ಎಲ್ಲೆಲ್ಲೂ ವಿಜೃಂಭಣೆಯ ವೈಕುಂಠ ಏಕಾದಶಿ
ಬೆಂಗಳೂರು, ಜ. 8: ಪ್ರಸಿದ್ಧ ಇಸ್ಕಾನ್ ದೇವಾಲಯ ಸೇರಿದಂತೆ ಉದ್ಯಾನ ನಗರಿಯಲ್ಲಿರುವ ಎಲ್ಲಾ ವಿಷ್ಣು ದೇವಾಲಯಗಳಲ್ಲಿ ವೈಕುಂಠ ಏಕಾದಶಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.
ಪ್ರಮುಖ ದೇಗುಲಗಳಾದ ಮಲ್ಲೇಶ್ವರಂ ತಿರುಪತಿ ತಿರುಮಲ ದೇವಾಲಯ, ಕೋಟೆ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಾಲಯ, ವಿಜಯ ನಗರ ಅತ್ತಿಗುಪ್ಪೆಯಲ್ಲಿನ ಲಕ್ಷ್ಮೀ ನರಸಿಂಹ ಸ್ವಾಮಿ, ಭಾಷ್ಯಂ ವೃತ್ತದ ಬಳಿಯಿರುವ ಶ್ರೀ ರಾಮ ಹಾಗೂ ಶ್ರೀರಂಗನಾಥ ದೇವಾಲಯ ಸೇರಿದಂತೆ ನಗರದ ಅನೇಕ ವಿಷ್ಣು ದೇವಾಲಯಗಳು ಹೂವಿನ ಅಲಂಕಾರ, ತಳಿರು ತೋರಣ ಹಾಗೂ ಇನ್ನಿತರ ಅಲಂಕಾರಗಳಿಂದ ವೈಭವವಾಗಿ ಕಾಣುತ್ತಿದ್ದವು. ಎಲ್ಲಾ ದೇವಾಲಯಗಳಲ್ಲಿ ಬೆಳಗಿನ ಜಾವ 4 ಗಂಟೆಯಿಂದಲೇ ಜನಜಂಗುಳಿಯು ದೇವರ ದರುಶನಕ್ಕಾಗಿ ಸಾಲುಗಟ್ಟಿ ನಿಂತಿತ್ತು.
ಭಕ್ತಾದಿಗಳಿಗೆ ಪೂಜೆ, ಪುನಸ್ಕಾರ, ಪ್ರಸಾದ ಹಂಚಿಕೆ ವಿಚಾರದಲ್ಲಿ ಯಾವುದೇ ಅನಾನುಕೂಲವಾಗದಂತೆ ದೇವಾಲಯಗಳ ಆಡಳಿತ ವರ್ಗದ ಸಿಬ್ಬಂದಿ ಅಚ್ಚುಕಟ್ಟಾಗಿ ಏರ್ಪಡಿಸಿದ್ದು ವಿಶೇಷವಾಗಿ ಎದ್ದು ಕಾಣುತ್ತಿತ್ತು.
ದೇವರ ದರುಶನ ಪಡೆದ ಭಕ್ತಾದಿಗಳು ವೈಕುಂಠ ದ್ವಾರದ ಮೂಲಕ ಹೊರಬಂದು ಪ್ರಸಾದ ಸ್ವೀಕರಿಸಿದರು. ಜನ ಸಂದಣಿ ಹೆಚ್ಚಿದ್ದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕೆಲವಾರು ದೇವಾಲಯಗಳಲ್ಲಿ ಪೊಲೀಸರೂ ಬೀಡುಬಿಟ್ಟಿದ್ದರು.
ದೇಗುಲಗಳಲ್ಲಿ ಹಲವಾರು ಭಕ್ತರು, ಸ್ವಪ್ರೇರಣೆಯಿಂದ ಸಮೂಹಗಾನ, ಭಜನೆ, ಪ್ರಸಾದ ವಿನಿಯೋಗಗಳಲ್ಲಿ ನಿರತರಾಗಿದ್ದು ಸಾಮಾನ್ಯವಾಗಿತ್ತು.
ವೈಕುಂಠ ಏಕಾದಶಿ ಮಹತ್ವ: ಹಿಂದೂ ಧರ್ಮದಲ್ಲಿ ವೈಕುಂಠ ಏಕಾದಶಿಗೆ ವಿಶೇಷ ಹಾಗೂ ಮಹತ್ವದ್ದಾಗಿದೆ. ಈ ದಿನ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂಬ ಪ್ರತೀತಿಯಿದ್ದು, ಇಂದು ಭಕ್ತರು ಉಪವಾಸವಿದ್ದು, ವೆಂಕಟೇಶ್ವರ, ಲಕ್ಷ್ಮೀ ನರಸಿಂಹ ಸೇರಿದಂತೆ ವಿಷ್ಣುವಿನ ಯಾವುದೇ ದೇವಾಲಯಕ್ಕೆ ಭೇಟಿ ನೀಡಿ ಉತ್ತರ ದ್ವಾರದ ಮೂಲಕ ಸಾಗಿ ದರುಶನ ಪಡೆದರೆ ಪೂರ್ವ ಜನ್ಮಗಳ ಪಾಪ ಕರ್ಮಗಳು ಕಳೆದು, ಸದ್ಗತಿಯು ಲಭಿಸುತ್ತದೆ ಎಂಬ ನಂಬಿಕೆಯಿದೆ.
ವಿಶಾಲವಾದ ಅರ್ಥ: ವೈಕುಂಠ ಏಕಾದಶಿ ಎಂಬುದು ಏಕಪದವಾಗಿ ಕಂಡರೂ ಅದು, ವೈಕುಂಠ ಹಾಗೂ ಏಕಾದಶಿ ಎಂಬ ಎರಡು ಪದಗಳ ಸಂಯುಕ್ತ ರೂಪವೇ ಆಗಿದೆ. ವೈಕುಂಠ ಎಂದರೆ ಭಗವಾನ್ ವಿಷ್ಣುವಿನ ಸಾನಿಧ್ಯ ಹಾಗೂ ಏಕಾದಶಿಯೆಂದರೆ, ಹನ್ನೊಂದನೆಯ ತಿಥಿ. ಇಂದು ಉಪವಾಸವಿದ್ದು ದೇವರ ದರ್ಶನ ಪಡೆಯುವುದು ಹಿಂದಿನಿಂದಲೂ ನಡೆದು ಬಂದ ಪದ್ಧತಿಯಾಗಿದೆ.
ಆದರೆ, ಇದಕ್ಕೂ ಒಂದು ನಿಯಮವಿದೆ. ಏಕಾದಶಿಯಂದು ಉಪವಾಸವಿದ್ದು, ಮರುದಿನ ದ್ವಾದಶಿಯಂದು ಆ ತಿಥಿಯ ಅವಧಿಯಲ್ಲಿಯೇ ನಿತ್ಯ ಕರ್ಮಗಳನ್ನು ಮುಗಿಸಿದ ನಂತರ ಭೋಜನ ಮಾಡಬೇಕಿದೆ.