ ಕೆಲಸ ಮುಗಿಸಿ ಮನೆಗೆ ಹೋಗುವವರನ್ನು ಅಡ್ಡಗಟ್ಟಿ ಹೆದರಿಸಿ ಹಣ ಮತ್ತು ಚಿನ್ನಾಭರಣ ದೋಚುತ್ತಿದ್ದ, ಈತನ ಮೇಲೆ ಹಲಸೂರು ಠಾಣೆ ಸೇರಿದಂತೆ ನಗರದ ಹಲವು ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು.
ಕನ್ನಡ ಪರ ಸಂಘಟನೆಯ ಕಡೆಯವರು ಎಂದು ಹೇಳಿ ನಾಲ್ಕು ಮಂದಿ ಸಹಚರರೊಂದಿಗೆ ದರೋಡೆ ನಡೆಸುತ್ತಿದ್ದ ಈತ ಇತ್ತೀಚೆಗೆ ಹಲಸೂರು ಮೇಟ್ರೋ ಸ್ಟೇಷನ್ ಬಳಿ ಟೈಸನ್ ಎಂಬುವವರ ಬಳಿ ವಾಚ್, ಮೊಬೈಲ್, ಹಣ ಕಸಿದಿದ್ದ ನಂತರ ಚಾಕು ತೋರಿಸಿ ಎಟಿಎಂನಿಂದ 4 ಸಾವಿರ ಹಣ ಡ್ರಾ ಮಾಡಿಸಿದ್ದ. ಸುಲಿಗೆಗೊಳಗಾದ ಟೈಸನ್ ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇದೀಗ ಹಲಸೂರು ಠಾಣೆ ಪೊಲೀಸರು ವರುಣ್ ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.