ರೇವ್ ಪಾರ್ಟಿ ರೆಸಾರ್ಟ್ 'ಹಸಿರು ವ್ಯಾಲಿ' ಅಕ್ರಮ ಕುರಿತು ಪೊಲೀಸರ ತನಿಖೆ
ಬೆಂಗಳೂರು, ಸೆ. 20: ಎರಡು ದಿನದ ಹಿಂದೆ ಮಾದಕ ನಶೆ ಮತ್ತು ಕುಣಿತದ ಕೇಂದ್ರವಾಗಿದ್ದ ಹಸಿರುವ್ಯಾಲಿ ರೆಸಾರ್ಟ್ ಜಾಗದಲ್ಲಿ ಪಾರ್ಟಿಯೇ ನಡೆದಿಲ್ಲ ಎಂಬಂತೆ ಸೆಗಣಿ ಮತ್ತು ನೀರು ಹಾಕಿ ಸ್ವಚ್ಛಗೊಳಿಸಲಾಗಿದೆ. ಪೊಲೀಸರಿಗೆ ಸಿಗದೇ ಪರಾರಿಯಾಗಿದ್ದ ಹಸಿರು ವ್ಯಾಲಿ ರೆಸಾರ್ಟ್ ಮಾಲೀಕರು ರೆಸಾರ್ಟ್ನ್ನು ಪೊಲೀಸರ ಕಣ್ಣು ತಪ್ಪಿಸಿ ಹೇಗೆ ಸ್ವಚ್ಛಗೊಳಿಸಿದರು ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ನಾಂದಿ ಹಾಡಿದೆ.
ಆನೇಕಲ್ ಸಮೀಪದ ತಮ್ಮನಾಯಕನಹಳ್ಳಿ ಬಳಿ ಇರುವ ಹಸಿರು ವ್ಯಾಲಿ ರೆಸಾರ್ಟ್ಗೆ ಬೆಂಗಳೂರು ಗ್ರಾಮಾಂತರ ವಿಭಾಗದ ಎಸ್ಪಿ ವಂಶಿಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಎಸ್ಪಿ ವಂಶಿ ಕೃಷ್ಣ, ಹಸಿರು ವ್ಯಾಲಿಯಲ್ಲಿ ರೇವ್ ಪಾರ್ಟಿ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದಿತ್ತು. ನಮ್ಮ ಪೊಲೀಸರು ರಾತ್ರಿ ವೇಳೆ ದಾಳಿ ಮಾಡಿದ್ದು, 30 ರಿಂದ 40 ಜನ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಈಗಾಗಲೇ 37 ಮಂದಿಯನ್ನು ಬಂಧಿಸಿದ್ದೇವೆ. ಹದಿನಾಲ್ಕು ಬೈಕ್ ಮತ್ತು ಏಳು ಕಾರು ವಶಪಡಿಸಿಕೊಂಡಿದ್ದೇವೆ.
ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ
ಪಾರ್ಟಿಯಲ್ಲಿ ಭಾಗಿಯಾದವರ ಮೂತ್ರ ಹಾಗೂ ರಕ್ತದ ಮಾದರಿ ಸಂಗ್ರಹಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ವರದಿ ಬಂದ ಬಳಿಕ ಮಾದಕ ವಸ್ತು ಸೇವನೆ ಬಗ್ಗೆ ಖಚಿತವಾಗಲಿದೆ. ಈಗಾಗಲೇ ವಶಕ್ಕೆ ಪಡೆದಿದ್ದ 37 ಮಂದಿಯನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದೇವೆ. ರೆಸಾರ್ಟ್ ಮಾಲೀಕರ ಮೇಲೂ ಕೇಸು ದಾಖಲಿಸಲಾಗಿದೆ. ಕೋವಿಡ್ ಇದ್ದರೂ ಪಾರ್ಟಿ ಆಯೋಜನೆ ಮಾಡಿರುವುದು ತಪ್ಪು. ಹಸಿರು ವ್ಯಾಲಿ ರೆಸಾರ್ಟ್ ಅಕ್ರಮ ಮತ್ತು ಸಕ್ರಮ ಕುರಿತು ಕಂದಾಯ ಇಲಾಖೆ ಅಧಿಕಾರಿಗಳ ಮಾಹಿತಿ ಕೇಳಿದ್ದೇವೆ ಎಂದರು.
ಗೂಗಲ್ ಮ್ಯಾಪ್ನಲ್ಲೇ ಕೈಚಳಕ
ಮಲೆನಾಡು ನೆನಪಿಸುವ ಮುತ್ಯಾಲಮಡು ಪ್ರವಾಸಿ ತಾಣ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ನಿರ್ವಹಣೆ ಮಾಡುತ್ತಿದೆ. ಮುತ್ಯಾಲಮಡುಗೆ ಗೂಗಲ್ ಮ್ಯಾಪ್ ಆಧಾರದ ಮೇಲೆ ಹೋಗುವ ಪ್ರವಾಸಿಗರನ್ನು ಸೆಳೆಯರು ಹೊಸ ತಂತ್ರ ಅನುಸರಿಸಿ ಹಸಿರು ವ್ಯಾಲಿ ರೆಸಾರ್ಟ್ ತೋರಿಸುವಂತೆ ಮಾಡಲಾಗಿದೆ. ಮುತ್ಯಾಲಮಡುಗೆ ಗೂಗಲ್ ಮ್ಯಾಪ್ ಬಳಕೆ ಮಾಡಿದರೆ, ಹಸಿರು ವ್ಯಾಲಿ ರೆಸಾರ್ಟ್ ತೋರಿಸುವ ರೀತಿ ಬದಲಾವಣೆ ಮಾಡಿರುವುದು ಬೆಳಕಿಗೆ ಬಂದಿದೆ.
ಮಾಧ್ಯಮ ದಾರಿ ತಪ್ಪಿಸಿ ಮಹಜರು
ಇನ್ನು ಸೋಮವಾರ ಸ್ಥಳ ಮಹಜರಿಗೆ ಆಗಮಿಸಿದ ಬೆಂಗಳೂರು ಗ್ರಾಮಾಂತರ ವಿಭಾಗದ ಎಸ್ಪಿ ವಂಶಿಕೃಷ್ಣ ಮಾಧ್ಯಮದವರನ್ನು ತಪ್ಪಿಸಿ ಹಸಿರು ವ್ಯಾಲಿ ರೆಸಾರ್ಟ್ಗೆ ತೆರಳಿ ಮಹಜರು ನಡೆಸಿದರು. ಪಾರ್ಟಿ ನಡೆದು ಎರಡು ದಿನಗಳ ಬಳಿಕ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರತಿಷ್ಠಿತ ಮನೆತನದ ಯುವಕ- ಯುವತಿಯರು ಪಾರ್ಟಿಯಲ್ಲಿ ಪಾಲ್ಗೊಂಡಿದ್ದು, ಅವರ ರಕ್ಷಣೆಗಾಗಿ ತನಿಖೆ ವಿಳಂಬ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಆದರೆ, ಇದನ್ನು ಹಿರಿಯ ಪೊಲೀಸ್ ಅಧಿಕಾರಿಗಳು ನಿರಾಕರಣೆ ಮಾಡಿದ್ದಾರೆ.
Recommended Video
ರೆಸಾರ್ಟ್ ಚಿತ್ರಣ ಬದಲು
ರೇವ್ ಪಾರ್ಟಿ ಆಯೋಜನೆ ಹಿನ್ನೆಲೆಯಲ್ಲಿ ಪೊಲೀಸರ ದಾಳಿಗೆ ಒಳಗಾಗಿದ್ದ ಹಸಿರು ವ್ಯಾಲಿ ರೆಸಾರ್ಟ್ ಚಿತ್ರಣ ಎರಡೇ ದಿನದಲ್ಲಿ ಬದಲಾಗಿ ಹೋಗಿದೆ. ಪಾರ್ಟಿ ನಡೆದ ಜಾಗಲದಲ್ಲಿ ಯಾವುದೇ ಮಾದಕ ವಸ್ತು ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಪಾರ್ಟಿ ನಡೆದ ಜಾಗ ಶುಚಿತ್ವದಿಂದ ಕೂಡಿದ್ದು, ನಾಪತ್ತೆಯಾಗಿದ್ದ ಮಾಲೀಕರು ಹೇಗೆ ರೆಸಾರ್ಟ್ ಕ್ಲೀನ್ ಮಾಡಿದರು ಎಂಬ ಪ್ರಶ್ನೆ ಉದ್ಭವಿಸಿದೆ. ಯುವಕ - ಯುವತಿಯರು ತಂಗಲು ಹಾಕಿದ್ದ ಟೆಂಟ್ಗಳು ಕೂಡ ಖಾಲಿಯಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ತಮ್ಮನಾಯಕನಹಳ್ಳಿ ಶ್ರೀನಿವಾಸ್ ಎಂಬುವರಿಗೆ ಸೇರಿರುವ ರೆಸಾರ್ಟ್ನಲ್ಲಿ ರಾತ್ರೋ ರಾತ್ರಿ ದನದ ಕೊಟ್ಟಿಗೆಗಳು ನಿರ್ಮಾಣವಾಗಿರುವುದು ಅಚ್ಚರಿ ಮೂಡಿಸಿದೆ.