ಕ್ಯಾಪ್ಟನ್ ವರುಣ್ ಸಿಂಗ್ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ
ಬೆಂಗಳೂರು, ಡಿಸೆಂಬರ್ 09: ಸೇನಾ ಹೆಲಿಕಾಪ್ಟರ್ ಪತನದ ಬಳಿಕ ಪವಾಡಸದೃಶದಂತೆ ಬದುಕುಳಿದ ಕ್ಯಾಪ್ಟನ್ ವರುಣ್ ಸಿಂಗ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆತರಲಾಗುತ್ತಿದೆ.
ತಮಿಳುನಾಡಿನ ಹೆಲಿಕಾಪ್ಟರ್ ದುರಂತದಲ್ಲಿ ಬದುಕುಳಿದ ಏಕೈಕ ಯೋಧ, ಐಎಎಫ್ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ರನ್ನು ತಮಿಳುನಾಡಿನ ವೆಲ್ಲಿಂಗ್ಟನ್ ಮಿಲಿಟರಿ ಆಸ್ಪತ್ರೆಯಿಂದ ಬೆಂಗಳೂರಿಗೆ ಸ್ಥಳಾಂತರ ಮಾಡಲಾಗುತ್ತಿದೆ ಎಂದು ಅವರ ತಂದೆ ಮಾಹಿತಿ ನೀಡಿದ್ದಾರೆ.
ವಿಡಿಯೋ: ಬಿಪಿನ್ ರಾವತ್ ಇದ್ದ ಸೇನಾ ಹೆಲಿಕಾಪ್ಟರ್ ಅಪಘಾತದ ಕೊನೆಯ ಕ್ಷಣಗಳು ಸೆರೆ
ವರುಣ್ ಸಿಂಗ್ರನ್ನು ಬೆಂಗಳೂರಿಗೆ ಶಿಫ್ಟ್ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದಿದ್ದಾರೆ. ಹೇಗಿದ್ದಾರೆ ನಿಮ್ಮ ಮಗ ಎಂದು ಕೇಳಿದ ಪ್ರಶ್ನೆಗೆ, ಆ ಬಗ್ಗೆ ಈಗಲೇ ಏನೂ ಹೇಳಲಾರೆ. ಯಾವುದೂ ಖಚಿತವಿಲ್ಲ ಎಂದಿದ್ದಾರೆ.
ಘಟನೆ ನಡೆದಾಗ ವರುಣ್ ಸಿಂಗ್ ತಂದೆ ಕೆ.ಪಿ.ಸಿಂಗ್ ಮತ್ತು ಅವರ ಪತ್ನಿ ಇಬ್ಬರೂ ಮುಂಬೈನಲ್ಲಿ, ತಮ್ಮ ಕಿರಿಯ ಮಗ ತನುಜ್ ಮನೆಯಲ್ಲಿ ಇದ್ದರು. ತನುಜ್ ಕೂಡ ಭಾರತೀಯ ನೌಕಾಪಡೆಯಲ್ಲಿ ಲೆಫ್ಟಿನೆಂಟ್ ಕಮಾಂಡರ್ ಆಗಿದ್ದಾರೆ.
ನಾನು ಫೋನ್ ಮಾಡಿ ಕೆ.ಪಿ.ಸಿಂಗ್ ಬಳಿ ಮಾತನಾಡಿದ್ದೇನೆ ಎಂದಿದ್ದಾರೆ. ಹಾಗೇ, ಕೆ.ಪಿ.ಸಿಂಗ್ ಅವರಿಗೆ ತಮ್ಮ ಪುತ್ರ ವರುಣ್ ಸಿಂಗ್ ಬಗ್ಗೆ ಹೆಮ್ಮೆಯಿದೆ. ಆತ ಫೈಟರ್ ಮತ್ತು ಈ ಜೀವನ್ಮರಣದ ಹೋರಾಟದಲ್ಲೂ ಗೆದ್ದು ಬರುತ್ತಾನೆ ಎಂಬ ನಂಬಿಕೆಯಿದೆ ಎಂದು ಅವರು ನನ್ನ ಬಳಿ ಹೇಳಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಕಳೆದ ವರ್ಷ ತೇಜಸ್ ಏರ್ಕ್ರಾಫ್ಟ್ ಟೆಸ್ಟ್ ಹಾರಾಟ ನಡೆಸುತ್ತಿದ್ದ ವೇಳೆ ಕೂಡ ವರುಣ್ ಸಿಂಗ್ ಜೀವಕ್ಕೆ ಅಪಾಯ ಎದುರಾಗಿತ್ತು. ಅಂದು ಬದುಕಿ ಬಂದಿದ್ದ ಅವರ ಶೌರ್ಯಕ್ಕೆ ತಕ್ಕನಾಗಿ ಶೌರ್ಯಚಕ್ರ ಪ್ರಶಸ್ತಿ ಕೊಟ್ಟು ಪುರಸ್ಕರಿಸಲಾಗಿದೆ.
ತಮಿಳುನಾಡಿನ ಕೂನೂರ್ ಬಳಿ ನಡೆದ ದುರ್ಘಟನೆಯಲ್ಲಿ ಸಿಡಿಎಸ್ ಬಿಪಿನ್ ರಾವತ್, ಅವರ ಪತ್ನಿ ಮತ್ತು 11 ಸೇನಾಧಿಕಾರಿಗಳು ಮರಣ ಹೊಂದಿದ್ದಾರೆ. ಅದರಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಈ ವರುಣ್ ಸಿಂಗ್. ಅವರು ಶೇ.45ರಷ್ಟು ಸುಟ್ಟಗಾಯಗಳಿಂದ ಬಳಲುತ್ತಿದ್ದಾರೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದೂ ಹೇಳಲಾಗಿದೆ.
ಪೈಲಟ್ ವರುಣ್ ಅವರು ಶೇ. 45ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದಾರೆ. ಚಿಕಿತ್ಸೆಗೆ ಸ್ಪಂದಿಸುತ್ತಿರುವ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನಲ್ಲಿರುವ ಏರ್ಫೋರ್ಸ್ ಕಮಾಂಡ್ ಆಸ್ಪತ್ರೆಗೆ ಶಿಫ್ಟ್ ಮಾಡುವ ಬಗ್ಗೆ ಚರ್ಚೆಗಳು ತೀವ್ರವಾಗಿ ನಡೆಯುತ್ತಿವೆ.
ತಮಿಳುನಾಡಿನ ಕೂನೂರಿನಲ್ಲಿ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಹೆಲಿಕಾಪ್ಟರ್ನಲ್ಲಿದ್ದ 14 ಜನರ ಪೈಕಿ CDS ಬಿಪಿನ್ ರಾವತ್ ಸೇರಿ 13 ಜನ ಮೃತಪಟ್ಟಿದ್ದರು.
ಮೃತರ ಹೆಸರುಗಳು:
1. ಸಿಡಿಎಸ್ ಬಿಪಿನ್ ರಾವತ್
2. ಸಿಡಿಎಸ್ ಬಿಪಿನ್ ರಾವತ್ ಪತ್ನಿ ಮಧುಲಿಕಾ ರಾವತ್
3. ಬ್ರಿಗೇಡಿಯರ್ ಎಲ್.ಎಸ್.ಲಿಡ್ಡರ್
4. ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್
5. ವಿಂಗ್ ಕಮಾಂಡರ್ ಪಿ.ಎಸ್.ಚೌಹಾಣ್
6. ಸ್ಕ್ವಾಡ್ರನ್ ಲೀಡರ್ ಕೆ.ಸಿಂಗ್
7. ಜೂನಿಯರ್ ವಾರಂಟ್ ಆಫೀಸರ್ ದಾಸ್
8. ಜೂನಿಯರ್ ವಾರಂಟ್ ಆಫೀಸರ್ ಪ್ರದೀಪ್ ಎ.
9. ಹವಾಲ್ದಾರ್ ಸತ್ಪಾಲ್ ರೈ,
10. ನಾಯಕ್ ಗುರುಸೇವಕ್ ಸಿಂಗ್
11. ನಾಯಕ್ ಜಿತೇಂದರ್ ಕುಮಾರ್
12. ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್ ಮತ್ತು
13. ಲ್ಯಾನ್ಸ್ ನಾಯಕ್ ಸಾಯಿತೇಜ