ಹ್ಯಾಕರ್ ಶ್ರೀಕೃಷ್ಣ ಸಿಸಿಬಿ ಕಸ್ಟಡಿ ಡಿ. 1 ರ ವರೆಗೆ ವಿಸ್ತರಣೆ
ಬೆಂಗಳೂರು, ನವೆಂಬರ್ 26: ಡ್ರಗ್ ಜಾಲ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಹ್ಯಾಕರ್ ಶ್ರೀಕೃಷ್ಣ ಸಿಸಿಬಿ ಪೊಲೀಸರ ವಿಚಾರಣೆಯಲ್ಲಿ ಸ್ಫೋಟಕ ವಿಚಾರಗಳನ್ನು ಹೊರ ಹಾಕಿದ್ದಾನೆ. ಗ್ಯಾಂಬ್ಲಿಂಗ್ ಗೆ ಸಂಬಂಧಿಸಿದ 30 ಕ್ಕೂ ಹೆಚ್ಚು ವೆಬ್ ತಾಣಗಳನ್ನು ಹ್ಯಾಕ್ ಮಾಡಿ ಬಿಟ್ ಕಾಯಿನ್ ಮೂಲಕ ಹಣ ವಸೂಲಿ ಮಾಡಿದ್ದ. ಡಿಸೆಂಬರ್ 1 ರ ವರೆಗೂ ಪೊಲೀಸರ ಕಸ್ಟಡಿ ಅವಧಿ ವಿಸ್ತರಿಸಿ ಸಿಸಿಬಿ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ .
ಕೆ.ಜಿ.ನಗರ ಡ್ರಗ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಶ್ರೀಕೃಷ್ಣನ ಹ್ಯಾಕಿಂಗ್ ಅವತಾರ ನೋಡಿ ಸಿಸಿಬಿ ಪೊಲೀಸರೇ ದಂಗಾಗಿದ್ದಾರೆ. ಗ್ಯಾಂಬ್ಲಿಂಗ್ ಗೆ ಸಂಬಂಧಿಸಿದ ಮೂವತ್ತಕ್ಕೂ ಹೆಚ್ಚು ವೆಬ್ ತಾಣಗಳನ್ನು ಹ್ಯಾಕ್ ಮಾಡಿರುವುದು ಈತ ತಪ್ಪೊಪ್ಪಿಕೊಂಡಿದ್ದಾನೆ. ಹ್ಯಾಕ್ ಮಾಡಿದ ವೆಬ್ ತಾಣ ಮಾಲೀಕರಿಂದ ಬಿಟ್ ಕಾಯಿನ್ ರೂಪದಲ್ಲಿ ಹಣ ಪಡೆದು ಅದನ್ನು ಡ್ರಗ್ ಜಾಲಕ್ಕೆ ಬಳಸುತ್ತಿದ್ದ.
ಮತ್ತೆರಡು ಪ್ರಕರಣದಲ್ಲಿ ಹ್ಯಾಕರ್ ಶ್ರೀಕಿ ವಿಚಾರಣೆ
ಶ್ರೀಕೃಷ್ಣ ಹ್ಯಾಂಕಿಂಗ್ ಬಗ್ಗೆ ವಿವರ ನೀಡಿರುವ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಶ್ರೀಕೃಷ್ಣ ಹ್ಯಾಕಿಂಗ್ ಮಾಡಿರುವ ವೆಬ್ ತಾಣಗಳ ಬಗ್ಗೆ ತಾಂತ್ರಿಕ ಸಾಕ್ಷಾಧಾರಗಳನ್ನು ಸಂಗ್ರಹಿಸುತ್ತಿದ್ದೇವೆ. ಆರೋಪಿ ಸಾಕಷ್ಟು ಅಕ್ರಮಗಳನ್ನು ಎಸಗಿ 30 ಕ್ಕೂ ಹೆಚ್ಚು ವೆಬ್ ತಾಣ ಹ್ಯಾಕ್ ಮಾಡಿರುವುದನ್ನು ತಪ್ಪೊಪ್ಪಿಕೊಂಡಿದ್ದಾನೆ. ಗೇಮ್ ಮತ್ತು ಪೋಕರ್ ಸಂಬಂಧಿಸಿದ ವೆಬ್ ತಾಣಗಳನ್ನು ಹ್ಯಾಕ್ ಮಾಡಿದ್ದು, ಬಿಟ್ ಕಾಯಿನ್ ರೂಪದಲ್ಲಿ ಹಣ ಪಡೆದಿದ್ದಾನೆ. ಹ್ಯಾಕಿಂಗ್ ಪ್ರಕರಣಗಳ ಮಾಹಿತಿ ಪಡೆದು ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಆರೋಪಿ ಶ್ರೀಕೃಷ್ಣನನ್ನು ಡ್ರಗ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಇತರೆ ಆರೋಪಿಗಳಾದ ಸುನೀಶ್ ಹೆಗ್ಡೆ ಮತ್ತು ಪ್ರಸಿದ್ಧ್ ಶೆಟ್ಟಿ ದುರುಪಯೋಗ ಪಡಿಸಿಕೊಂಡಿದ್ದಾರೆ. ಡಿಸೆಂಬರ್ 1 ರ ವರೆಗೂ ಸಿಸಿಬಿ ಪೊಲೀಸರ ವಶದಲ್ಲಿದ್ದು ವಿಚಾರಣೆ ಎದುರಿಸಲಿದ್ದಾನೆ.
ಎರಡು ಪ್ರಕರಣದಲ್ಲಿ ವಶಕ್ಕೆ: ಶ್ರೀಕೃಷ್ಣ ಬಂಧನದಿಂದ ಎರಡು ಪ್ರತ್ಯೇಕ ಪ್ರಕರಣದಲ್ಲಿ ಆತ ಪೊಲೀಸರಿಗೆ ಬೇಕಾಗಿದ್ದು, ಎರಡೂ ಪ್ರಕರಣದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಲು ಮುಂದಾಗಿದ್ದಾರೆ. ಯು.ಬಿ. ಸಿಟಿಯಲ್ಲಿ ಉದ್ಯಮಿಯ ಪುತ್ರ ವಿದ್ವತ್ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಶ್ರೀಕೃಷ್ಣ ಮೂರನೇ ಆರೋಪಿ. ಘಟನೆ ಬಳಿಕ ಪೋನ್ ಬಳಸದೇ ತಲೆ ಮರೆಸಿಕೊಂಡು ತಿರುಗಾಡುತ್ತಿದ್ದ. ಡ್ರಗ್ ಜಾಲ ಪ್ರಕರಣದಲ್ಲಿ ಸಿಕ್ಕಿಬಿದ್ದ ಬಳಿಕವೇ ಈ ವಿಷಯ ಬಹಿರಂಗವಾಗಿತ್ತು. ಈ ಪ್ರಕರಣದಲ್ಲಿ ವಿಚಾರಣೆ ಎದುರಿಸಲಿದ್ದಾನೆ.
Recommended Video
ಇನ್ನು ಕರ್ನಾಟಕ ಇ ಟೆಂಡರ್ ಪೋಟ್ರಲ್ ಹ್ಯಾಕ್ ಮಾಡಿ ಹನ್ನೊಂದು ಕೋಟಿ ರೂಪಾಯಿ ಎಗರಿಸಿದ ಪ್ರಕರಣ ಸಂಬಂಧ ಸಿಐಡಿ ಸೈಬರ್ ಘಟಕದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವೆಬ್ ತಾಣ ಹ್ಯಾಕ್ ಮಾಡಿ ಇಎಂಡಿ ಮೊತ್ತವನ್ನು ಎನ್ಜಿಓ ಖಾತೆಗೆ ರವಾನಿಸಲಾಗಿತ್ತು. ಈ ಸಂಬಂಧ ಸೈಬರ್ ಠಾಣೆ ಪೊಲೀಸರು ಶ್ರೀಕೃಷ್ಣನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ಮುಂದಾಗಿದ್ದಾರೆ. ಸಿಸಿಬಿ ಪೊಲೀಸರ ವಿಚಾರಣೆ ವೇಳೆ ಮತ್ತಷ್ಟು ಮಾಹಿತಿ ಹೊರ ಬರಲಿದ್ದು, ಹ್ಯಾಕ್ ವಿವರಗಳನ್ನು ಸಂಬಂಧಪಟ್ಟ ರಾಜ್ಯ ಪೊಲೀಸರ ಜತೆ ಸಿಸಿಬಿ ಪೊಲೀಸರು ಹಂಚಿಕೊಳ್ಳಲಿದ್ದು, ಸರಣಿ ಪ್ರಕರಣಗಳಲ್ಲಿ ಶ್ರೀಕೃಷ್ಣ ಸಿಕ್ಕಿ ಹಾಕಿಕೊಳ್ಳುವ ಲಕ್ಷಣ ಗೋಚರಿಸುತ್ತಿದೆ.