ಸಿದ್ದರಾಮಯ್ಯರನ್ನು ದುಶ್ಯಾಸನನಿಗೆ ಹೋಲಿಸಿದ ವಿಶ್ವನಾಥ್
ಬೆಂಗಳೂರು, ಜೂನ್ 23: ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಮಾಧ್ಯಮ ಸಂವಾದ ಉದ್ದೇಶಿಸಿ ಮಾತನಾಡಿದ ಮಾಜಿ ಸಂಸದ ಎಚ್.ವಿಶ್ವನಾಥ್ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ದುಷ್ಯಾಸನನಿಗೆ ಹೋಲಿಸಿದ್ದಾರೆ.
"ಗಣಿಧಣಿಗಳ ವಿರುದ್ಧ ಬಳ್ಳಾರಿಗೆ ಪಾದಯಾತ್ರೆ ಮಾಡಿ ತೊಡೆ ತಟ್ಟಿ ಸಿದ್ದರಾಮಯ್ಯ ಭೀಮಭಾಷಣ ಬಿಗಿದಿದ್ದರು. ಇದೇ ಸಿದ್ದರಾಮಯ್ಯನವರು ಇಂದು ದುಷ್ಯಾಸನರಾಗಿದ್ದಾರೆ," ಎಂದು ವಿಶ್ವನಾಥ್ ಕಿಡಿಕಾರಿದರು.
"ಅವತ್ತು ರೆಡ್ಡಿಗಳ ಕೋಟಿ ಕೋಟಿ ಹಣದಿಂದ ಖಜಾನೆ ತುಂಬಿಸುತ್ತೇನೆ ಎಂದಿದ್ದೀರಿ. ನೀವು ಕೊಟ್ಟು ಭರವಸೆ ಏನಾಯ್ತು?" ಎಂದು ಸಿದ್ದರಾಮಯ್ಯನವರಿಗೆ ಚಾಟಿ ಬೀಸಿದರು.
ಕಾಂಗ್ರೆಸ್ ಗೆ ಅಧಿಕೃತವಾಗಿ ರಾಜೀನಾಮೆ ನೀಡಿದ ಎಚ್ ವಿಶ್ವನಾಥ್
ನುಡಿದಂತೆ ನಡೆದಿದ್ದೇವೆ!!
"ನೀವು ಜನತೆಗೆ ಕೊಟ್ಟ ಮಾತು ತಪ್ಪಿದ್ದೀರಿ. ಆದರೂ ನೂರಾರು ಕೋಟಿ ಖರ್ಚು ಮಾಡಿ 'ನುಡಿದಂತೆ ನಡೆದಿದ್ದೇವೆ' ಎಂದು ಜಾಹೀರಾತು ಹಾಕುತ್ತಿದ್ದೀರಿ. ಇದು ಸರಿಯಾ?" ಎಂದು ಹರಿಹಾಯ್ದರು.
ಕೃಷ್ಣಾ ಬಗ್ಗೆ ಕಾಂಗ್ರೆಸ್ ಗೆ ಕೃತಜ್ಞತೆಯೂ ಇಲ್ಲ
ಇದೇ ವೇಳೆ ಸಿದ್ದರಾಮಯ್ಯನವರನ್ನು ಜೆಡಿಎಸ್ ನಿಂದ ಕರೆ ತಂದ ದಿನಗಳನ್ನು ನೆನಪಿಸಿಕೊಂಡ ವಿಶ್ವನಾಥ್, "ಸಿದ್ದರಾಮಯ್ಯ ಅವರ ಪರವಾಗಿ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಅಪಾರ ಆಸಕ್ತಿ ವಹಿಸಿದ್ದರು. ಜಾಫರ್ ಷರೀಫ್ ಕೂಡ ಮೊದಲಿಗೆ ಅಸಮ್ಮತಿ ತೋರಿದ್ದರೂ ಆನಂತರ ಮನವೊಲಿಕೆಯ ನಂತರ ಸಿದ್ದರಾಮಯ್ಯ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲು ಸಹಕರಿಸಿದರು. ಆದರೆ ಇವತ್ತು ಅವರೇ ಕಾಂಗ್ರೆಸ್ ನಲ್ಲಿ ಇಲ್ಲ. ಕೃಷ್ಣಾ ಅವರ ಬಗ್ಗೆ ಕನಿಷ್ಠ ಕೃತಜ್ಞತೆಯೂ ಕಾಂಗ್ರೆಸ್ ನವರಿಗೆ ಇಲ್ಲ," ಎಂದು ವಿಶ್ವನಾಥ್ ಅಭಿಪ್ರಾಯಪಟ್ಟರು.
ಕರ್ನಾಟಕದಲ್ಲಿ 'ಸಿದ್ದು ಕಾಂಗ್ರೆಸ್'
ಇದೇ ಸಂದರ್ಭದಲ್ಲಿ ಅವರು, "ಇವತ್ತು ಕಾಂಗ್ರೆಸ್ ಹೈಕಮಾಂಡ್ ವೀಕ್ ಆಗಿದೆ. ಇವತ್ತು ಕರ್ನಾಟಕದಲ್ಲಿ ಸಿದ್ದರಾಮಯ್ಯನವರ ಕಾಂಗ್ರೆಸ್ ಇದೆ," ಎಂದು ಆಕ್ರೋಶ ಹೊರ ಹಾಕಿದರು.
ಜೆಡಿಎಸ್-ಬಿಜೆಪಿಯೇ ಗತಿ
ನಿಮ್ಮ ಮುಂದಿನ ನಿರ್ಧಾರ ಏನು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ವಿಶ್ವನಾಥ್, "ಕರ್ನಾಟಕದಲ್ಲಿ ಇರುವುದು ಎರಡೇ ಪಕ್ಷ. ಒಂದು ಜೆಡಿಎಸ್ ಇನ್ನೊಂದು ಬಿಜೆಪಿ. ಕಾಂಗ್ರೆಸಿಗೆ ಮಾತ್ರ ನಾನೆಂದೂ ವಾಪಸ್ಸು ಬರುವುದಿಲ್ಲ," ಎಂದು ಹೇಳಿದರು. ಮುಂದಿನ ತೀರ್ಮಾನವನ್ನು ಸದ್ಯದಲ್ಲೇ ತಿಳಿಸಲಾಗುವುದು ಎಂದು ಅವರು ಪ್ರಕಟಿಸಿದರು.
ಭಾವನಾತ್ಮಕ ರಾಜೀನಾಮೆ
ಇಂದು ಬೆಳಿಗ್ಗೆ ಹೈಕಮಾಂಡ್ ಕಚೇರಿಗೆ ಹೋಗಿ ತಮ್ಮ ರಾಜೀನಾಮೆಯನ್ನು ವಿಶ್ವನಾಥ್ ಸಲ್ಲಿಸಿದರು. ನಂತರ ಮಾಧ್ಯಮ ಸಂವಾದದಲ್ಲಿ ತಮ್ಮ ಭಾವನಾತ್ಮಕ ರಾಜೀನಾಮೆ ಪತ್ರವನ್ನು ಓದಿದರು.