ಮರಗಳಿಗೆ ಗಂಡಾಂತರ ತರಲಿದ್ದ ಮಸೂದೆ ಹಿಂತೆಗೆದುಕೊಂಡ ಸರಕಾರ
ಬೆಂಗಳೂರು, ಫೆಬ್ರವರಿ 22: ಮರಗಳ ಬುಡಕ್ಕೆ ಕೊಡಲಿಯೇಟು ನೀಡಲು ಸಜ್ಜಾಗಿದ್ದ ಸರಕಾರ ವೃಕ್ಷ ಪ್ರೇಮಿಗಳ ಹೋರಾಟಕ್ಕೆ ಕೊನೆಗೂ ಮಣಿದಿದೆ. 1976ರ ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆಗೆ ತರಲು ಹೊರಟಿದ್ದ ತಿದ್ದಪಡಿಯನ್ನು ಸರಕಾರ ಬುಧವಾರ ಕೈಬಿಟ್ಟಿದೆ.
1976ರ ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆಗೆ ತಿದ್ದುಪಡಿ ಮಾಡಿ 50 ಮರಗಳನ್ನು ಈ ಆಕ್ಟ್ ನಿಂದ ಹೊರಗಿಡಲು ಸರಕಾರ ಮುಂದಾಗಿತ್ತು. ಈ ಸಂಬಂಧ ತಿದ್ದುಪಡಿ ಮಸೂದೆಯನ್ನು ಫೆಬ್ರವರಿ 16ರಂದು ವಿಧಾನಸಭೆಯಲ್ಲಿ ಮಂಡಿಸಿತ್ತು. ಇದೀಗ ಈ ಮಸೂದೆಯನ್ನು ಹಿಂಪಡೆದಿದೆ.
ಬೆಂಗಳೂರಿನ ಅಪರೂಪದ ಮರಗಳನ್ನು ಉಳಿಸಲು ರಾಹುಲ್ ಗೆ ಪತ್ರ
ಒಂದೊಮ್ಮೆ ಈ ಮಸೂದೆ ಅಂಗೀಕಾರ ಪಡೆದುಕೊಂಡಲ್ಲಿ 50 ಜಾತಿಯ ಮರಗಳನ್ನು ಕಡಿಯಲು ಸಾರ್ವಜನಿಕರ ಹಾಗೂ ಇಲಾಖೆಗಳ ಅನುಮತಿ ಬೇಕಾಗಿರಲ್ಲ. ಇದರಲ್ಲಿ ಗುಲ್ ಮೊಹರ್, ಇಂಡಿಯನ್ ಕೋರಲ್, ರೈನ್ ಟ್ರೀ ಮತ್ತು ಸೋಪ್ನಟ್ ನಂಥ ಮರಗಳನ್ನು ಸೇರಿಸಲಾಗಿತ್ತು.
ವಿಶೇಷ ಎಂದರೆ ಇದೇ ರೀತಿಯ ಮರಗಳು ನಮ್ಮ ಬೆಂಗಳೂರಿನ ರಸ್ತೆಗಳ ಬದಿಯಲ್ಲಿ ಹೆಚ್ಚಾಗಿವೆ. ಒಂದೊಮ್ಮೆ ಕಾನೂನು ಜಾರಿಗೆ ಬಂದರೆ ರಸ್ತೆಯ ಅಂಚಿನಲ್ಲಿರುವ ಮರಗಳೆಲ್ಲಾ ಧರೆಗುರುಳುವ ಅಪಾಯವೂ ಇತ್ತು.
ಸುಂದರ ಬೆಂಗಳೂರು ತನ್ನ ಉದ್ಯಾನ ನಗರಿ ಎಂಬ ಹೆಸರನ್ನು ಕಳಲೆದುಕೊಳ್ಳುವ ಸಾಧ್ಯತೆಯೂ ಇತ್ತು. ಹೀಗಾಗಿ ಈ ಮಸೂದೆ ವಿರುದ್ಧ ವೃಕ್ಷ ಪ್ರೇಮಿಗಳು ತಿರುಗಿ ಬಿದ್ದಿದ್ದರು.
ಬೊಮ್ಮನಹಳ್ಳಿಯಲ್ಲಿ ನೂರಾರು ಮರಗಳ ಸ್ಥಳಾಂತರ : ಅನಂತಕುಮಾರ್
"ತಮ್ಮ ಜಮೀನಿನಲ್ಲಿರುವ ಮರಗಳನ್ನು ಕಡಿಯಲು ರೈತರಿಗೆ ಅನುಮತಿ ನೀಡಲು ಈ ಕಾನೂನು ಜಾರಿಗೆ ತರಲು ಹೊರಟಿದ್ದೆವು. ಆದರೆ ಇದು ದುರ್ಬಳಕೆಯಾಗುವ ಸಾಧ್ಯತೆ ಇರುವುದರಿಂದ ಇದನ್ನು ಹಿಂತೆಗೆದುಕೊಂಡಿದ್ದೇವೆ," ಎಂದು ಕಾನೂನು ಸಚಿವ ಟಿಬಿ ಜಯಚಂದ್ರ ಹೇಳಿದ್ದಾರೆ.
ತಿದ್ದುಪಡಿ ಮಸೂದೆಗೆ ಭಾರತೀಯ ವಿಜ್ಞಾನ ಸಂಸ್ಥೆ ವಿರೋಧ ವ್ಯಕ್ತಪಡಿಸಿತ್ತು. ಇದರ ವಿರುದ್ಧ ಝಾತ್ಕಾ ಡಾಟ್ ಆರ್ಗ್ (Jhatkaa.org) ಹೋರಾಟ ಆರಂಭಿಸಿತ್ತು. ವೃಕ್ಷ ಸಂರಕ್ಷಕರಾದ ವಿಜಯ್ ನಿಶಾಂತ್, ಲಿಂಗರಾಜು ನಿಡುವನಿ ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿಯವರನ್ನು ಸಂಪರ್ಕಿಸಿ ಇದರ ವಿರುದ್ಧ ಧ್ವನಿ ಎತ್ತುವಂತೆಯೂ ಒತ್ತಾಯಿಸಿದ್ದರು. ಮಾಜಿ ಹೈಕೋರ್ಟ್ ನ್ಯಾಯಮೂರ್ತಿಗಳಾದ ಎಂ.ಎಫ್ ಸಾಲ್ದಾನಾ ಕೂಡ ಮಸೂದೆ ವಿರುದ್ಧ ಧ್ವನಿ ಎತ್ತಿದ್ದರು.
ಇದೀಗ ಎಲ್ಲರ ಹೋರಾಟದ ಫಲ ಎಂಬಂತೆ ಸರಕಾರ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ.