ವಿಧಾನದ ಸೌಧದ ಲಿಫ್ಟ್ ಗಳಲ್ಲಿ 'ಹಚ್ಚೇವು ಕನ್ನಡದ ದೀಪ' ಕಂಪು
ಬೆಂಗಳೂರು, ಡಿಸೆಂಬರ್ 16 : ವಿಧಾನ ಸೌಧದ ಲಿಫ್ಟ್ ಗಳಲ್ಲಿ ಇನ್ನುಮುಂದೆ ಹಚ್ಚೇವು ಕನ್ನಡದ ದೀಪ ಭಾವಗೀತೆಯ ಇಂಪಾದ ಗಾಯನವನ್ನು ಕೇಳಬಹುದು.
'ಒನ್ ಇಂಡಿಯಾ'ದಲ್ಲಿ 'ಓಂ ಮಹಾಪ್ರಾಣ ದೀಪಂ' ಹಾಡಿನ ಕಥೆ ಬಿಚ್ಚಿಟ್ಟ ಹಂಸಲೇಖ
ಡಿ.ಎಸ್. ಕರ್ಕಿಯವರ ಹಚ್ಚೇವು ಕನ್ನಡದ ದೀಪ ಭಾವಗೀತೆಯ ಕಂಪು ಇದೀಗ ಆಡಳಿತ ಶಕ್ತಿ ಕೇಂದ್ರವಾದ ವಿಧಾನಸೌಧದ ಲಿಫ್ಟ್ ಗಳಲ್ಲೂ ಪಸರಿಸುತ್ತಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಒತ್ತಾಸೆ ಮೇರೆಗೆ ಸರ್ಕಾರ ಇದೀಗ ವಿಧಾನ ಸೌಧದ ಲಿಫ್ಟ್ ಗಳಲ್ಲೂ ಕನ್ನಡ ಅನುಷ್ಠಾನಕ್ಕೆ ಮುಂದಾಗಿದೆ.
ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರ ಸಂಗೀತ ನಿರ್ದೇಶನದಲ್ಲಿ ಪತ್ನಿ ಲತಾ ಹಂಸಲೇಖ ಹಾಡಿರುವ ಹಚ್ಚೇವು ಕನ್ನಡದ ದೀಪ ಭಾವಗೀತೆ ಲಿಫ್ಟ್ ನಲ್ಲಿ ಕೇಳಿಸುತ್ತಿದೆ. ಜನವರಿ ವೇಳೆಗೆ ಪಕ್ಕದ ವಿಕಾಸ ಸೌಧ, ಬಹುಮಹಡಿ ಕಟ್ಟಡ ಹಾಗೂ ವಿಶ್ವೇಶ್ವರಯ್ಯ ಗೋಪುರಗಳ ಕಟ್ಟಡದ ಲಿಫ್ಟ್ ಗಳಲ್ಲೂ ಇಂಪಾದ ಭಾವಗೀತೆಯನ್ನು ನೌಕರರು ಕೇಳಬಹುದು.
ರಾಜ್ಯದ ಆಡಳಿತ ಭಾಷೆ ಕನ್ನಡ ಎಲ್ಲ ಇಲಾಖೆಗಳಲ್ಲೂ ಕಟ್ಟುನಿಟ್ಟಾಗಿ ಅನುಷ್ಠಾನಗೊಳ್ಳಬೇಕಾದರೆ ವಿಧಾನಸೌಧವೂ ಕನ್ನಡಮಯಗೊಳ್ಳಬೇಕು. ವಿಧಾನಸೌಧ ಪ್ರವೇಶಿಸುವ ಲಿಫ್ಟ್ಗಳಿಂದಲೇ ಅದು ಆರಂಭವಾಗಬೇಕು. ನಮ್ಮ ಈ ಪ್ರಯತ್ನಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸರಕಾರ ಲಿಫ್ಟ್ಗಳಿಂದಲೇ ಕನ್ನಡ ಅನುಷ್ಠಾನಕ್ಕೆ ಒತ್ತು ನೀಡಿದೆ,'' ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ಧರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.