ಅರ್ಕಾವತಿ ಕರ್ಮಕಾಂಡ : ಕುಮಾರಸ್ವಾಮಿ ಪುಸ್ತಕದಲ್ಲೇನಿದೆ?
ಬೆಂಗಳೂರು, ಫೆ.7 : ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಅಧಿಕಾರವಹಿಸಿಕೊಂಡ ಮೇಲೆ ನ್ಯಾಯಾಲಯದ ಆದೇಶ, ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿ ಅರ್ಕಾವತಿ ಬಡಾವಣೆಯ 702 ಎಕರೆಯನ್ನು ಭೂ ಸ್ವಾಧೀನದಿಂದ ಕೈ ಬಿಟ್ಟಿದ್ದಾರೆ ಎಂದು ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ. ಈ ಕುರಿತು 'ಅರ್ಕಾವತಿ ಕರ್ಮಕಾಂಡ' ಪುಸ್ತಕವನ್ನು ಅವರು ಬಿಡುಗಡೆ ಮಾಡಿದ್ದಾರೆ.
ಶುಕ್ರವಾರ 'ಅರ್ಕಾವತಿ ಕರ್ಮಕಾಂಡ-ಸತ್ಯ ಮಿಥ್ಯಗಳ ಇಣುಕು ನೋಟ' ಎಂಬ 490 ಪುಟಗಳ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಜೆಡಿಎಸ್ ಶಾಸಕಾಂಗ ನಾಯಕ ಎಚ್.ಡಿ.ಕುಮಾರಸ್ವಾಮಿ, ಒಂದಿಚೂ ಡಿನೋಟಿಫೈ ಮಾಡಿಲ್ಲ ಎಂದು ಹೇಳುವ ಮುಖ್ಯಮಂತ್ರಿಗಳು ಸದನದ ಮುಂದೆ ಎಲ್ಲಾ ದಾಖಲೆಗಳನ್ನು ಮಂಡಿಸಲಿ ಎಂದು ಸವಾಲು ಹಾಕಿದ್ದಾರೆ.[ಅರ್ಕಾವತಿ ಹಗರಣ : ಎಚ್ಡಿಕೆಯಿಂದ ಪುಸ್ತಕ ಬಿಡುಗಡೆ]
ಪುಸ್ತಕದ ಪ್ರತಿಯನ್ನು ವಿಧಾನಸಭೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೂ ಕುಮಾರಸ್ವಾಮಿ ಸಲ್ಲಿಸಿದ್ದು, ಈ ಬಗ್ಗೆ ಸದನದಲ್ಲಿ ಚರ್ಚೆ ನಡೆಸಲು ಅನುಮತಿ ನೀಡಬೇಕು ಎಂದು ಮನವಿ ಸಲ್ಲಿಸಿದ್ದಾರೆ. ಅರ್ಕಾವತಿ ಹಗರಣದ ಬಗ್ಗೆ ತನಿಖೆ ನಡೆಸಲು ನ್ಯಾ. ಕೆಂಪಣ್ಣ ಆಯೋಗವನ್ನು ಕಾಟಾಚಾರಕ್ಕೆ ರಚಿಸಲಾಗಿದೆ ಎಂದು ದೂರಿದ್ದಾರೆ. ಅರ್ಕಾವತಿ ಹಗರಣ : ಎಚ್ಡಿಕೆ ಆರೋಪಗಳೇನು? [ಅರ್ಕಾವತಿ ಬಡಾವಣೆ ವಿವಾದ ಏಕೆ? ಏನು?]
ಸದನದಲ್ಲಿ ದಾಖಲೆಗಳೊಂದಿಗೆ ಚರ್ಚೆ ಮಾಡೋಣ
'ಅರ್ಕಾವತಿ ಕರ್ಮಕಾಂಡ' ಪುಸ್ತಕವನ್ನು ಬಿಡುಗಡೆ ಮಾಡಿರುವ ಕುಮಾರಸ್ವಾಮಿ, ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಅಧಿಕಾರವಹಿಸಿಕೊಂಡ ಮೇಲೆ ನ್ಯಾಯಾಲಯದ ಆದೇಶ, ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿ ಅರ್ಕಾವತಿ ಬಡಾವಣೆಯ 702 ಎಕರೆಯನ್ನು ಭೂ ಸ್ವಾಧೀನದಿಂದ ಕೈ ಬಿಟ್ಟಿದ್ದಾರೆ. ಈ ಬಗ್ಗೆ ಸದನದಲ್ಲಿ ದಾಖಲೆಗಳೊಂದಿಗೆ ಚರ್ಚೆ ಮಾಡೋಣ ಬನ್ನಿ ಎಂದು ಸವಾಲು ಹಾಕಿದ್ದಾರೆ.
ಮೂರು ಎಕರೆ ಡಿನೋಟಿಕೇಶನ್ ಮಾಡಿದ್ದೇನೆ
ಕುಮಾರಸ್ವಾಮಿ ಸಿಎಂ ಆಗಿದ್ದಾಗ 78 ಎಕರೆ ಡಿನೋಟಿಫಿಕೇಷನ್ ಮಾಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ಅದರಲ್ಲಿ 60 ಎಕರೆ 2000 ಸಾಲಿನಲ್ಲಿ ಎಸ್.ಎಂ.ಕೃಷ್ಣ ಸರ್ಕಾರದ ಅವಧಿಯಲ್ಲೇ ಉನ್ನತ ಮಟ್ಟದ ಸಮಿತಿ ಟೆಕ್ಪಾರ್ಕ್ ನಿರ್ಮಾಣಕ್ಕೆ ಕೆಐಎಡಿಬಿಯಿಂದ ಮಂಜೂರು ಮಾಡಲು ತೀರ್ಮಾನ ಕೈಗೊಂಡಿತ್ತು. ಧರ್ಮಸಿಂಗ್ ಸಿಎಂ ಆಗಿದ್ದಾಗ 15.15 ಎಕರೆ ಡಿನೋಟಿಫಿಕೇಷನ್ ಮಾಡಲಾಗಿದೆ. ನಾನು 3 ಎಕರೆ ಡಿನೋಟಿಫಿಕೇಷನ್ ಮಾಡಿದ್ದೇನೆ, ಆ ಬಗ್ಗೆ ಹಿಂದೆಯೇ ಒಪ್ಪಿಕೊಂಡಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.
'ರೀಡೂ' ಹೆಸರಿನಲ್ಲಿ ಭೂಮಿ ಡಿನೋಟಿಫಿಕೇಶನ್
ಸಿಎಂ ಸಿದ್ದರಾಮಯ್ಯ ಅವರಿಗೆ ಕಾನೂನುಬದ್ಧವಾಗಿ ನಿಯಮ 48/1ರ ಅಡಿಯಲ್ಲಿ ಡಿನೋಟಿಫೈ ಮಾಡಲು ಅಧಿಕಾರವಿದೆ. ಅದನ್ನು ಬಿಟ್ಟು ಬಿಡಿಎ ಕಾಯ್ದೆಯಲ್ಲಿ ಅವಕಾಶವೇ ಇಲ್ಲದ 'ರೀಡೂ' ಹೆಸರಿನಲ್ಲಿ ಭೂಮಿ ಕೈಬಿಟ್ಟಿದ್ದಾರೆ ಎಂದು ಎಚ್ಡಿಕೆ ಆರೋಪಿಸಿದ್ದಾರೆ.
ಶೇ.90 ರಷ್ಟು ಜನರು ಜಮೀನು ಮಾಲೀಕರಲ್ಲ
ಡಿ-ನೋಟಿಫಿಕೇಷನ್ ಮಾಡಿರುವ ಶೇ.90 ರಷ್ಟು ಜಮೀನಿನಲ್ಲಿ ಮೂಲ ಮಾಲೀಕರೇ ಇಲ್ಲ. ಶಾಸಕ ಗುರುಪಾದಪ್ಪ ನಾಗಮಾರಪಲ್ಲಿ ಸೇರಿದಂತೆ ರಾಜಕಾರಣಿಗಳು, ಪ್ರಭಾವಿ ಬಿಲ್ಡರ್ಗಳಿಗೆ ಡಿನೋಟಿಫೈ ಮಾಡಿಕೊಡಲಾಗಿದೆ. ಮೂಲ ಜಮೀನುದಾರರಿಂದ ಜಿಪಿಎ ಮಾಡಿಸಿಕೊಂಡವರ ಬಳಿ ಲಂಚ ಪಡೆದು ಡಿನೋಟಿಫಿಕೇಷನ್ ಮಾಡಿರುವುದು ಸ್ಪಷ್ಟವಾಗಿದೆ ಎಂದು ದೂರಿದ್ದಾರೆ.
ಯಾವುದೇ ನಿಯಮಗಳನ್ನು ಪಾಲಿಸಿಲ್ಲ
ಯಾವುದೇ ನಿಯಮಗಳನ್ನು ಪಾಲಿಸದೇ ಸಿಎಂ ಸಿದ್ದರಾಮಯ್ಯ ಅವರು ಡಿನೋಟಿಫೈ ಮಾಡಿದ್ದಾರೆ. ಬಿಡಿಎಯಿಂದ ಅನುಮೋದನೆ ಪಡೆಯದೇ ಇರುವ, ಡಿನೋಟಿಫಿಕೇಶನ್ ಸಮಿತಿಯ ಶಿಫಾರಸು ಇಲ್ಲದೇ ಇರುವ ಜಮೀನುಗಳನ್ನು ಕೈಬಿಡಲಾಗಿದೆ. ಸಚಿವ ಸಂಪುಟದ ಮುಂದೆ ತೀರ್ಮಾನವನ್ನೂ ತೆಗೆದುಕೊಳ್ಳದೆ ಕೇವಲ 'ರೀಡೂ' ಎಂಬ ಹೊಸ ವ್ಯಾಖ್ಯಾನದ ಅಡಿಯಲ್ಲಿ ಡಿನೋಟಿಫೈ ಮಾಡಿದ್ದಾರೆ ಎಂಬುದು ಎಚ್ಡಿಕೆ ಆರೋಪ.
ಮಾರ್ಗಸೂಚಿಗಳನ್ನು ಗಾಳಿಗೆ ತೂರಲಾಗಿದೆ
ಬಡಾವಣೆಯ ಅಂತಿಮ ಅಧಿಸೂಚನೆ ಹೊರಡಿಸಿದ ಬಳಿಕ ಕೆಲವರು ನ್ಯಾಯಾಲಯದ ಮೆಟ್ಟಿಲೇರಿದಾಗ ಅರ್ಜಿದಾರರ ಮನವಿ ಪುನರ್ ಆಲಿಸಿ, ಸ್ಥಳ ಭೇಟಿ ನೀಡಿ ಅರ್ಹತೆ ಇದ್ದಲ್ಲಿ ಭೂಸ್ವಾಧೀನದಿಂದ ಕೈಬಿಡಿ ಎಂದು ಕೋರ್ಟ್ ಸೂಚಿಸಿತ್ತು. ಮಾನದಂಡ ನಿಗದಿ ಮಾಡಿ ಎಂದು ಕೋರ್ಟ್ ಸೂಚಿಸಿದಾಗ ಆರು ಮಾರ್ಗಸೂಚಿಗಳನ್ನು ಬಿಡಿಎ ಸಿದ್ಧಪಡಿಸಿ ಕೋರ್ಟ್ಗೆ ಕೊಟ್ಟಿತ್ತು. ಆದರೆ, ಡಿನೋಟಿಫಿಕೇಶನ್ ಸಂದರ್ಭದಲ್ಲಿ ಇವುಗಳನ್ನು ಸರ್ಕಾರ ಪಾಲನೆ ಮಾಡಿಲ್ಲ.
ಅರ್ಕಾವತಿ ಕರ್ಮಕಾಂಡ, ಪುಸ್ತಕದಲ್ಲಿ ಏನಿದೆ?
'ಅರ್ಕಾವತಿ ಕರ್ಮಕಾಂಡ' ಪುಸ್ತಕದಲ್ಲಿ ಅರ್ಕಾವತಿ ಬಡಾವಣೆಗೆ ಸಂಬಂಧಿಸಿದಂತೆ 2001ರಿಂದ ಇದುವರೆಗೆ ಆದಂತಹ ಆದೇಶಗಳು, ಬಿಡಿಎ ಸಭೆ, ನಿರ್ಣಯ, ಅಧಿಕಾರಿಗಳ ಅಭಿಪ್ರಾಯ, ರೈತರ ರಿಟ್ ಅರ್ಜಿ, ಸರ್ಕಾರದ ಆದೇಶ, ಜಮೀನುಗಳ ಮೂಲ ಮಾಲೀಕರು ಸೇರಿದಂತೆ ಎಲ್ಲಾ ಮಾಹಿತಿಗಳನ್ನು ನೀಡಲಾಗಿದೆ.
ಜೆಡಿಎಸ್ ಶಾಸಕರ ವಿರೋಧವಿದೆ
ಹಿಂದಿನ ಬಿಜೆಪಿ ಸರ್ಕಾರದಲ್ಲಿ ಹಗರಣ ಬಯಲಿಗೆ ಎಳೆದು ಒಂದು ಸಮುದಾಯದ ವಿರೋಧ ಕಟ್ಟಿಕೊಂಡಿದ್ದೀರಿ, ಈಗ ಕಾಂಗ್ರೆಸ್ ಸರ್ಕಾರದಲ್ಲಿ ಅದೇ ರೀತಿ ಹಗರಣದ ದಾಖಲೆ ಬಿಡುಗಡೆ ಮಾಡಿ ಮತ್ತೂಂದು ಸಮುದಾಯದ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎಂದು ಜೆಡಿಎಸ್ ಶಾಸಕರು ಕುಮಾರಸ್ವಾಮಿ ಅವರಿಗೆ ತಿಳಿಸಿದ್ದರಂತೆ ಈ ಕುರಿತು ಎಚ್ಡಿಕೆ ಮಾಧ್ಯಮಗಳಿಗೂ ಮಾಹಿತಿ ನೀಡಿದರು.