ಲಮಾಣಿ ಪುತ್ರನ ಡ್ರಗ್ಸ್ ಕೇಸ್: ಹ್ಯಾಕರ್ ಕೃಷ್ಣ ಬಂಧನ
ಬೆಂಗಳೂರು, ನ18: ವೆಬ್ ತಾಣಗಳನ್ನು ಹ್ಯಾಕ್ ಮಾಡುತ್ತಿದ್ದ ಹಾಗೂ ಡಾರ್ಕ್ ವೆಬ್ ತಾಣಗಳ ಮೂಲಕ ಮಾದಕ ವಸ್ತುಗಳನ್ನು ತರಿಸುತ್ತಿದ್ದ ಹ್ಯಾಕರ್ ನನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಜಯನಗರ ನಿವಾಸಿ ಕೃಷ್ಣ ಅಲಿಯಾಸ್ ಶ್ರೀಕಿ (25) ಬಂಧಿತ ಆರೋಪಿ. ಕೆ.ಜಿ.ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಡ್ರಗ್ ಪ್ರಕರಣದಲ್ಲಿ ಆರೋಪಿಯಾಗಿದ್ದ ಹ್ಯಾಕರ್ ಕೃಷ್ಣನನ್ನು ಬಂಧಿಸಿದ್ದಾಗಿ ನಗರ ಪೊಲೀಸ್ ಆಯುಕ್ತ ಕಮಲಪಂತ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಭಾರತ ಸೇರಿದಂತೆ ಹಲವು ದೇಶಗಳ ವೆಬ್ ತಾಣಗಳನ್ನು ಹ್ಯಾಕ್ ಮಾಡಿದ್ದ. ಅಲ್ಲದೇ ಡಾರ್ಕ್ ವೆಬ್ ತಾಣದ ಮೂಲಕ ಅಗತ್ಯ ಮಾದಕ ವಸ್ತುಗಳನ್ನು ತರಿಸುತ್ತಿದ್ದ ಎಂಬ ಸಂಗತಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಬೆಂಗಳೂರಿನಲ್ಲಿ ಪಿಯುಸಿ ವರೆಗೂ ಓದಿದ್ದ ಕೃಷ್ಣ ನೆದರ್ ಲ್ಯಾಂಡ್ ನಲ್ಲಿ ಬಿಎಸ್ಸಿ ಕಂಪ್ಯೂಟರ್ ಪದವಿ ಪೂರ್ಣಗೊಳಿಸಿದ್ದ. ಮೊದಲ ಬಾರಿಗೆ ರನ್ ಸ್ಕೇಪ್ ಆನ್ ಗೇಮ್ ತಾಣವನ್ನು ಹ್ಯಾಕ್ ಮಾಡಿದ್ದ. ಇಂಡಿಯನ್ ಪೋಕರ್, ಬಿಟ್ ಕಾಯಿನ್ ವಹಿವಾಟು ನಡೆಸುವ ಹಲವು ವೆಬ್ ತಾಣಗಳನ್ನು ಹ್ಯಾಕ್ ಮಾಡಿದ್ದ. ಇತ್ತೀಚೆಗೆ ಕರ್ನಾಟಕದ ಇ ಪ್ರೊಕ್ರೂರ್ಮೆಂಟ್ ಟೆಂಡರ್ ವೆಭ್ ತಾಣವನ್ನು ಹ್ಯಾಕ್ ಮಾಡಿ ಟೆಂಡರ್ ದಾಖಲೆಗಳನ್ನು ಅದಲು ಬದಲು ಮಾಡಿದ್ದ. ಈ ಕುರಿತು ಸಿಐಡಿ ಸೈಬರ್ ಘಟಕದಲ್ಲಿ ದೂರು ದಾಖಲಾಗಿತ್ತು. ಹಲವಾರು ಸರ್ಕಾರಿ ವೆಬ್ ತಾಣಗಳನ್ನು ಹ್ಯಾಕ್ ಮಾಡಲು ಸಂಚು ರೂಪಿಸಿದ್ದ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.
ಕಾಂಗ್ರೆಸ್ ನಾಯಕ ರುದ್ರಪ್ಪ ಲಮಾಣಿ ಪುತ್ರ ಬಂಧನಕ್ಕೆ ಒಳಗಾಗಿರುವ ಡ್ರಗ್ ಜಾಲ ಪ್ರಕರಣದಲ್ಲಿ ಈತ ಬೇಕಾಗಿದ್ದ. ಈ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಸುನೀಶ್ ಹೆಗ್ಡೆ, ಪ್ರತೀಕ್ ಶೆಟ್ಟಿ ಇತರೆ ಆರೋಪಿಗಳ ಜತೆ ಈತ ಸಂಪರ್ಕದಲ್ಲಿದ್ದ. ಈತನನ್ನು ಇಂದು ನ್ಯಾಯಾಲಯದ ಮುಂದೆ ಹಾಜರು ಪಡಿಸಿ ಸಿಸಿಬಿ ಕಸ್ಟಡಿಗೆ ಪಡೆಯಲಾಗಿದೆ.
ನಲಪಾಡ್ ಪ್ರಕರಣದಲ್ಲಿ ಆರೋಪಿ: ಶಾಸಕ ಹ್ಯಾರೀಸ್ ಅವರ ಪುತ್ರ ನಲಪಾಡ್ ನಡೆಸಿದ್ದ ಹಲ್ಲೆ ಪ್ರಕರಣದಲ್ಲಿ ಕೂಡ ಕೃಷ್ಣ ಮೂರನೇ ಆರೋಪಿಯಾಗಿದ್ದ. ವಿದ್ವತ್ ಮೇಲೆ ಹ್ಯಾರಿಸ್ ಪುತ್ರ ನಲಪಾಡ್ ಮಾರಣಾಂತಿಕ ಹಲ್ಲೆ ಮಾಡಿದ್ದ. ಅದೇ ಗ್ಯಾಂಗ್ ನಲ್ಲಿ ಗುರುತಿಸಿಕೊಂಡಿದ್ದ ಕೃಷ್ಣ ಈ ಪ್ರಕರಣದಲ್ಲಿ ಮೂರನೇ ಆರೋಪಿಯಾಗಿದ್ದ. ಪೊಲೀಸರ ಕಣ್ಣು ತಪ್ಪಿಸಿ ತಲೆ ಮರೆಸಿಕೊಂಡು ತಿರುಗಾಡುತ್ತಿದ್ದ ಸಂಗತಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಸಿಸಿಬಿ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಮತ್ತಷ್ಟು ಸ್ಪೋಟಕ ಸಂಗತಿಗಳು ಹೊರ ಬೀಳಲಿವೆ.