ಮೈತ್ರಿ ಗಾಯಕ್ಕೆ ಮುಲಾಮು ಹಚ್ಚಲು ಗುಲಾಂ ನಬಿ ಆಜಾದ್ ರಾಜ್ಯಕ್ಕೆ
ಬೆಂಗಳೂರು, ಆಗಸ್ಟ್ 26: ರಾಜ್ಯದಲ್ಲಿ ಹದಿನಾಲ್ಕು ತಿಂಗಳು ನಡೆದ ಸಮ್ಮಿಶ್ರ ಸರ್ಕಾರ ಪತನಗೊಂಡ ಬಳಿಕ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಭಿನ್ನಾಭಿಪ್ರಾಯ ಭುಗಿಲೆದ್ದಿದೆ. ಮುಖ್ಯವಾಗಿ ಇದು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ , ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ನಡುವಿನ ನೇರ ಆರೋಪ ಪ್ರತ್ಯಾರೋಪವಾಗಿದ್ದರೂ ಇದು ಬೀರುವ ಪರಿಣಾಮ ವೈಯಕ್ತಿಕವಾಗಿಲ್ಲ.
ಸರ್ಕಾರ ಪತನಗೊಂಡ ಬಳಿಕ ಉಭಯ ಪಕ್ಷಗಳ ನಡುವೆ ಮಾಡಿಕೊಂಡಿದ್ದ ಮೈತ್ರಿ ಮುರಿದುಬೀಳುವ ಕ್ಷಣಗಳು ಕಂಡುಬರುತ್ತಿವೆ. ಲೋಕಸಭೆ ಚುನಾವಣೆಯ ಫಲಿತಾಂಶದ ಬೆನ್ನಲ್ಲೇ ಎರಡೂ ಪಕ್ಷಗಳ ನಾಯಕರಲ್ಲಿ ಅಸಮಾಧಾನದ ಹೊಗೆ ಜೋರಾಗತೊಡಗಿತ್ತು. ಕೆಲವು ಶಾಸಕರ ರಾಜೀನಾಮೆಯ ಬೆಳವಣಿಗೆಗಳಲ್ಲಿ ಅದು ಸ್ಪಷ್ಟವಾದರೂ, ಈ ಪಕ್ಷಗಳ ನಾಯಕರಲ್ಲಿ ಬೂದಿ ಮುಚ್ಚಿದ ಕೆಂಡದಂತಿದ್ದ ದ್ವೇಷ, ಸಿಟ್ಟು ಹೊರಬರತೊಡಗಿವೆ.
ಸಿದ್ದರಾಮಯ್ಯ ವಿರುದ್ಧ ಕದನದ ಬಳಿಕ ಮತ್ತೆ ಮೈತ್ರಿಯ ಮಾತಾಡಿದ ದೇವೇಗೌಡ
Recommended Video
ವಿಧಾನಸಭೆ ಚುನಾವಣೆ ಬಳಿಕ ಸರ್ಕಾರ ರಚಿಸಲು ಮಾಡಿಕೊಂಡಿದ್ದ ಮೈತ್ರಿ, ಲೋಕಸಭೆ ಚುನಾವಣೆಯಲ್ಲಿಯೂ ಮುಂದುವರಿದಿತ್ತು. ಆದರೆ, ಆ ಮೈತ್ರಿಯೇ ಪಕ್ಷದ ಹೀನಾಯ ಸೋಲಿಗೆ ಕಾರಣ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದರು.
ಆಜಾದ್ ಮೇಲೆ ಹೊರೆ
ಈಗ ಮೈತ್ರಿ ಪಕ್ಷಗಳ ನಾಯಕರ ಕಿತ್ತಾಟ ಬಹಿರಂಗವಾಗಿ ನಡೆಯುತ್ತಿದೆ. ನೆಪಮಾತ್ರಕ್ಕೆ ಇರುವ ಮೈತ್ರಿ ಒಡೆಯುವ ಸೂಚನೆ ಸಿಕ್ಕಿದೆ. ಎರಡೂ ಪಕ್ಷಗಳು ಜತೆಯಾಗಿ ಸರ್ಕಾರ ರಚಿಸುವಲ್ಲಿ ಹೈಕಮಾಂಡ್ನ ಪರವಾಗಿ ಕೆಲಸ ಮಾಡಿದ್ದ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರ ಮೇಲೆಯೇ ಈ ಬಿರುಕನ್ನು ಸರಿಪಡಿಸುವ ಹೊರೆ ಬಿದ್ದಿದೆ. ಅತಂತ್ರ ಫಲಿತಾಂಶ ಎದುರಾದಾಗ ಸ್ವತಃ ಕಾಂಗ್ರೆಸ್ ಹೈಕಮಾಂಡ್ ಜೆಡಿಎಸ್ಗೆ ಬೆಂಬಲ ನೀಡಿ ಸರ್ಕಾರ ರಚಿಸಲು ಆಸಕ್ತಿ ತೋರಿಸಿತ್ತು. ಅದರ ನೇತೃತ್ವವನ್ನು ಆಜಾದ್ ಅವರೇ ನಿರ್ವಹಿಸಿದ್ದರು.
ಉಪ ಚುನಾವಣೆಯ ಮೇಲೆ ಕಣ್ಣು
ಗುಲಾಂ ನಬಿ ಆಜಾದ್ ಅವರು ಸೋಮವಾರ ಸಂಜೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ಅವರು ಕಾಂಗ್ರೆಸ್ ಮುಖಂಡರ ಜತೆ ಮಾತುಕತೆ ನಡೆಸುವುದಲ್ಲದೆ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರೊಂದಿಗೆ ಕೂಡ ಚರ್ಚಿಸುವ ಸಾಧ್ಯತೆ ಇದೆ. ಮೈತ್ರಿಯನ್ನು ಉಳಿಸಿಕೊಳ್ಳುವ ಸಂಬಂಧ ಅವರು ದೇವೇಗೌಡರ ಮನವೊಲಿಸುವ ಪ್ರಯತ್ನ ನಡೆಸಲಿದ್ದಾರೆ ಎನ್ನಲಾಗಿದೆ. ಉಪ ಚುನಾವಣೆಯಲ್ಲಿ ಬಿಜೆಪಿಯನ್ನು ಸಮರ್ಥವಾಗಿ ಎದುರಿಸಿದರೆ ಮತ್ತೆ ಸರ್ಕಾರ ಪತನಗೊಳಿಸಬಹುದು. ಬಹುತೇಕ ಅತೃಪ್ತ ಶಾಸಕರು ಹೊರ ಹೋಗಿರುವುದರಿಂದ ಹೊಸದಾಗಿ ಸರ್ಕಾರ ರಚಿಸಲು ಅವಕಾಶ ಸಿಗಲಿದೆ ಎಂಬ ಭರವಸೆಯೊಂದಿಗೆ ಅವರು ಮಾತುಕತೆ ನಡೆಸುವ ನಿರೀಕ್ಷೆಯಿದೆ.
ನನ್ನ ಮೊದಲ ಶತ್ರು ಸಿದ್ದರಾಮಯ್ಯ: ಎಚ್. ಡಿ. ಕುಮಾರಸ್ವಾಮಿ
ಸಿದ್ದರಾಮಯ್ಯ-ಆಜಾದ್ ಭೇಟಿ ಇಲ್ಲ
ಗುಲಾಂ ನಬಿ ಆಜಾದ್ ಅವರು ಬೆಂಗಳೂರಿಗೆ ಆಗಮಿಸುತ್ತಿರುವ ಸಂದರ್ಭದಲ್ಲಿಯೇ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಮೂರು ದಿನಗಳ ಉತ್ತರ ಕರ್ನಾಟಕ ನೆರೆಪೀಡಿತ ಪ್ರದೇಶಗಳ ಪ್ರವಾಸ ಆರಂಭಿಸಿದ್ದಾರೆ. ಮುಧೋಳ, ಜಮಖಂಡಿ, ರಾಮದುರ್ಗ, ಗೋಕಾಕ್, ಅಥಣಿ, ಕಾಗವಾಡ, ನಿಪ್ಪಾಣಿ, ಕಿತ್ತೂರು ಮತ್ತು ಚಿಕ್ಕೋಡಿಗಳಿಗೆ ಸಿದ್ದರಾಮಯ್ಯ ಭೇಟಿ ನೀಡುತ್ತಿದ್ದಾರೆ. ಮೈತ್ರಿಗೆ ತೇಪೆ ಹಚ್ಚಲು ಗುಲಾಂ ನಬಿ ಆಜಾದ್ ಮುಂದಾದ ಸಂದರ್ಭದಲ್ಲಿಯೇ, ಮೈತ್ರಿಯ ಅಂತ್ಯದ ಪರಿಸ್ಥಿತಿಗೆ ನಾಂದಿ ಹಾಡಿರುವ ಸಿದ್ದರಾಮಯ್ಯ ಪ್ರವಾಸ ಕೈಗೊಂಡಿದ್ದಾರೆ.
ಹೈಕಮಾಂಡ್ಗೆ ಬಿಟ್ಟಿದ್ದು...
ಮೈತ್ರಿ ನಡೆದಿರುವುದು ಹೈಕಮಾಂಡ್ ಮಟ್ಟದಲ್ಲಿ. ಹೀಗಾಗಿ ಅದರ ಅಳಿವು-ಉಳಿವಿನ ಬಗ್ಗೆ ಹೈಕಮಾಂಡ್ ನಿರ್ಧರಿಸಲಿದೆಯೇ ಹೊರತು ರಾಜ್ಯ ನಾಯಕರು ಅಲ್ಲ ಎಂದು ಕಾಂಗ್ರೆಸ್ ರಾಜ್ಯ ನಾಯಕರು ಹೇಳುತ್ತಿದ್ದಾರೆ. ಸಿದ್ದರಾಮಯ್ಯ ಅವರೂ ತಾವ ಮೈತ್ರಿ ಮುಂದುವರಿಕೆ ಅಥವಾ ಮುರಿಯುವ ಕುರಿತು ಹೇಳಿಕೆ ನೀಡಲು ಸಾಧ್ಯವಿಲ್ಲ. ಅದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದಿದ್ದಾರೆ. ಆದರೆ, ಮೈತ್ರಿಯಿಂದಲೇ ಪಕ್ಷಕ್ಕೆ ಲೋಕಸಭೆ ಚುನಾವಣೆಯಲ್ಲಿ ತೀವ್ರ ಹಿನ್ನಡೆಯುಂಟಾಗಿದೆ ಎಂದು ಈಗಾಗಲೇ ರಾಜ್ಯ ನಾಯಕರು ಹೈಕಮಾಂಡ್ಗೆ ವಿವರಿಸಿದ್ದಾರೆ. ಅಲ್ಲದೆ, ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಹೇಳಿಕೆಗಳು ಕಾಂಗ್ರೆಸ್ಗೆ ಮತ್ತಷ್ಟು ಕಸಿವಿಸಿ ಉಂಟುಮಾಡಿದೆ.
ಅಧಿಕಾರ ನಡೆಸಲು ಬಾರದವರು ಕುಮಾರಸ್ವಾಮಿ ಥರ ಮಾತನಾಡುತ್ತಾರೆ: ಸಿದ್ದರಾಮಯ್ಯ
ಮೈತ್ರಿಗೆ ಜೀವ ನೀಡಿದ ದೇವಗೌಡರ ಹೇಳಿಕೆ
ಸೋನಿಯಾ ಗಾಂಧಿ ಅವರು ಹೇಳಿದರೆ ಮುಂದಿನ ಚುನಾವಣೆಗಳಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಗೆ ಸಿದ್ಧ ಎಂದು ದೇವೇಗೌಡ ಶನಿವಾರ ಹೇಳಿದ್ದರು. ಸೋನಿಯಾಗಾಂಧಿ ಅವರು ಹೊಸ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಎಲ್ಲಾ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸಿಕೊಂಡು ಹೋಗೋಣ ಎಂದಿದ್ದಾರೆ. ಮುಂದೆ ಯಾವ ತೀರ್ಮಾನ ಮಾಡುತ್ತಾರೆ ಕಾದು ನೋಡೋಣ ಎಂದಿದ್ದರು. ದೇವೇಗೌಡರ ಈ ಹೇಳಿಕೆ ಸಿದ್ದರಾಮಯ್ಯ ಅವರೊಂದಿಗಿನ ಭಿನ್ನಾಭಿಪ್ರಾಯ ದೊಡ್ಡಮಟ್ಟದಲ್ಲಿ ವ್ಯಕ್ತವಾಗಿದ್ದರೂ, ಮೈತ್ರಿ ಮುಂದುವರಿಸಲು ಅಡ್ಡಿಯಿಲ್ಲ ಎಂಬ ಸೂಚನೆ ನೀಡಿದೆ.