ರವಿ ಬೆಳಗರೆ ಬಂಧನ ನಂತರದ ಹಂತಹಂತದ ಮಾಹಿತಿ
Recommended Video
ಬೆಂಗಳೂರು, ಡಿಸೆಂಬರ್ 08: ಹಾಯ್ ಬೆಂಗಳೂರು ಪತ್ರಿಕೆಯ ಪ್ರಧಾನ ಸಂಪಾದಕ ರವಿ ಬೆಳೆಗೆರೆಯನ್ನು ಸಿಸಿಬಿ ಪೊಲೀಸರು ಶುಕ್ರವಾರ ಮಧ್ಯಾಹ್ನ ಬೆಂಗಳೂರಿನ ಪದ್ಮನಾಭನಗರದ ಕಚೇರಿಯಲ್ಲಿ ಬಂಧಿಸಿದ್ದಾರೆ. ಸಿಸಿಬಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಈ ಬಗ್ಗೆ ಅಪ್ಡೇಟ್ಸ್ ಇಲ್ಲಿದೆ:
ಹಾಯ್ ಬೆಂಗಳೂರು ಕಚೇರಿಗೆ ಸಿಬಿಐ ತಂಡ ಭೇಟಿ ಏಕೆ?
* ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ರವಿ ಬೆಳಗೆರೆ ಅವರನ್ನು ಕರೆದೊಯ್ಯಲಾಗುತ್ತಿದೆ. ಪತ್ರಕರ್ತ ರವಿ ಬೆಳಗೆರೆ ಜತೆಗೆ ಮಗಳು ಚೇತನಾ ಬೆಳಗೆರೆ ಅವರಿದ್ದಾರೆ.
* ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚೆಕ್ ಅಪ್ ಮಾಡಿಸಿ ನಂತರ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುತ್ತದೆ.
* ರವಿ ಬೆಳಗೆರೆ ವಿರುದ್ಧ ಐಪಿಸಿ ಸೆಕ್ಷನ್ 307, 120(ಬಿ) ಅನ್ವಯ ಪ್ರಕರಣ ದಾಖಲು ಮಾಡಲಾಗಿದೆ ಎಂದು ಬೆಂಗಳೂರು ಕ್ರೈಂ ವಿಭಾಗದ ಸಿಸಿಬಿ ಮುಖ್ಯಸ್ಥ ಸುನಿಲ್ ಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
* ಸಿಸಿಬಿ ಪೊಲೀಸರು ವಿಡಿಯೋ ಚಿತ್ರೀಕರಣ ಮಾಡಿಕೊಳ್ಳುತ್ತಿದ್ದು, ಕೋರ್ಟ್ ಮುಂದೆ ದಾಖಲೆ ಸಲ್ಲಿಸುತ್ತಿದ್ದಾರೆ.
* ಶಾರ್ಪ್ ಶೂಟರ್ ಶಶಿಧರ ಬಳಿ ಇದ್ದ ರಿವಾಲ್ವರ್, ಡಬ್ಬಲ್ ಬ್ಯಾರಲ್ ಗನ್ ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಅಕ್ರಮ ಶಸ್ತ್ರಾಸ್ತ್ರ ಕಾಯ್ದೆ3, 25ರ ಸೆಕ್ಷನ್ ಅಡಿಯಲ್ಲಿ ಕೇಸು ದಾಖಲಿಸಲಾಗಿದೆ.
ಬೆಳಗೆರೆ ಸಂದರ್ಶನ: 'ಜನಶ್ರೀ' ಮೇಲೆ 5 ಕೋಟಿ ವಂಚನೆ ಕೇಸು ಹಾಕಿದ್ದೀನಿ
* ರವಿ ಬೆಳಗೆರೆ ಅವರ ಕಚೇರಿ, ಮನೆ, ಕಾರಿನ ತಪಾಸಣೆ ನಡೆಸಿರುವ ಸಿಸಿಬಿ ಪೊಲೀಸರು.
* ರವಿ ಬೆಳಗೆರೆ ಅವರು ಅನಾರೋಗ್ಯ ಪೀಡಿತರಾಗಿರುವುದರಿಂದ ಆಂಬ್ಯುಲೆನ್ಸ್ ಮೂಲಕ ಮ್ಯಾಜಿಸ್ಟ್ರೇಟ್ ಕೋರ್ಟಿಗೆ ಕರೆದೊಯ್ಯುತ್ತಿರುವ ಪೊಲೀಸರು.
ಪತ್ರಕರ್ತರೊಬ್ಬರನ್ನು ಕೊಲ್ಲಲು ಶಾರ್ಪ್ ಶೂಟರ್ಸ್ ಗೆ ಸುಪಾರಿ ಕೊಟ್ಟಿದ್ದ ಆರೋಪದ ಮೇಲೆ ರವಿಬೆಳಗೆರೆಯನ್ನು ಬಂಧಿಸಲಾಗಿದೆ. ಶಾರ್ಪ್ ಶೂಟರ್ ಶಶಿಧರ್ ಮುಂಡೇವಾಡಗಿ ಹಾಗೂ ಸಹಚರರು ವಿಚಾರಣೆ ವೇಳೆ ಈ ವಿಷಯ ಬಾಯ್ಬಿಟ್ಟಿದ್ದಾನೆ.
ಹಾಯ್ ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಅವರನ್ನು ಕೊಲ್ಲಲು ರವಿ ಬೆಳಗೆರೆ ಸುಪಾರಿ ಕೊಟ್ಟಿದ್ದರು ಎಂದು ಶಾರ್ಪ್ ಶೂಟರ್ಸ್ ಶಶಿಧರ್ ಹೇಳಿದ್ದ ಎಂದು ಟಿವಿ ಮಾಧ್ಯಮಗಳಲ್ಲಿ ವರದಿಯಾಗಿದೆ.
ಪತ್ರಕರ್ತರ ಮೇಲೆ ಇಂಥ ಕ್ರೌರ್ಯ ಏಕೆ: ರವಿ ಬೆಳಗೆರೆ
ಸುನೀಲ್ ಹೆಗ್ಗರವಳ್ಳಿ ಅವರು ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಸುಮಾರು 17 ವರ್ಷಗಳ ಕಾಲ ಕ್ರೈಂ ವರದಿಗಾರರಾಗಿ ಕೆಲಸ ಮಾಡಿದ್ದರು. ಮೂರು ವರ್ಷಗಳ ಹಿಂದೆ ಹಾಯ್ ಬೆಂಗಳೂರು ಪತ್ರಿಕೆ ತೊರೆದು ಬೇರೆ ಚಾನೆಲ್ ಆರಂಭಿಸುವ ಉತ್ಸಾಹದಲ್ಲಿದ್ದರು.
ಆದರೆ, ಇತ್ತೀಚೆಗೆ ಹಾಯ್ ಬೆಂಗಳೂರು ಪತ್ರಿಕೆ ನಡೆಸಿಕೊಂಡು ಹೋಗುವಂತೆ ರವಿ ಬೆಳಗೆರೆ ಅವರು ಆಹ್ವಾನ ನೀಡಿದ್ದರು. ಇದಕ್ಕೆ ಸುನೀಲ್ ಅವರು ಒಪ್ಪಿಗೆ ಸೂಚಿಸಿದ್ದರು.
ಸುಳಿವು ಸಿಕ್ಕಿದ್ದು ಹೇಗೆ? : ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ವೇಳೆ ಬಂಧಿತನಾಗಿದ್ದ ತಾಹೀರ್ ಹುಸೇನ್ ಎಂಬಾತ ನೀಡಿದ್ದ ಮಾಹಿತಿ ಮೇರೆಗೆ ಮತ್ತೊಬ್ಬ ಶಾರ್ಪ್ ಶೂಟರ್ ಶಶಿ ಮುಂಡೇವಾಡಗಿಯನ್ನು ವಶಕ್ಕೆ ಪಡೆದು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದರು.
ವಿಚಾರಣೆ ವೇಳೆ ವಿಜಯಪುರ ಮೂಲದ ಶಶಿಧರ್, ರವಿ ಬೆಳಗೆರೆ ಅವರು 30 ಲಕ್ಷ ರು ಸುಪಾರಿ ನೀಡಿ, ಸುನಿಲ್ ಹೆಗ್ಗರವಳ್ಳಿಯನ್ನು ಕೊಲ್ಲಲು ಸೂಚಿಸಿದ್ದರು ಎಂದು ಹೇಳಿದ್ದ. ಈ ನಿಟ್ಟಿನಲ್ಲಿ ಹೆಚ್ಚಿನ ವಿಚಾರಣೆಗಾಗಿ ರವಿ ಬೆಳಗೆರೆಯನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. (updated)