ಇದು, ಗೌರಿ ಲಂಕೇಶ್ ಹತ್ಯೆಗೆ ಹಂತಕರು ಬಳಸಿದ 'ಕೋಡ್ ವರ್ಡ್'
ಬೆಂಗಳೂರು, ಜ 10: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿದಂತೆ, ವಿಶೇಷ ತನಿಖಾ ದಳದವರು (SIT) ಜಾರ್ಖಂಡ್ ನಲ್ಲಿ ಇನ್ನೋರ್ವನನ್ನು ಬಂಧಿಸಿದ್ದಾರೆ. ಈ ಬಗ್ಗೆ ತನಿಖಾ ದಳದವರು ಸ್ಪಷ್ಟನೆಯನ್ನು ನೀಡಿದ್ದಾರೆ.
ಈ ಪ್ರಕರಣದಲ್ಲಿ ಈತ ಹದಿನೆಂಟನೇ ಆರೋಪಿಯಾಗಿದ್ದು, ಈತನ ಹೆಸರು ರಿಷಿಕೇಶ್ ದೇವಾಡಿಕರ್ ಅಲಿಯಾಸ್ ಮುರಳಿ. 44ವರ್ಷದ ಈತ ಮಹಾರಾಷ್ಟ್ರ ಮೂಲದವನಾಗಿದ್ದಾನೆ. ಸುಮಾರು ಎರಡೂವರೆ ವರ್ಷಗಳಿಂದ ಪೊಲೀಸರು ಈತನ ಹುಡುಕಾಟದಲ್ಲಿದ್ದರು.
ಗೌರಿ ಲಂಕೇಶ್ ಹತ್ಯೆ; ಜಾರ್ಖಂಡ್ನಲ್ಲಿ 18ನೇ ಆರೋಪಿ ಬಂಧನ
ಬಲಪಂಥೀಯ ವಿಚಾರಧಾರೆಯವರನ್ನು ವಿರೋಧಿಸುವವರ ಹತ್ಯೆಗೆ ತಂಡವನ್ನು ಸಂಘಟಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ಈತನನ್ನು, ಜಾರ್ಖಂಡ್ ರಾಜ್ಯದ ಧನಾಬಾದ್ ಜಿಲ್ಲೆಯ ಕತ್ರಾಸ್ ಎನ್ನುವಲ್ಲಿ ಪೊಲೀಸರು ಬಂಧಿಸಿದ್ದಾರೆ.
ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿದ ಆರೋಪಿಗಳು ಕೋಡ್ ವರ್ಡ್ ಮೂಲಕವೇ ಸಂಭಾಷಣೆ ನಡೆಸುತ್ತಿದ್ದರು ಎನ್ನುವ ಮಾಹಿತಿಯು ವಿಚಾರಣೆ ವೇಳೆ ಲಭ್ಯವಾಗಿದೆ. ಬಂಧಿತ ಮುರಳಿ, ಗೌರಿ ಮತ್ತು ಎಂ.ಎಂ. ಕಲ್ಬುರ್ಗಿ ಅವರ ಹತ್ಯೆಯಲ್ಲಿಯೂ ಪ್ರಮುಖ ಆರೋಪಿಯಾಗಿದ್ದ.
ಗೌರಿ ಲಂಕೇಶ್ ಅವರ ಹೆಸರನ್ನು ಈ ಆರೋಪಿಗಳು 'ಅಮ್ಮ' ಎನ್ನುವ ಕೋಡ್ ವರ್ಡ್ ಮೂಲಕ ಬಳಸುತ್ತಿದ್ದರು. ದೂರವಾಣಿಯಲ್ಲಿ ಮಾತನಾಡಿಕೊಳ್ಳುತ್ತಿದ್ದ ಹಂತಕರು, ಗೌರಿ ಅವರ ಹತ್ಯೆಯಾಗುವವರೆಗೂ ಇದೇ ಪದವನ್ನು ಬಳಸಿಕೊಂಡಿದ್ದರು.
ಗೌರಿ ಹತ್ಯೆ ಪ್ರಕರಣ ಭೇದಿಸಲು ಸಹಕರಿಸಿದ ಸಿಬ್ಬಂದಿಗೆ ಬಹುಮಾನ ಘೋಷಣೆ
ಆಪರೇಷನ್ ಅಮ್ಮ ಎಂಬ ಹೆಸರಿನಲ್ಲಿ ನಡೆದ ಈ ಹತ್ಯೆಯ ಸಂಚಿನಲ್ಲಿ ಭಾಗಿಯಾಗಿದ್ದ ಎಲ್ಲರಿಗೂ ಈ ಕೋಡ್ ವರ್ಡ್ ಚೆನ್ನಾಗಿ ತಿಳಿದಿತ್ತು ಎನ್ನುವ ವಿಷಯವನ್ನು ಬಂಧಿತ ಮುರಳಿ, ವಿಚಾರಣೆಯ ವೇಳೆ ಬಾಯಿಬಿಟ್ಟಿದ್ದಾನೆ.