ಜಮೀರ್ ಅಹ್ಮದ್ ಜತೆ ಕೊಲಂಬೋಗೆ ಹೋಗಿದ್ದು ಏಕೆ? ಕುಮಾರಸ್ವಾಮಿ ಹೇಳಿದ ಸಂಗತಿ
ಬೆಂಗಳೂರು, ಸೆಪ್ಟೆಂಬರ್ 12: 'ನಾನು ಕೊಲಂಬೋಗೆ ಹೋಗಿದ್ದು ನಿಜ. ನಾನು ಮಾತ್ರವಲ್ಲ, ಜೆಡಿಎಸ್ನಲ್ಲಿದ್ದಾಗ ಎಚ್ ಡಿ ಕುಮಾರಸ್ವಾಮಿ ಕೂಡ ನನ್ನೊಂದಿಗೆ ಶ್ರೀಲಂಕಾಕ್ಕೆ ಹೋಗಿದ್ದರು' ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿಕೆ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಇದಕ್ಕೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ನಾವೇನೂ ಕದ್ದು ಮುಚ್ಚಿ ಕೊಲಂಬೋಗೆ ಹೋಗಿರಲಿಲ್ಲ. ಮಾಧ್ಯಮಗಳಿಗೆ ತಿಳಿಸಿಯೇ ಹೋಗಿದ್ದೆವು ಎಂದು ಹೇಳಿದ್ದಾರೆ. ಕದ್ದುಮುಚ್ಚಿ 'ಕೊಲಂಬೋ ಯಾತ್ರೆ' ಮಾಡಿರಲಿಲ್ಲ ಎನ್ನುವ ಮೂಲಕ ಜಮೀರ್ ಅಹ್ಮದ್ ಅವರಿಗೆ ವ್ಯಂಗ್ಯವಾಗಿ ತಿರುಗೇಟು ನೀಡಿದ್ದಾರೆ. ಜಮೀರ್ ಹೇಳಿಕೆಗೆ ಅವರು ಸರಣಿ ಟ್ವೀಟ್ಗಳ ಮೂಲಕ ಉತ್ತರ ನೀಡಿದ್ದಾರೆ.
'ಜಮೀರ್ ಅಹ್ಮದ್ ರಹಸ್ಯ ಬಯಲು ಮಾಡುವೆ': ಸಿಸಿಬಿ ಕಚೇರಿಯಲ್ಲಿ ಪ್ರಶಾಂತ್ ಸಂಬರಗಿ
'ಜೆಡಿಎಸ್ ಪಕ್ಷದ ಗೌಪ್ಯ ಕಾರ್ಯಸೂಚಿ ಹಾಗೂ ಮುಂದಿನ ರಾಜಕೀಯ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ಶಾಸಕರು ಹಾಗೂ ಪ್ರಮುಖ ನಾಯಕರೊಂದಿಗೆ ಶ್ರೀಲಂಕಾದ ಕೊಲಂಬೋಗೆ ಒಮ್ಮೆ ಪ್ರವಾಸ ಹೋಗಿದ್ದು ನಿಜ. ಆದರೆ, ಕದ್ದು ಮುಚ್ಚಿ 'ಕೊಲಂಬೋ ಯಾತ್ರೆ' ಮಾಡಿರಲಿಲ್ಲ' ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಮುಂದೆ ಓದಿ.
ಎತ್ತರ ಮಾಮರ ಎತ್ತಣ ಕೋಗಿಲೆ?
''ಒಂದಾನೊಂದು ಕಾಲದಲ್ಲಿ ನಮ್ಮ ಪಕ್ಷದಲ್ಲಿದ್ದ ರಾಜಕಾರಣಿಯೊಬ್ಬರು ಜೆಡಿಎಸ್ ಶಾಸಕರು ಮತ್ತು ನಾನು ಕೊಲಂಬೋ ಪ್ರವಾಸ ಕೈಗೊಂಡಿದ್ದಾಗಿ ನೀಡಿರುವ ಹೇಳಿಕೆ 'ಎತ್ತಣ ಮಾಮರ ಎತ್ತಣ ಕೋಗಿಲೆ' ಎಂಬಂತಿದೆ'' ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಗುಟ್ಟಾಗಿ ಹೋಗಿರಲಿಲ್ಲ
'2014 ರ ಜೂನ್ ತಿಂಗಳಲ್ಲಿ ಪಕ್ಷ ಸಂಘಟನೆ ಬಗ್ಗೆ ವಿಸ್ತೃತವಾಗಿ ಚರ್ಚಿಸಲು ಕೊಲಂಬೋಗೆ ಪ್ರವಾಸ ಹೋಗುವುದಾಗಿ ಬಹಿರಂಗವಾಗಿಯೇ ಮಾಧ್ಯಮಗಳಿಗೆ ಹೇಳಿ ಹೋಗಿದ್ದಲ್ಲದೇ, ಅಲ್ಲಿ ನಡೆದ ಶಾಸಕರ ಜೊತೆಗಿನ ಚರ್ಚೆಯ ದೃಶ್ಯಾವಳಿಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದೆವು. ಇದರಲ್ಲಿ ಯಾವುದೇ ಗುಟ್ಟು ಇರಲಿಲ್ಲ' ಎಂದು ತಿಳಿಸಿದ್ದಾರೆ.
ದುಬಾರಿಯಲ್ಲದ ಕಾರಣಕ್ಕೆ ಹೋಗಿದ್ದೆವು
'ನೆರೆಯ ರಾಜ್ಯ ಗೋವಾ ಇಲ್ಲವೇ ರಾಜ್ಯದ ರೆಸಾರ್ಟ್ನಲ್ಲಿ ಸಭೆ ನಡೆಸುವುದಕ್ಕಿಂತ ಯಾವುದೇ ಅಡಚಣೆ ಇಲ್ಲದೆ ಶಾಸಕರೊಂದಿಗೆ ಮುಕ್ತವಾಗಿ ಚರ್ಚಿಸಲು ಕೊಲಂಬೋ ಪ್ರವಾಸ ದುಬಾರಿಯಲ್ಲ ಎಂಬ ಕಾರಣಕ್ಕೆ ಇಂತಹ ಸಭೆ ನಡೆಸಿದ್ದು ನಿಜ. ವಿಮಾನ ಹತ್ತುವಾಗಲೂ ಮತ್ತು ವಾಪಸು ಬಂದಾಗ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದೇನೆ' ಎಂದಿದ್ದಾರೆ.
ಅವರೇ ನಮ್ಮೊಂದಿಗೆ ಬಂದಿದ್ದರು
'ಕೊಲಂಬೋ ಪ್ರಯಾಣ ಅದೇ ಮೊದಲು ಮತ್ತು ಕೊನೆ. ಇದರಲ್ಲಿ ಬಚ್ಚಿಡುವುದು ಏನೇನೂ ಇಲ್ಲ. ಅವರು ನಮ್ಮೊಂದಿಗೆ ಬಂದಿದ್ದರೆ ಹೊರತು ನಾವು ಅವರೊಂದಿಗೆ ಹೋಗಿರಲಿಲ್ಲ' ಎಂದಿರುವ ಕುಮಾರಸ್ವಾಮಿ, ಜಮೀರ್ ಅಹ್ಮದ್ ಜತೆ ನಾವು ಹೋಗಿದ್ದಲ್ಲ, ಅವರನ್ನು ಒಮ್ಮೆ ನಾವು ಕರೆದುಕೊಂಡು ಹೋಗಿದ್ದು ಎಂದು ತಿಳಿಸಿದ್ದಾರೆ.
ಆಚಾರವಿಲ್ಲದ ನಾಲಗೆ
'ಆಚಾರವಿಲ್ಲದ ನಾಲಿಗೆ
ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ
ವಿಚಾರವಿಲ್ಲದೆ ಪರರ ದೂಷಿಸುವುದಕ್ಕೆ ಚಾಚಿ ಕೊಂಡಿರುವಂತ ನಾಲಿಗೆ
ಸತತವು ನುಡಿ ಕಂಡ್ಯ ನಾಲಿಗೆ
ಚಾಡಿ ಹೇಳಲು ಬೇಡ ನಾಲಿಗೆ'
-ಎಂದು ಪುರಂದರ ದಾಸರ ಕೀರ್ತನೆಯ ಸಾಲುಗಳನ್ನು ಕುಮಾರಸ್ವಾಮಿ ಹಂಚಿಕೊಂಡಿದ್ದಾರೆ.
Recommended Video
ಸಾಬೀತಾದರೆ ಗಲ್ಲಿಗೆ ಹಾಕಲಿ
'ನಾನು ಕೊಲಂಬೋಗೆ ಹೋಗಿದ್ದು ನಿಜ, ಹೋಗೋದು ತಪ್ಪಾ? ಪ್ರತಿ ಒಂದೂವರೆ ವರ್ಷಕ್ಕೆ ಒಮ್ಮೆ ಕೊಲಂಬೋಗೆ ಹೋಗುತ್ತಿದ್ದೆ. ಜೆಡಿಎಸ್ನಲ್ಲಿದ್ದಾಗ ಕುಮಾರಸ್ವಾಮಿ ಸಹ ಹೋಗಿದ್ದರು. ಜೆಡಿಎಸ್ನ 28 ಶಾಸಕರು ಸಹ ಕೊಲಂಬೋದ ಕ್ಯಾಸಿನೋಗೆ ಹೋಗಿದ್ದರು. ನಾನು ಡ್ರಗ್ಸ್ ಜಾಲದಲ್ಲಿರುವುದು ಸಾಬೀತಾದರೆ ನನ್ನನ್ನು ಗಲ್ಲಿಗೆ ಹಾಕಲಿ. ನಾನೇ ನ್ಯಾಯಾಧೀಶರಿಗೆ ಹಾಗೆ ಲಿಖಿತವಾಗಿ ಬರೆದುಕೊಡುತ್ತೇನೆ' ಎಂದು ಜಮೀರ್ ಅಹ್ಮದ್ ಹೇಳಿಕೆ ನೀಡಿದ್ದರು.