ಮತ್ತೆರಡು ಪ್ರಕರಣದಲ್ಲಿ ಹ್ಯಾಕರ್ ಶ್ರೀಕಿ ವಿಚಾರಣೆ
ಬೆಂಗಳೂರು, ನವೆಂಬರ್ 21: ಡ್ರಗ್ ಜಾಲ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಹ್ಯಾಕರ್ ಶ್ರೀಕೃಷ್ಣ ವಿಶ್ವದ ಮೋಸ್ಟ್ ವಾಂಟೆಡ್ ಹ್ಯಾಕರ್ ! ಈತನನ್ನು ಇನ್ನೂ ಎರಡು ಪ್ರಕರಣದಲ್ಲಿ ವಿಚಾರಣೆ ನಡೆಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ಉದ್ಯಮಿ ಲೋಕನಾಥ್ ವಿದ್ವತ್ ಮೇಲೆ ಯು.ಬಿ. ಸಿಟಿಯಲ್ಲಿ ಹಲ್ಲೆ ನಡೆಸಿದ ಪ್ರಕರಣದಲ್ಲಿ ಶ್ರೀಕೃಷ್ಣ ಮೂರನೇ ಆರೋಪಿಯಾಗಿದ್ದು, ತನಿಖಾಧಿಕಾರಿಗಳು ಶ್ರೀಕೃಷ್ಣನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದಾರೆ. ಶಾಸಕ ಹ್ಯಾರೀಸ್ ಪುತ್ರ ನಲಪಾಡ್ ಮೊದಲ ಆರೋಪಿಯಾಗಿದ್ದು, ಶ್ರೀಕಿಯನ್ನು ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. ಇದಲ್ಲದೇ ಕರ್ನಾಟಕ ಇ ಪ್ರೊಕ್ಯೂರ್ಮೆಂಟ್ ವೆಬ್ ತಾಣ ಹ್ಯಾಕ್ ಮಾಡಿ ಅದರ ಖಾತೆಯಲ್ಲಿದ್ದ 11 ಕೋಟಿ ಕಣ್ಮರೆಯಾದ ಬಗ್ಗೆ ಸಿಐಡಿ ಸೈಬರ್ ಘಟಕದ ಪೊಲೀಸರು ಮಹಾರಾಷ್ಟ್ರ ಮೂಲದ ಎನ್ಜಿಓ ಸಂಸ್ಥಾಪಕರು ಸೇರಿ ಆರು ಮಂದಿಯನ್ನು ಬಂಧಿಸಿದ್ದು, ಇದೀಗ ಸಿಸಿಬಿ ಪೊಲೀಸರ ವಶದಲ್ಲಿರುವ ಶ್ರೀಕೃಷ್ಣನನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಗಲಿದೆ ಎಂದು ಸಿಐಡಿ ಪೊಲೀಸರು ತಿಳಿಸಿದ್ದಾರೆ.
2019 ಜುಲೈನಲ್ಲಿ ಟೆಂಡರ್ ಸಲ್ಲಿಸಿದ್ದ ಬಿಡ್ ದಾರರ ಇಎಂಡಿ ಮೊತ್ತ ಅನಧಿಕೃತ ಖಾತೆಗಳಿಗೆ ವರ್ಗಾವಣೆಯಾಗಿತ್ತು. ಅದರಲ್ಲಿ ಒಂದು ಕೋಟಿ ರೂಪಾಯಿ ಮಹಾರಾಷ್ಟ್ರದ ನಾಗಪುರ ಮೂಲದ ಎನ್ಜಿಓ ಖಾತೆಗೆ ಹೋಗಿದ್ದು, ಅದರ ಜಾಡು ಹಿಡಿದು ಸಿಐಡಿ ಪೊಲೀಶರು ಸ್ವಯಂ ಸೇವಾ ಸಂಸ್ಥೆಯ ದಂಪತಿ ಹಾಗೂ ಇತರೆ ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಹವಾಲ ದಂಧೆ ನಡೆಸುತ್ತಿದ್ದ ಕುರುಹುಗಳು ಪತ್ತೆಯಾಗಿವೆ. ಇದರಲ್ಲಿ ಶ್ರೀಕೃಷ್ಣ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ. ವೆಬ್ ತಾಣಗಳನ್ನು ಹ್ಯಾಕ್ ಮಾಡುತ್ತಿದ್ದ ಶ್ರೀಕೃಷ್ಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಟ್ ಕಾಯಿನ್ ರೂಪದಲ್ಲಿ ಹಣ ಪಡೆದು ಅದನ್ನು ಡ್ರಗ್ ಜಾಲದ ಮೇಲೆ ಹೂಡಿಕೆ ಮಾಡಿ ಹಣ ಸಂಪಾದಿಸುತ್ತಿದ್ದ ಎಂಬ ಮಾಹಿತಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಇನ್ನು ಸರ್ಕಾರಿ ಟೆಂಡರ್, ಗ್ಯೇಪ್ ವೆಬ್ ತಾಣಗಳನ್ನು ಹ್ಯಾಕ್ ಮಾಡಿದ ಬಳಿಕ ಬ್ಲಾಕ್ ಮೇಲ್ ಮಾಡಿ ಹಣ ಗಳಿಸುತ್ತಿದ್ದ. ಅದನ್ನು ಅನಧಿಕೃತ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಳ್ಳಲು ಪರದಾಡುತ್ತಿದ್ದ ಶ್ರೀಕಿ ಎನ್ಜಿಓ ಒಳಗೊಂಡಂತೆ ಅನಧಿಕೃತ ಬ್ಯಾಂಕ್ ಖಾತೆಗಳನ್ನು ಹುಡುಕುತ್ತಿದ್ದ. ಆ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಿ, ಇದಕ್ಕೆ ಪ್ರತಿಯಾಗಿ ಅವರಿಗೂ ಹಣ ನೀಡಿ ಉಳಿದಿದ್ದನ್ನು ಪಡೆಯುತ್ತಿದ್ದ ಎಂಬ ಸಂಗತಿ ಬಯಲಾಗಿದೆ.
ಅಗ್ರಗಣ್ಯ: ಶ್ರೀಕೃಷ್ಣ ಹೊರ ದೇಶದಲ್ಲಿ ಕಂಪ್ಯೂಟರ್ ನಲ್ಲಿ ಪದವಿ ಮುಗಿಸಿ ಬೆಂಗಳೂರಿಗೆ ಬಂದ ನಂತರ ಆತನಿಗೆ ಕೆಲಸ ಸಿಕ್ಕಿರಲಿಲ್ಲ. ಹ್ಯಾಕರ್ ಆಗಿ ಬದಲಾದ ಶ್ರೀಕಿ ಕೆಲವೇ ವರ್ಷದಲ್ಲಿ ವಿಶ್ವ ಮಟ್ಟದ ಹ್ಯಾಕರ್ ಆಗಿ ಗುರುತಿಸಿಕೊಂಡಿದ್ದ. ಭಾರತದ ಕೆಲವೇ ಹ್ಯಾಕರ್ ಗಳಿಗೆ ಅಂತಾರಾಷ್ಟ್ರೀಯ ಸಂಪರ್ಕವಿದ್ದು, ಶ್ರೀಕೃಷ್ಣ ಅಗ್ರಗಣ್ಯ ಹ್ಯಾಕರ್ ಗಳ ಜತೆ ಗುರುತಿಸಿಕೊಂಡಿದ್ದಾನೆ. ಸುನೀಶ್ ಹೆಗ್ಡೆ ಪರಿಚಯವಾದ ನಂತರ ಶ್ರೀಕೃಷ್ಣನ ಕಾರ್ಯಶೈಲಿಯೇ ಬದಲಾಗಿತ್ತು. ಸುನೀಶ್ ಹೆಗ್ಡೆ ತನಗೆ ಬೇಕಾದಂತೆ ಶ್ರೀಕೃಷ್ಣನನ್ನು ಬಳಸಿಕೊಂಡಿದ್ದಾನೆ. ರಾಜ್ಯದ ಪ್ರಭಾವಿ ರಾಜಕಾರಣಿ ಮಕ್ಕಳ ಜತೆ ಸುನೀಶ್ ಹೆಗ್ಡೆ ನಂಟು ಹೊಂದಿದ್ದು, ಅವರಿಂದ ವಿದೇಶಗಳಲ್ಲಿ ಹೂಡಿಕೆ ಮಾಡಿಸುತ್ತಿದ್ದ. ಶ್ರೀಕೃಷ್ಣನ ಮೂಲಕ ಅಕ್ರಮವಾಗಿ ಹಣ ವಿನಿಮಯ ಮಾಡಿಸುತ್ತಿದ್ದ ಸಂಗತಿ ಪೊಲೀಸರಿಗೆ ತಿಳಿಸಿದ್ದಾನೆ.
ಡಾಟಾ ಕಳ್ಳತನ ಮಾಡುವುದರಲ್ಲಿ ನಿಸ್ಸಿಮನಾಗಿರುವ ಕೃಷ್ಣನನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹುಡುಕಲಾಗುತ್ತಿದೆ. ರಷ್ಯಾದ ಹ್ಯಾಕರ್ ಗಳ ಜತೆ ಸಂಪರ್ಕದಲ್ಲಿದ್ದು, ಗೇಮಿಂಗ್ ಆಪ್ ಗಳ ಡಾಟಾ ಕದ್ದು ಅಂತರಾಷ್ಟ್ರೀಯ ಮಟ್ಟದಲ್ಲಿ ಮಾರಾಟ ಮಾಡುತ್ತಿದ್ದ. ಅಲ್ಲದೇ ವೆಬ್ ತಾಣಗಳನ್ನೂ ಹ್ಯಾಕ್ ಮಾಡಿ ಕೋಟಿ ಕೋಟಿ ಹಣ ವಸೂಲಿ ಮಾಡುತ್ತಿದ್ದ. ಕೆಲವು ಸಾಫ್ಟ್ ವೇರ್ ಕಂಪನಿಗಳ ಡಾಟಾಗೂ ಖನ್ನ ಹಾಕಿದ್ದಾನೆ. ಅಂತಾರಾಷ್ಟ್ರೀಯ ಮಟ್ಟದ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಅಕ್ರಮದಲ್ಲಿ ಈತ ಭಾಗೀದಾರನಾಗಿದ್ದು, ಆಸ್ಟ್ರೇಲಿಯಾ ಸೇರಿದಂತೆ ಹಲವಡೆ ನಡೆದಿರುವ ವಂಚನೆ ಪ್ರಕರಣಗಳಲ್ಲಿ ಈತ ಶಾಮೀಲಾಗಿರುವ ವಿಚಾರ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.
Recommended Video
ಸ್ವಂತ ಮೊಬೈಲ್ ಇಲ್ಲ !: ಐಶರಾಮಿ ಜೀವನ ನಡೆಸುತ್ತಿದ್ದ ಶ್ರೀಕೃಷ್ಣ ಸ್ವಂತ ಮೊಬೈಲ್ ಇಟ್ಟುಕೊಂಡಿರಲಿಲ್ಲ. ಈವರೆಗೂ ಮೊಬೈಲ್ ಬಳಸದೇ ಶ್ರೀಕೃಷ್ಣ, ಮೊಬೈಲ್ ಬಳಸುವರು ಹ್ಯಾಕರ್ ಆಗಲು ಸಾಧ್ಯವೇ ಇಲ್ಲ. ಹ್ಯಾಕರ್ ನ ಅರ್ಹತೆ ಮೊಬೈಲ್ ಇಲ್ಲದಿರುವುದು ಎಂಬುದನ್ನು ರಷ್ಯಾ ಹ್ಯಾಕರ್ ಗಳು ಕಲಿಸಿಕೊಟ್ಟಿದ್ದು, ಅದನ್ನು ಕೃಷ್ಣ ಪಾಲಿಸುತ್ತಿದ್ದ. ಅಗತ್ಯ ಬಿದ್ದಾಗ ಸ್ನೇಹಿತರ ಮೊಬೈಲ್ ಬಳಸಿ ಕರೆ ಮಾಡುತ್ತಿದ್ದ. ಡಾರ್ಕ್ ವೆಬ್ ತಾಣದ ಮೂಲಕ ಯಾವುದೇ ವಸ್ತು ಬೇಕಾದರೂ ಶ್ರೀಕಷ್ಣ ತರಿಸುವ ಸಾಮರ್ಥ್ಯ ಹೊಂದಿದ್ದು, ಸರ್ವರ್ ಹ್ಯಾಕಿಂಗ್ ಮಾಡುವುದರಲ್ಲಿಯೂ ಈತ ನಿಸ್ಸೀಮನಾಗಿದ್ದು, ಪೋಕರ್ ಗೇಮ್ ಸರ್ವರ್ ನ್ನು ಹ್ಯಾಕ್ ಮಾಡಿದ್ದ ಎಂಬ ಮಾಹಿತಿ ತನಿಖೆ ವೇಳೆ ಬಯಲಾಗಿದೆ.