ಸಂಸದೆ 'ಗಟ್ಟಿಗಿತ್ತಿ' ಸುಮಲತಾ ಕ್ಷಮೆಯಾಚಿಸಿದ ಎಚ್ ವಿಶ್ವನಾಥ್
Recommended Video
ಬೆಂಗಳೂರು, ಜೂನ್ 04: ತೆನೆ ಹೊತ್ತ ಮಹಿಳೆಯ ನೆರಳಾಗಿದ್ದ 'ಹಾಡು ಹಕ್ಕಿ' ಎಚ್ ವಿಶ್ವನಾಥ್ ಈಗ ಜವಾಬ್ದಾರಿಯನ್ನು ಕಳೆದುಕೊಂಡಿದ್ದಾರೆ. ಜಾತ್ಯಾತೀತ ಜನತಾ ದಳ(ಜೆಡಿಎಸ್)ದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಪಕ್ಷದ ವರಿಷ್ಠ ಎಚ್ ಡಿ ದೇವೇಗೌಡರಿಗೆ ರಾಜೀನಾಮೆ ಪತ್ರ ಬರೆದಿರುವ ಎಚ್ ವಿಶ್ವನಾಥ್ ಅವರು, ಮಂಡ್ಯ, ತುಮಕೂರು ಲೋಕಸಭೆ ಚುನಾವಣೆಯ ಸಂದರ್ಭದ ಒಳ ಹೊರಗು, ಕುತಂತ್ರ, ಸಂಚುಗಳನ್ನು ತೆರೆದಿಟ್ಟಿದ್ದಾರೆ.
ಸಿದ್ದರಾಮಯ್ಯ ಕೈಗೊಂಬೆಯಾಗಬೇಕಾಯಿತು: ರಾಜೀನಾಮೆ ಪತ್ರದಲ್ಲಿ ವಿಶ್ವನಾಥ್ ಆಕ್ರೋಶ
ರಾಜ್ಯಾಧ್ಯಕ್ಷ ಹುದ್ದೆಯಿಂದ ಕೆಳಗಿಳಿದ ಬಳಿಕ ಮಂತ್ರಿ ಸ್ಥಾನ ಕೊಟ್ಟರೆ ನಿಭಾಯಿಸುವೆ, ಯಾರನ್ನು ಬೇಕಾದರೂ ಎದುರಿಸಬಲ್ಲೆ ಆದರೆ, ದೇವೇಗೌಡರನ್ನು ಎದುರಿಸಲಾರೆ, ಅವರ ಕಚೇರಿಗೆ ತೆರಳಿ, ದೇವೇಗೌಡರ ಟೇಬಲ್ ಮೇಲೆ ಪತ್ರ ಇಡುವೆ, ಪಕ್ಷ ಕೊಟ್ಟಿರುವ ಕಾರನ್ನು ಹಿಂತಿರುಗಿಸುವೆ, ಶಾಸಕನಾಗಿ ನನ್ನ ಕರ್ತವ್ಯ ನಿಭಾಯಿಸುವೆ ಎಂದಿದ್ದಾರೆ.
ಸುಮಲತಾರಲ್ಲಿ ಕ್ಷಮೆಯಾಚನೆ: ಪಕ್ಷದ ರಾಜ್ಯಾಧ್ಯಕ್ಷನಾಗಿ ಈ ಹಿಂದೆ ಕೂಡಾ ಕ್ಷಮೆಯಾಚಿಸಿದ್ದೇನೆ. ಸುಮಲತಾ ಅವರು ಮಂಡ್ಯದ ಸೊಸೆ, ನಮ್ಮ ಮನೆ ಮಗಳು, ಅವರ ಮನಸ್ಸಿಗೆ ನೋವಾಗುವಂತೆ ಯಾರೇ ಮಾತನಾಡಿದ್ದರೂ, ನಿಂದನೆ ಮಾಡಿದ್ದರು ಈ ಬಗ್ಗೆ ನಾನು ಕ್ಷಮೆಯಾಚಿಸುತ್ತೇನೆ ಎಂದು ವಿಶ್ವನಾಥ್ ಹೇಳಿದರು.
ಸುಮಲತಾ ಅವರು ಮಂಡ್ಯದ ಸೊಸೆ
ಆಡಳಿತ ಪಕ್ಷವನ್ನು ಎದುರು ಹಾಕಿಕೊಂಡು, ಸ್ವತಂತ್ರವಾಗಿ ಮಂಡ್ಯದಲ್ಲಿ ಸ್ಪರ್ಧೆಗಿಳಿದಿದ್ದ ಸುಮಲತಾ ಅವರನ್ನು ಒಮ್ಮೆ ಮುಖಾಮುಖಿಯಾಗಿ ಭೇಟಿ ಮಾಡಿದ್ದ ಎಚ್ ವಿಶ್ವನಾಥ್ ಅವರು ಸುಮಲತಾರನ್ನು ಗಟ್ಟಿಗಿತ್ತಿ ಎಂದು ಹೊಗಳಿದ್ದರು. ಮಂಡ್ಯ ಚುನಾವಣೆ ಸಂದರ್ಭದಲ್ಲಿ ಸಿಎಸ್ ಪುಟ್ಟರಾಜು, ಶಿವರಾಮೇಗೌಡ, ಎಚ್ ಡಿ ರೇವಣ್ಣ ಸೇರಿದಂತೆ ಹಲವಾರು ನಾಯಕರು ಸುಮಲತಾ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಇದೆಲ್ಲವನ್ನು ಕಷ್ಟಪಟ್ಟು ಸಹಿಸಿಕೊಂಡಿದ್ದ ವಿಶ್ವನಾಥ್, ರಾಯಚೂರಿನಲ್ಲಿ ಒಮ್ಮೆ ಕ್ಷಮೆಯಾಚಿಸಿದ್ದರು. ಇಂದು ರಾಜ್ಯಾಧ್ಯಕ್ಷ ಹುದ್ದೆಯಿಂದ ಕೆಳಗಿಳಿದಾಗಾ ಇದನ್ನು ಪ್ರಸ್ತಾಪಿಸಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಸೋಲಿಗೆ ಏನು ಕಾರಣ
ಮೈಸೂರು ಕ್ಷೇತ್ರದಿಂದ ದೇವೇಗೌಡರಿಗೆ ಟಿಕೆಟ್ ಕೇಳಲಾಗಿತ್ತು, ಆದರೆ, ತುಮಕೂರು ಖೆಡ್ಡಾದಲ್ಲಿ ದೇವೇಗೌಡರು ಬೀಳುವಂತೆ ಮಾಡಿದರು, ಇದಕ್ಕೆಲ್ಲ ಸಿದ್ದರಾಮಯ್ಯ ಕಾರಣ ಎಂದಿದ್ದಾರೆ. ಇನ್ನು ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲಿಗೆ ಮಾಜಿ ಶಾಸಕರು, ಕೈ ಕಾರ್ಯಕರ್ತರು ಕಾರಣ ಎಂದರು.
ಸಮನ್ವಯ ಸಮಿತಿಯಲ್ಲಿ ಸ್ಥಾನ ಸಿಗದ ನೋವು
ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ಈವರೆಗೂ ರೂಪಿಸಲು ಸಾಧ್ಯವಾಗಿಲ್ಲ. ಸಮನ್ವಯ ಸಮಿತಿಯಲ್ಲಿ ಜಾತ್ಯಾತೀತ ಜನತಾದಳದ ಅಧ್ಯಕ್ಷನಾದ ನನಗೆ ಅವಕಾಶವನ್ನೇ ನೀಡಲಿಲ್ಲ.ಸಮನ್ವಯ ಸಮಿತಿ ಸಿದ್ದರಾಮಯ್ಯನವರ ಕೈಗೊಂಬೆಯಂತೆ ಕಾರ್ಯನಿರ್ವಹಿಸಬೇಕಾದ ಪರಿಸ್ಥಿತಿ ಸೃಷ್ಠಿಯಾಯಿತೇ ಹೊರತು, ಸೌಹಾರ್ದಯುತ ವಾತಾವರಣದಲ್ಲಿ ನಿರಾತಂಕವಾಗಿ ಸರ್ಕಾರವನ್ನು ನಡೆಸಿಕೊಂಡು ಹೋಗುವ ಪ್ರಾಮಾಣಿಕ ಪ್ರಯತ್ನ ನಡೆಯಲೇ ಇಲ್ಲ ಎಂದಿದ್ದಾರೆ.
ಪ್ರಭುತ್ವ ಮತ್ತು ಪಕ್ಷ ಜೋಡೆತ್ತಿನಂತೆ ಇರಬೇಕು
ಸಿಎಂ ಕುಮಾರಸ್ವಾಮಿ ಅವರು ತಮ್ಮ ಅನಾರೋಗ್ಯದ ಮತ್ತು ಮಿತ್ರರ ಕಿರುಕುಳದ ನಡುವೆಯೂ ಎಲ್ಲರ ವಿಶ್ವಾಸದಿಂದ ಶಕ್ತಿ ಮೀರಿ ಸರ್ಕಾರವನ್ನು ನಡೆಸುತ್ತಿದ್ದಾರೆ. ಸಾಮಾನ್ಯವಾಗಿ ಸರ್ಕಾರ ಅಧಿಕಾರದಲ್ಲಿದ್ದಾಗ ಮಂತ್ರಿಗಳಾದವರು, ಶಾಸಕರು ಪಕ್ಷದ ಮಟ್ಟಿಗೆ ಅಷ್ಟೊಂದು ಆಸಕ್ತಿಯನ್ನು ಹೊಂದಿರುವುದಿಲ್ಲ. ಪ್ರಭುತ್ವ ಮತ್ತು ಪಕ್ಷ ಜೋಡೆತ್ತಿನಂತೆ ಇರಬೇಕು. ಆದರೆ ಇಲ್ಲಿ ಅದು ಸಾಧ್ಯವಾಗುತ್ತಿಲ್ಲ.