ಬಳ್ಳಾರಿ ಶಾಸಕರ ಗುಂಪುಗಾರಿಕೆಗೆ ಡಿಕೆಶಿ-ಸಿದ್ದರಾಮಯ್ಯ ಕಾರಣ: ಜನಾರ್ದನ ರೆಡ್ಡಿ
ಬೆಂಗಳೂರು, ಜನವರಿ 23: ಬಳ್ಳಾರಿ ಜಿಲ್ಲೆಯ ಶಾಸಕರುಗಳಲ್ಲಿ ಎರಡು ಬಣ ಆಗಿದ್ದು, ಗುಂಪುಗಾರಿಕೆ ಶುರುವಾಗಿದೆ, ಇದಕ್ಕೆ ಮುಖ್ಯ ಕಾರಣ ಡಿಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಎಂದು ಗಾಲಿ ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ.
ಕಂಪ್ಲಿ ಶಾಸಕ ಗಣೇಶ್ ಅವರಿಂದ ಪೆಟ್ಟು ತಿಂದು ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಸಕ ಆನಂದ್ ಸಿಂಗ್ ಅವರನ್ನು ನೋಡಲು ಹೋಗಿದ್ದ ಜನಾರ್ದನ ರೆಡ್ಡಿ ಅವರು ಘಟನೆ ಕುರಿತು ಮಾಧ್ಯಮಗಳೊಟ್ಟಿಗೆ ಮಾತನಾಡಿದರು.
ಶಾಸಕರು ಹೊಡೆದಾಡಿ ರಂಪಾಟ ಮಾಡಿಕೊಳ್ಳಲು ಕಾರಣಗಳೇನು?
ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಮಧ್ಯೆ ಶೀತಲ ಸಮರ ನಡೆಯುತ್ತಿದೆ. ಗಣೇಶ್ ಮತ್ತು ಭೀಮಾನಾಯ್ಕ ಸಿದ್ದರಾಮಯ್ಯ ಅವರ ಗುಂಪು ಬಳ್ಳಾರಿಯ ಉಳಿದ ಕಾಂಗ್ರೆಸ್ ಶಾಸಕರು ಡಿಕೆ.ಶಿವಕುಮಾರ್ ಗುಂಪು. ಜಿಲ್ಲೆಯಲ್ಲಿ ಗುಂಪು ರಾಜಕೀಯ ಪ್ರಾರಂಭವಾಗಿದೆ ಎಂದು ಅವರು ಹೇಳಿದರು.
ಆನಂದ್ ಸಿಂಗ್ ಪ್ರಕರಣದ ಬಗ್ಗೆ ಡಿ.ಕೆ.ಶಿವಕುಮಾರ್ ಸುಳ್ಳು ಹೇಳಿದ್ದಾರೆ. ಸಂಜೆ ಡಿಸ್ಚಾರ್ಜ್ ಆಗ್ತಾರೆ ಅಂತ ಒಬ್ಬರು ಹೇಳಿದರೆ, ಜಮೀರ್ ಅವರು ಬಿರಿಯಾನಿ ತರಿಸಿ ಕೊಡ್ತೀನಿ ಅಂತಾರೆ, ಆನಂದ್ ಸಿಂಗ್ ವಿಷಯದಲ್ಲಿ ಅವರು ಸರಿಯಾಗಿ ನಡೆದುಕೊಳ್ಳುತ್ತಿಲ್ಲ ಎಂದು ಅವರು ಹೇಳಿದರು.
ನನ್ನ ಆತ್ಮೀಯ ಗೆಳೆಯನನ್ನು (ಆನಂದ್ ಸಿಂಗ್) ಇಂದು ಆಸ್ಪತ್ರೆಯ ಬೆಡ್ ಮೇಲೆ ನೋಡಿದೆ, ಅವರ ಕಣ್ಣಿಗೆ ತೀವ್ರ ಪೆಟ್ಟಾಗಿದೆ, ಅವರು ನೆಡದಾಡಲು ಇನ್ನೂ ಕೆಲವು ದಿನ ಬೇಕಾಗಬಹುದು, ಗಣೇಶ್ ಒಬ್ಬ ಶಾಸಕನಾಗಿ ಈ ರೀತಿ ಮಾಡಿದ್ದು ಮಹಾ ತಪ್ಪು ಎಂದು ಅವರು ಹೇಳಿದರು.
ಏಟು ತಿಂದು ಮಲಗಿರುವ ಶಾಸಕ ಆನಂದ್ ಸಿಂಗ್ ನೀಡಿದ್ದಾರೆ ಶಾಕಿಂಗ್ ಹೇಳಿಕೆ
ಶಾಸಕನೊಬ್ಬ ನಾಪತ್ತೆ ಆಗಿದ್ದಾರೆ ಎನ್ನುವುದು ನಾಚಿಕೆಗೇಡು, ಸರ್ಕಾರ ಉಳಿಸಿಕೊಳ್ಳುವ ಸಲುವಾಗಿ ಶಾಸಕ ಗಣೇಶ್ನನ್ನು ಬಂಧಿಸಲು ಹಿಂದೇಟು ಹಾಕಲಾಗುತ್ತದೆ. ಕೂಡಲೇ ಪೊಲೀಸರು ಶಾಸಕ ಗಣೇಶ್ ಅವರನ್ನು ಬಂಧಿಸಬೇಕು ಎಂದರು. ಆಪರೇಷನ್ ಕಮಲದ ಬಗೆಗಿನ ಪ್ರಶ್ನೆಗೆ ಉತ್ತರಿಸಲು ಒಪ್ಪದ ರೆಡ್ಡಿ, ಅದೆಲ್ಲಾ ಒತ್ತಟ್ಟಿಗಿರಲಿ, ಈ ಶಾಸಕರ ಗಲಾಟೆಯಿಂದ ರಾಜ್ಯದ ಘನತೆ ಕಡಿಮೆ ಆಗಿದೆ ಎಂದು ಹೇಳಿದರು.